ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಲ್ಲದೆ, ಬಿ.ಎಸ್. ಯಡಿಯೂರಪ್ಪನವರ ಪುತ್ರ ವ್ಯಾಮೋಹವನ್ನು ಟೀಕಿಸಿದ್ದಾರೆ.

ದಾವಣಗೆರೆ: ಹರಿಹರ, ಕೂಡಲಸಂಗಮ ಪಂಚಮಸಾಲಿ ಪೀಠದ ವಿವಾದದ ಕುರಿತು ದಾವಣಗೆರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಪಂಚಮಸಾಲಿಯ ಎರಡೂ ಟ್ರಸ್ಟ್‌ಗಳಲ್ಲಿ ಮಹಾನ್ ಕಳ್ಳರಿದ್ದಾರೆ. ನಮ್ಮದೇನಿದ್ರೂ ಪಂಚಮಸಾಲಿ ಸಮೇತ ಎಲ್ಲ ವರ್ಗದವರಿಗೆ ಮೀಸಲಾತಿಗಾಗಿ ಹೋರಾಟ. ಹರಿಹರ ಟ್ರಸ್ಟ್ ಸಹ ಕಳ್ಳರ ಗುಂಪು. ಚಂದ್ರಶೇಖರ ಪೂಜಾರ್ ನಂತಹ ಕಳ್ಳರಿದ್ದಾರೆ, ಇವನೇ ಲೂಟಿಕೋರ, ಸ್ವಾಮಿನೂ ಲೂಟಿಕೋರ, ಇವನೇನೂ ಸಾಚಾ ಅಲ್ಲ. ನಾನೇನೂ ನಂಬಲ್ಲ ಇವನ ಕಾಲು ಬೀಳಲ್ಲ ಎಂದು ವಚನಾನಂದ ಸ್ಚಾಮೀಜಿ ವಿರುದ್ಧ ಶಾಸಕ ಯತ್ನಾಳ್ ಕಿಡಿಕಾರಿದರು.

ಹತ್ತು ಕೋಟಿ ಲೂಟಿಯ ಗಂಭೀರ ಆರೋಪ

ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್‌ನಲ್ಲೂ ಕಳ್ಳರಿದ್ದು, ಮಠದ ಆಸ್ತಿ ಸ್ವಂತ ಆಸ್ತಿ ಮಾಡಿದ್ದಾರೆ. ಎರಡೂ ಟ್ರಸ್ಟ್‌ಗಳನ್ನೂ ನಾನು ನಂಬುವುದಿಲ್ಲ. ಸ್ವಾಮೀಜಿ ಟ್ರಸ್ಟ್ ಎರಡೂ ಸಮಾಜಕ್ಕೆ ಬೇಕಿಲ್ಲ, ಲೂಟಿ ಮಾಡಿದ್ದಾರೆ. ಹರಿಹರ ಪೀಠಕ್ಕೆ ಮೊದಲು ಹೋಗುತ್ತಿದ್ದೆ, ಎಲ್ಲರೂ ಕಳ್ಳರಿದ್ದಾರೆ ಅಂತಾ ಹೋಗೋದು ಬಿಟ್ಟೆ. ಪಾಪ ಮುಗ್ದ ಜನಕ್ಕೆ ಇವರು ಕಳ್ಳರು ಅಂತಾ ಗೊತ್ತಿಲ್ಲ, ಪಿಡಿಒ ಸಹಿ ಪೋರ್ಜರಿ ಮಾಡಿ ಹತ್ತು ಕೋಟಿ ಲೂಟಿ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್-ಬಿಜೆಪಿಯಿಂದ ಹಣ ಸಂಗ್ರಹ

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಬೇಕು ಅಂದಾಗ ಅದು ಬರದ ಹಾಗೇ ನೋಡಿಕೊಂಡರು ಎಂದು ಆರೋಪಿಸಿದ ಶಾಸಕ ಯತ್ನಾಳ್, ಹರಿಹರ ಸ್ವಾಮೀಜಿ ವೋಟ್ ಕೊಡಿಸಬಹುದು ಅಂತಾ ಹೆಚ್.ಎಸ್.ಶಿವಶಂಕರ್ ಬೆನ್ನು ಹತ್ತಿದ್ದಾನೆ. ಹರಿಹರ ಸ್ವಾಮೀಜಿಯಿಂದ ಒಂದ್ ವೋಟೂ ಬೀಳಲ್ಲ. ಚುನಾವಣೆ ವೇಳೆ ಬ್ಲ್ಯಾಕ್ ಮೇಲ್ ಮಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಬಳಿ ಹಣ ಎತ್ತಿದ್ದಾರೆ. ಟ್ರಸ್ಟ್‌ನಲ್ಲಿ ಯಾವುದೇ ಪಕ್ಷದ ಸದಸ್ಯತ್ವ ಇರದವರು ಇರಬೇಕು ಎಂದು ಯತ್ನಾಳ್ ಆಗ್ರಹಿಸಿದರು.

