*   ಹೈಕಮಾಂಡ್‌ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುತ್ತದೆ*  ‘ವಿನಯ ಸಾಮರಸ್ಯ’ ಶೀಘ್ರ ಜಾರಿ*  ಸಾಮಾನ್ಯ ಕಾರ್ಯಕರ್ತೆಗೆ ಟಿಕೆಟ್‌: ಆಚಾರ್‌ 

ಕೊಪ್ಪಳ(ಮೇ.25): ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂದು ಊಹಿಸಲು ಆಗುವುದಿಲ್ಲ. ಆದರೆ, ನಿಜವಾಗಿಯೂ ಅರ್ಹರನ್ನು ಗುರುತಿಸಿ ಟಿಕೆಟ್‌ ನೀಡುವುದು ಸಂಪ್ರದಾಯ. ಕೂಲಿ ಮಾಡುತ್ತಿದ್ದ ನನ್ನನ್ನೇ ಮೂರು ಬಾರಿ ಮಂತ್ರಿ ಮಾಡಿದ್ದು ಬಿಜೆಪಿ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಲತಾ ನಾಯಕ್‌ ಅವರಿಗೆ ಎಂಎಲ್‌ಸಿ ಟಿಕೆಟ್‌ ನೀಡಿರುವುದರಿಂದ ಅವರು ಸಹ ಚಿಂತಕರ ಚಾವಡಿಗೆ ಆಯ್ಕೆಯಾಗಲಿದ್ದಾರೆ ಎಂದರು.

Add Asianetnews Kannada as a Preferred SourcegooglePreferred

ಸಂಪುಟ ಪುನರ್‌ ರಚನೆ ಹಾಗೂ ವಿಸ್ತರಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಪರಮೋಚ್ಛ ಅಧಿಕಾರವಾಗಿದೆ. ಅವರು ಯಾವಾಗ ಬೇಕಾದರೂ ಮಾಡಬಹುದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದರು.
ಸಿಎಂ ಬದಲಾವಣೆ ಕುರಿತು ಯಾರು ಹೇಳುತ್ತಿದ್ದಾರೋ ಗೊತ್ತಿಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪಠ್ಯಪುಸ್ತಕ ಕುರಿತು ವಿನಾಕಾರಣ ಗೊಂದಲ ಮೂಡಿಸಲಾಗುತ್ತದೆ. ಕಾಂಗ್ರೆಸ್‌ ನಾಯಕರು ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಇನ್ನೂ ಪಠ್ಯಪುಸ್ತಕಗಳು ಮುದ್ರಣವಾಗಿಯೇ ಇಲ್ಲ. ಹೆಡಗೇವಾರ ಅವರ ಕುರಿತು ಪಠ್ಯದಲ್ಲಿ ಸೇರಿಸಿದ್ದಕ್ಕೆ ವಿರೋಧ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಪಕ್ಷದ ನಾಯಕರು ಆರ್‌ಎಸ್‌ಎಸ್‌ ಮೆಚ್ಚಿಕೊಂಡಿರುವ ಉದಾಹರಣೆಗಳು ಇವೆ ಎಂದರು.

ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕ ಯಾರು? ಹೈಕಮಾಂಡ್ ಗುರುತಿಸಿದ್ದೇಗೆ?

‘ವಿನಯ ಸಾಮರಸ್ಯ’ ಶೀಘ್ರ ಜಾರಿ

ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಅಸ್ಪೃಶ್ಯತೆ ಸಂಕೋಲೆಗೆ ಸಿಲುಕಿದ್ದ ವಿನಯ ಎನ್ನುವ ಬಾಲಕನ ಹೆಸರಿನಲ್ಲಿ ರಾಜ್ಯಾದ್ಯಂತ ‘ವಿನಯ ಸಾಮರಸ್ಯ’ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಹೇಳಿದರು.

ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಯೋಜನೆಯನ್ನು ಉದ್ಘಾಟನೆ ಮಾಡಿಸುವ ಚಿಂತನ ನಡೆದಿದೆ ಎಂದರು. ಈ ಯೋಜನೆಯಲ್ಲಿ ಅಸ್ಪೃಶ್ಯತೆಗೆ ಸಿಲುಕಿದ ಮಕ್ಕಳ ಶಿಕ್ಷಣದ ಹೊಣೆಯನ್ನು ಸರ್ಕಾರವೇ ಹೊರುತ್ತದೆ. ಅಲ್ಲದೇ ವಿನಯನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಭರಿಸಲಿದೆ ಎಂದರು.

Koppal: ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ನೀರು ಸಂಗ್ರಹ

ಸಾಮಾನ್ಯ ಕಾರ್ಯಕರ್ತೆಗೆ ಟಿಕೆಟ್‌: ಆಚಾರ್‌

ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್‌ ನೀಡಲಾಗುತ್ತದೆ. ಅದರಂತೆ ಕೊಪ್ಪಳದ ಬಿಜೆಪಿ ನಾಯಕಿ ಹೇಮಲತಾ ನಾಯಕ್‌ ಅವರಿಗೆ ಟಿಕೆಟ್‌ ನೀಡಿರುವುದು ಸಂತೋಷವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಟ್ಟಿತ್ತು. ಅದರಂತೆ ಈಗ ಹೇಮಲತಾ ನಾಯಕ್‌ ಅವರನ್ನು ವಿಧಾನಪರಿಷತ್‌ ಆಯ್ಕೆ ಮಾಡಲು ಟಿಕೆಟ್‌ ನೀಡಲಾಗಿದೆ. ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿರುವುದು ಸಂತೋಷ ತಂದಿದೆ ಎಂದಿದ್ದಾರೆ.