Bengaluru: ಅಮಾನತುಗೊಂಡ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ಸೋದರಿ ಮನೆಗೆ ಬೆಂಕಿ
ನಗರದ ಲಾಲ್ಬಾಗ್ 4ನೇ ಮುಖ್ಯರಸ್ತೆಯ ಕೆ.ಎಸ್.ಗಾರ್ಡನ್ನಲ್ಲಿರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ ಯೂಸುಫ್ ಷರೀಫ್ ಬಾಬು (ಕೆಜಿಎಫ್ ಬಾಬು) ಅವರ ಸೋದರಿ ಮನೆಗೆ ಶುಕ್ರವಾರ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಗಳೂರು (ಫೆ.05): ನಗರದ ಲಾಲ್ಬಾಗ್ 4ನೇ ಮುಖ್ಯರಸ್ತೆಯ ಕೆ.ಎಸ್.ಗಾರ್ಡನ್ನಲ್ಲಿರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ ಯೂಸುಫ್ ಷರೀಫ್ ಬಾಬು (ಕೆಜಿಎಫ್ ಬಾಬು) ಅವರ ಸೋದರಿ ಮನೆಗೆ ಶುಕ್ರವಾರ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಸಂಬಂಧ ಬಾಬು ಸೋದರಿ ಶಾಹೀನ ತಾಜ್ ದೂರು ಆಧರಿಸಿ ಯುವರಾಜ್ ವಿರುದ್ಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೆ.ಎಸ್.ಗಾರ್ಡನ್ನಲ್ಲಿ ಕೆಜಿಎಫ್ ಬಾಬು ಅವರಿಗೆ ಸೇರಿದ ಮೂರು ಅಂತಸ್ತಿನ ವಸತಿ ಕಟ್ಟಡ ಇದ್ದು, ಇದರಲ್ಲಿ ಕೆಳಹಂತದಲ್ಲಿ ಅವರ ಸೋದರಿ ಶಾಹೀನ ತಾಜ್ ಹಾಗೂ ಮೇಲಿನ ಅಂತಸ್ತಿನಲ್ಲಿ ಅವರ ಸೋದರ ನೆಲೆಸಿದ್ದಾರೆ. ಬಾಬು ಅವರ ಸೋದರಿ ಮನೆ ಬಳಿಗೆ ರಾತ್ರಿ 2.30 ಸುಮಾರಿಗೆ ಬಂದಿರುವ ಕಿಡಿಗೇಡಿಗಳು, ಮೆಟ್ಟಿಲುಗಳ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್ ನೇಮಕ: ಮನ್ಸುಖ್, ಅಣ್ಣಾಮಲೈಗೂ ಹೊಣೆ
ಈ ವೇಳೆ ಮನೆಯಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಶಾಹೀನ ತಾಜ್ ಇದ್ದರು. ದಟ್ಟಾಹೊಗೆಯಿಂದ ನಿದ್ರೆಯಿಂದ ಎಚ್ಚರಗೊಂಡ ಶಾಹೀನ ತಾಜ್, ಕೂಡಲೇ ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಮೊದಲ ಮಹಡಿಯ ಚಪ್ಪಲಿ ಸ್ಟ್ಯಾಂಡ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಾಶಾತ್ ಯಾವುದೇ ರೀತಿಯ ಪ್ರಾಣಹಾನಿ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಬಾಬು ವಿರುದ್ಧ ಪ್ರತಿದೂರು: ತನ್ನ ಮೇಲೆ ಸುಳ್ಳು ಅರೋಪ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕೆಜಿಎಫ್ ಬಾಬು ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್ ಪ್ರತಿ ದೂರು ದಾಖಲಿಸಿದ್ದಾರೆ.
ಚುನಾವಣೆ ಸ್ಪರ್ಧಿಸುತ್ತಿರುವುದಕ್ಕೆ ತೊಂದರೆ ಕೊಡುತ್ತಿದ್ದಾರೆ: ಮಾಜಿ ಶಾಸಕ ಆರ್.ವಿ. ದೇವರಾಜ್ ಪುತ್ರ ಆರ್.ವಿ. ಯುವರಾಜ್ ಇತ್ತೀಚೆಗೆ ನಮ್ಮ ಸಹೋದರಿಗೆ ಧಮ್ಕಿ ಹಾಕಿದ್ದರು. ಇದೀಗ ರಾತ್ರೋರಾತ್ರಿ ಮನೆಗೆ ಬೆಂಕಿ ಹಚ್ಚಿದ್ದಾರೆ. 27 ವರ್ಷಗಳಿಂದ ಆಗದ ಘಟನೆ ನಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದಾಗಲೇ ಯಾಕಾಯಿತು? ಎಂದು ಕೆ.ಜಿ.ಎಫ್. ಬಾಬು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಕೆ. ಗಾರ್ಡನ್ನಲ್ಲಿದ್ದ ನಮ್ಮ ಹಳೆಯ ಮನೆಯಲ್ಲಿ ಸಹೋದರಿ ವಾಸವಿದ್ದರು. ಇತ್ತೀಚೆಗೆ ಯುವರಾಜ್ ಬಂದು ನಿಮ್ಮ ಅಣ್ಣನಿಗೆ ಹೇಳಿ ನಮ್ಮ ತಂದೆ ಇತಿಹಾಸ ಗೊತ್ತಲ್ಲವೇ? ಇವೆಲ್ಲಾ ಯಾಕೆ ಬೇಕು ಎಂದು ಧಮ್ಕಿ ಹಾಕಿದ್ದರು.
