* 50 ಹಳ್ಳಿ ಸುತ್ತಿದ್ದಾರೆ, ಹತ್ತಾರು ದೇವಸ್ಥಾನಕ್ಕೆ ಭೇಟಿ* ಬೆಳಗ್ಗೆಯಿಂದಲೇ ಶುರುವಾದ ಚೈತ್ರಯಾತ್ರೆ ರಾತ್ರಿಯಾದರೂ ಮುಂದುವರಿಕೆ*  ನಿಮ್ಮ ಈ ಋುಣ ತೀರಿಸಲು ಸಾಧ್ಯವೇ ಇಲ್ಲ: ಆಚಾರ್‌ 

ಕೊಪ್ಪಳ(ಆ.09): ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್‌ ಅವರು ಜಿಲ್ಲೆಯಲ್ಲಿ ಎರನಡೇ ದಿನವೂ ದೇವಾಲಯಗಳನ್ನು ಸುತ್ತುವುದನ್ನು ಮುಂದುವರಿಸಿದ್ದಾರೆ. ಇದರ ಜತೆಗೆ ಕ್ಷೇತ್ರದಾದ್ಯಂತ ಹಳ್ಳಿ ಹಳ್ಳಿಗಳನ್ನು ಸುತ್ತಿ, ಅಭಿನಂದನೆ ಹೇಳಿದವರಿಗೆ ಧನ್ಯವಾದ ಹೇಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವರಾದ ಮೇಲೆ ಜಿಲ್ಲೆಗೆ ಶನಿವಾರ ಆಗಮಿಸಿದ ಹಾಲಪ್ಪ ಆಚಾರ್‌ ಹುಲಿಗೆಮ್ಮ ದೇವಸ್ಥಾನ, ಗವಿಮಠ ಹಾಗೂ ರಾಘವೇಂದ್ರ ಮಠಕ್ಕೆ ಮೊದಲದಿನ ಸುತ್ತಿದ್ದರು. ಗ್ರಾಮದಲ್ಲಿ ಅದ್ಧೂರಿ ಸ್ವಾಗತವನ್ನು ಸ್ವೀಕಾರ ಮಾಡಿದ ಅವರು ತಡರಾತ್ರಿ ವರೆಗೂ ಮನೆಗೆ ಬಂದು ಅಭಿನಂದನೆ ಸಲ್ಲಿಸುವವರನ್ನು ದಣಿವರಿಯದೆ ಭೇಟಿಯಾಗಿ, ಧನ್ಯವಾದ ಹೇಳುತ್ತಲೇ ಇದ್ದರು.

ಭಾನುವಾರ ಬೆಳಗ್ಗೆ ಮನೆಯ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳು, ಕಾರ್ಯಕರ್ತರು, ನಾಯಕರನ್ನು ಭೇಟಿಯಾದರು. ಮಾಜಿ ಶಾಸಕ ಇಟಗಿಯ ಈಶಣ್ಣ ಗುಳಗಣ್ಣವರ ಮನೆಗೆ ಭೇಟಿ ನೀಡುವ ಮೂಲಕ ಪ್ರವಾಸ ಪ್ರಾರಂಭಿಸಿದರು. ