ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಹಾವೇರಿ (ಜ.27) : ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಭಾರತ ಗಣರಾಜ್ಯೋತ್ಸವ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಸಂದೇಶ ನೀಡಿದ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರು ರಚಿಸಿರುವ ಭಾರತ ಸಂವಿಧಾನದ ಆಶಯದಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ನಾವೆಲ್ಲರೂ ಅಭಿವೃದ್ಧಿಯೊಂದಿಗೆ, ಜಾತ್ಯತೀತ, ಧರ್ಮಾತೀತ, ಭ್ರಾತೃತ್ವ ನೆಲೆಯಲ್ಲಿ ತಾಯ್ನಾಡಾದ ಕರ್ನಾಟಕ ರಾಜ್ಯವನ್ನು ಹಾಗೂ ಭಾರತ ದೇಶವನ್ನು ಸಶಕ್ತ, ಸದೃಢವಾಗಿ ರೂಪಿಸಲು ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಕನ್ನಡದ ಒಂದಿಂಚು ನೆಲವನ್ನೂಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ; ಶಿವರಾಮ್ ಹೆಬ್ಬಾರ್

ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ

ರಾಜ್ಯದ ಅಭಿವೃದ್ಧಿಯ ಮಾದರಿಯಲ್ಲಿ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಮಹಾಪರ್ವವೇ ಜರುಗಿದೆ. ಕೊಟ್ಟಮಾತಿನಂತೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ತರಗತಿಗಳು ಆರಂಭಗೊಂಡಿವೆ. ವೈದ್ಯಕೀಯ ಕಾಲೇಜ್‌ ಕಟ್ಟಡ ಕಾಮಗಾರಿ ತ್ವರಿತವಾಗಿ ಸಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಮೆಗಾ ಡೈರಿಗೆ ಚಾಲನೆ ನೀಡಲಾಗಿದೆ. ಟ್ರೆಟ್ರಾಪ್ಯಾಕ್‌ ಘಟಕ ಹಾಗೂ ಜವಳಿ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಾವೇರಿ ವಿಶಿಷ್ಟವಿಶ್ವವಿದ್ಯಾಲಯ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಗಾಂಧಿ ಭವನ, ವಿಜ್ಞಾನ ಭವನ, ನೀರಾವರಿ ಯೋಜನೆಗಳು ಉದ್ಘಾಟನೆ ಸಿದ್ಧಗೊಂಡಿವೆ. ವಿವಿಧ ಕಟ್ಟಡಗಳು, ರಸ್ತೆಗಳ ಕಾಮಗಾರಿಗಳು, ವಿವಿಧ ಯೋಜನೆಗಳ ಅನುಷ್ಠಾನ ತೀವ್ರಗತಿಯಲ್ಲಿ ಸಾಗಿವೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಿಂದ ಯಶಸ್ವಿನಿ ಯೋಜನೆ ಪುನಃ ಆರಂಭಿಸಲಾಗಿದ್ದು, ಜಿಲ್ಲೆಯಲ್ಲಿ 79,839 ಜನ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಜಲಜೀವನ್‌ ಮಿಷನ್‌ ಯೋಜನೆಯಡಿ 726 ಗ್ರಾಮಗಳಿಗೆ ಮನೆ ಮನೆಗೆ ನೀರು ಪೂರೈಸಲು . 651.43 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 324 ಕಾಮಗಾರಿಗಳು ಮುಕ್ತಾಯಗೊಂಡಿವೆ. 245 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳು ವಿವಿಧ ಪ್ರಕ್ರಿಯೆಗಳಲ್ಲಿವೆ. ಈವರೆಗೆ . 252 ಕೋಟಿ ವೆಚ್ಚ ಮಾಡಲಾಗಿದೆ. ತಡಸ, ಆಣೂರು, ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ 452 ಗ್ರಾಮಗಳಿಗೆ . 1425 ಕೋಟಿ ಯೋಜನೆ ರೂಪಿಸಲಾಗಿದೆ.

ಸನ್ಮಾನ

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಪೊಲೀಸ್‌, ಹೊಮ್‌ ಗಾರ್ಡ್‌, ಅಬಕಾರಿ, ಎನ್‌ಎಸ್‌ಎಸ್‌, ಎನ್‌.ಸಿ.ಸಿ, ಸ್ಕೌಟ್ಸ್‌ ಮತ್ತು ಗೈಡ್‌್ಸ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಹದಿನಾಲ್ಕು ತಂಡಗಳು ಆಕರ್ಷಕ ಪಥಸಂಚಲನ ನಡೆಸಿದರು.

ಮಕ್ಕಳಿಂದ ನೃತ್ಯ:

ಮುನ್ಸಿಪಲ್‌ ಹೈಸ್ಕೂಲ್‌, ಜೆ.ಪಿ. ರೋಟರಿ, ಎಲ್‌.ಇ.ಎಂ.ಎಸ್‌ ಹಾಗೂ ಸೆಂಟ್‌ಆ್ಯನ್ಸ್‌ ಪೌಢಶಾಲೆಯ ತಲಾ ಇನ್ನೂರು ಮಕ್ಕಳು ವಿವಿಧ ದೇಶ ಭಕ್ತಿಗೀತೆಗಳಿಗೆ ನಾಲ್ಕು ತಂಡಗಳಾಗಿ ಆಕರ್ಷಕ ನೃತ್ಯ ಮಾಡಿದರು.

Karwar: ಇಲಿ ಬಿದ್ದ ಸಾಂಬಾರನ್ನೇ ಬಡಿಸಿದ ಅಡುಗೆ ಸಹಾಯಕರು, ಶಾಲಾ ಬಿಸಿಯೂಟ ತಿಂದು ವಿದ್ಯಾರ್ಥಿಗಳು ಅಸ್ವಸ್ಥ

ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ, ಜಿಲ್ಲಾಧಿಕಾರಿ ರಘುನಂದನ್‌ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮದ್‌ ರೋಷನ್‌, ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರಿ ಇತರರು ಭಾಗವಹಿಸಿದ್ದರು.