ಹೊಗಳಿಕೊಳ್ಳಲು ಮಾಡಿಕೊಳ್ಳುವ ಕಾರ್ಯಕ್ರಮ

ಮುಂದುವರಿದ ಮಾತನಾಡಿದ ಶಾಸಕ ಯತ್ನಾಳ್, ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್‌ವೈ ಅಭಿಮಾನೋತ್ಸವ ಆರ್.ಅಶೋಕ್ ಹೇಳಿದ ಹಾಗೇ ಇದೊಂದು ಕುಟುಂಬದ ಕಾರ್ಯಕ್ರಮವಾಗಿದೆ. ತಮ್ಮನ್ನು ತಾವು ಹೊಗಳಿಕೊಳ್ಳಲು ಕಾರ್ಯಕ್ರಮ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ತಂದೆ ಹೆಸರು ತಗೆದ್ರೆ ರೋಮಾಂಚನ ಆಗುತ್ತೆ ಅಂತಾರೆ. ರೋಮಾಂಚನ ಆಗುತ್ತೋ ರೋಮ್ಯಾನ್ಸ್ ಆಗುತ್ತೋ ಗೊತ್ತಿಲ್ಲ. ಇವನ ನೇತೃತ್ವದಲ್ಲಿ ಹೋದ್ರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.

ತಮ್ಮ ತಂದೆಯ ಕಾರ್ಯಕ್ರಮಕ್ಕೆ ಅವನೇ ಗುದ್ದಲಿ ಹೊಡೀತಾನೆ. ತಂದೆ ಹೆಸರು ಹೇಳಿದ್ರೆ ರೋಮಾಂಚನ ಆಗುತ್ತೆ ಅಂತಾನೆ. ಕಬಿನಿ ಜಲಾಶಯದಲ್ಲಿ ಆಗಿದ್ದ ರೋಮ್ಯಾನ್ಸ್ ಆಯ್ತೋ, ಬೆಳಗಾವಿ ಸಭೆಯ ರೋಮ್ಯಾನ್ಸ್ ಆಯ್ತೋ ಗೊತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ ಹೈಡ್ರಾಮಾ, ಸ್ಟ್ರಾಂಗ್ ರೂಮ್‌ನಲ್ಲಿ ಟ್ರಂಕ್‌ಗಳು ಓಪನ್ ಆಗಿ ಗೊಂದಲ

ರೇಣುಕಾಚಾರ್ಯ ಗೆ ಮೊದಲು ಆತನ ಕ್ಷೇತ್ರದಲ್ಲಿ ಆರಿಸಿ ಬರೋಕೆ ಹೇಳಿ

ಅಪ್ಪ ಮಕ್ಕಳು ಯಾರನ್ನು ವಿಶ್ವಾಸಕ್ಕೆ ತಗೆದುಕೊಂಡಿದ್ದಾರೆ. ಒಬ್ಬ ಮಗ ರೋಮಾಂಚನ ಆಗುತ್ತೆ ಅಂತಾನೆ, ಮತ್ತೊಬ್ಬ ಮಗ ಕಾರುಗಳಿಗೆ ಸ್ಟಿಕ್ಕರ್ ಅಂಟಿಸಿ ಓಡಾಡುತ್ತಾನೆ. ಬಿಎಸ್‌ವೈ ಪುತ್ರ ವ್ಯಾಮೋಹಕ್ಕೂ ಮುನ್ನ ನಾನು ಅವರ ಅಭಿಮಾನಿ ಆಗಿದ್ದೆ. ಅಲ್ಲಿಯವರೆಗೆ ಯಡಿಯೂರಪ್ಪ ಒಳ್ಳೆಯವರು ಇದ್ದರು. ಪುತ್ರ ವ್ಯಾಮೋಹ ಬಳಿಕ ಕೌರವನ ತಂದೆ ಧೃತರಾಷ್ಟ್ರ ರೀತಿ ಆಗಿದ್ದಾರೆ ಎಂದರು.

ಇದನ್ನೂ ಓದಿ: ಎಣ್ಣೆ ಕುಡಿದು ಸದನಕ್ಕೆ ಬರ್ತಾನೆ ಪಂಜಾಬ್‌ ಸಿಎಂ! ಆಲ್ಕೋಹಾಲ್‌ ಟೆಸ್ಟ್ ಮಾಡಿಸಲು ವಿಧಾನಸಭೇಲಿ ಪ್ರತಿಪಕ್ಷ ಸದಸ್ಯರಿಂದ ಬಿಗಿಪಟ್ಟು!