ಚಿಕ್ಕಮಗಳೂರಿನ ಮದುವೆಗೆ ಬಂದಿದ್ದ ಪ್ರಿಯಾಂಕ ಎಂಬ ಮಹಿಳೆ ಬೇಲೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿದ್ದ ಆಕೆಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಒಳ ಉಡುಪು ಹಾಗೂ ಬ್ಯಾಗ್ ಪತ್ತೆಯಾಗಿದೆ. ಪೊಲೀಸರ ವಿಳಂಬ ಧೋರಣೆಗೆ ಮಹಿಳೆ ಬಲಿ?

ಹಾಸನ (ಫೆ.14): ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ಕಣ್ಮರೆಯಾದ ಆಘಾತಕಾರಿ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ನಡೆದಿದ್ದು , ಸ್ಥಳದಲ್ಲಿ ಅವರ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದಲ್ಲಿ ಪೊಲೀಸರ ವಿಳಂಬ ಧೋರಣೆಯೇ ಮಹಿಳೆಯ ಪ್ರಾಣಕ್ಕೆ ಕುತ್ತು ತಂದಿದೆಯೇ ಎಂದು ಕುಟುಂಬಸ್ಥರು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಟುಂಬದೊಂದಿಗೆ ಮದುವೆಗೆ ಬಂದಿದ್ದ ಪ್ರಿಯಾಂಕ

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕ (29) ಎಂಬುವವರು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದರು. ಫೆಬ್ರವರಿ 12 ರಂದು ರಾತ್ರಿ 7-30 ರ ಸುಮಾರಿಗೆ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ ತಮಗೆ ಯಾರೋ ಪರಿಚಯದವರು ಸಿಕ್ಕಿರುವುದಾಗಿ ತಿಳಿಸಿದ್ದರು. ಆ ಮಾತು ಮುಗಿಯುತ್ತಿದ್ದಂತೆ ಫೋನ್ ಕಟ್ ಆಗಿದ್ದು, ಅನಂತರ ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ.ಕೊನೆಗೆ ಆಕೆ ಬೇಲೂರು ಬಸ್ ನಿಲ್ದಾಣದಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಪ್ರಿಯಾಂಕ ಧರಿಸಿದ್ದ 30 ಲಕ್ಷ ಮೌಲ್ಯದ ಚಿನ್ನಾಭರಣದ ಮೇಲೆ ಖದೀಮರ ಕಣ್ಣು?

ನಾಪತ್ತೆಯಾದ ಪ್ರಿಯಾಂಕ ಅವರ ಮೈಮೇಲೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು ಎನ್ನಲಾಗಿದೆ. ಮದುವೆ ಸಮಾರಂಭಕ್ಕೆಂದು ಭಾರೀ ಪ್ರಮಾಣದ ಒಡವೆ ಧರಿಸಿದ್ದೇ ಪ್ರಿಯಾಂಕ ಪ್ರಾಣಕ್ಕೆ ಕಂಟಕವಾಯಿತೇ ಎಂಬ ಪ್ರಶ್ನೆ ಕಾಡುತ್ತಿದೆ. ಒಡವೆಗಾಗಿ ದುಷ್ಕರ್ಮಿಗಳು ಮಹಿಳೆಯನ್ನ ಅಪಹರಿಸಿ, ಅತ್ಯಾ೧ಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಗಂಭೀರ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಸಂಬಂಧಿಕರ ಆಕ್ರೋಶ

ಪ್ರಿಯಾಂಕ ನಾಪತ್ತೆಯಾದ ತಕ್ಷಣ ಅವರ ಕುಟುಂಬ ಸದಸ್ಯರು ಅರೆಹಳ್ಳಿ ಹಾಗೂ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲು ಅಲೆದಾಡಿದ್ದಾರೆ. ಆದರೆ ಪೊಲೀಸರು ತಕ್ಷಣ ಸ್ಪಂದಿಸದೆ ಕಾಲಹರಣ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಕುಟುಂಬಸ್ಥರು ಹೇಳುವ ಪ್ರಕಾರ, 'ನಿನ್ನೆಯೇ ಪೊಲೀಸರು ದೂರು ಪಡೆದು ತನಿಖೆ ಆರಂಭಿಸಿದ್ದರೆ ಪ್ರಿಯಾಂಕ ಬದುಕುತ್ತಿದ್ದರೇನೋ' ಎಂದು ಸಂಬಂಧಿಕರು ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಹಾಗೂ ಫಿಂಗರ್‌ಪ್ರಿಂಟ್ ತಜ್ಞರ ತಂಡ ಧಾವಿಸಿದೆ.

ಸ್ಥಳದಲ್ಲಿ ಬಟ್ಟೆ, ಒಳ ಉಡುಪು,ಬ್ಯಾಗ್ ಪತ್ತೆ

ವಿಚಿತ್ರವೆಂದರೆ, ನಿನ್ನೆ ಕುಟುಂಬ ಸದಸ್ಯರು ಹುಡುಕಾಟ ನಡೆಸಿದಾಗ ಸ್ಥಳದಲ್ಲಿ ಯಾವುದೇ ಬಟ್ಟೆಗಳು ಇರಲಿಲ್ಲ. ಆದರೆ ಇಂದು ಬೆಳಿಗ್ಗೆ ನೋಡಿದಾಗ ಕಲ್ಕೆರೆ ಬಳಿ ಮಹಿಳೆಯ ಒಳ ಉಡುಪು, ಬ್ಯಾಗ್ ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಇದು ಪ್ರಕರಣದ ಭೀಕರತೆಯನ್ನು ಹೆಚ್ಚಿಸಿದ್ದು, ಪೊಲೀಸರು ಈಗ ತನಿಖೆ ಚುರುಕುಗೊಳಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

YouTube video player