ನಾನು ಬಿಬಿಎಂಪಿ ಸದಸ್ಯನಾಗಿದ್ದಾಗ ನಿಮಗೆ ಏನೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿ ಹೊರಟು ಹೋಗಿದ್ದರು. ಇದೀಗ ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಯುವರಾಜ್ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಕ್ಷೇತ್ರದಲ್ಲಿನ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಿದ್ದೇನೆ. ಹಣ ಸಹಾಯ ಮಾಡುತ್ತಿದ್ದೇನೆ. ಇವೆಲ್ಲಾ ಕೆಲಸಗಳನ್ನು ನೋಡಿ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಹೀಗಾಗಿ ನನ್ನ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.
ಸುಳ್ಳು ಹೇಳಿಕೊಂಡು ಬಾಬು ರಾಜಕಾರಣ: ಕೆಜಿಎಫ್ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದುವರೆಗೆ ನನ್ನ ತಂದೆಯವರ ಬಗ್ಗೆ ಅಪ ಪ್ರಚಾರದ ಹೇಳಿಕೆ ನೀಡುತ್ತಿದ್ದರು. ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಬಳಿಕ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಆರ್.ವಿ. ದೇವರಾಜ್ ಪುತ್ರ ಹಾಗೂ ಪಾಲಿಕೆ ಮಾಜಿ ಸದಸ್ಯ ಆರ್.ವಿ. ಯುವರಾಜ್ ಹೇಳಿದ್ದಾರೆ. ಸಂಪಂಗಿರಾಮನಗರದ ಕೆ.ಎಸ್. ಗಾರ್ಡನ್ನಲ್ಲಿರುವ ತಮ್ಮ ಸಹೋದರಿ ಮನೆಗೆ ಯುವರಾಜ್ ಬೆಂಕಿ ಹಚ್ಚಿದ್ದಾರೆ ಎಂದು ಕೆಜಿಎಫ್ ಬಾಬು ಆರೋಪಿಸಿರುವ ಹಿನ್ನೆಲೆಯಲ್ಲಿ ಯುವರಾಜ್ ಅವರು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.
ಶೇ.50ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ: 2 ದಿನದಲ್ಲಿ 14.6 ಕೋಟಿ ಟ್ರಾಫಿಕ್ ದಂಡ ಸಂಗ್ರಹ!
ಈ ವೇಳೆ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗೆ ವಿನಾಕಾರಣ ನಮ್ಮ ಹೆಸರು ಎಳೆದು ತರುತ್ತಿದ್ದಾರೆ. ನಮಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಬೇಕಿದ್ದರೆ ಟವರ್ ಡಂಪ್ ಲೊಕೇಷನ್ ಬಳಸಿ ತನಿಖೆ ನಡೆಸಲಿ ಎಂದು ಹೇಳಿದರು. ಕ್ಷೇತ್ರದ ಜನರಿಗೆ ನೂರಾರು ಸೇವೆಯ ಭರವಸೆ ನೀಡುತ್ತಿದ್ದಾರೆ. ಮಾಡಲಿ ಆದರೆ ಕೆಜಿಎಫ್ ಬಾಬು ಅವರ ಪಕ್ಕದಲ್ಲಿರುವವರೇ ಅವರನ್ನು ಮುಳುಗಿಸಲಿದ್ದಾರೆ. .1749 ಕೋಟಿ ಒಡೆಯರಾಗಿರುವ ಬಾಬು ಅವರಿಗೆ ಇಂತಹ ಸುಳ್ಳು ಆರೋಪಗಳು ಗೌರವಕ್ಕೆ ತರುವುದಿಲ್ಲ. ಇನ್ನಾದರೂ ಅವರು ಬದಲಾಗಬೇಕು ಎಂದು ಹೇಳಿದರು.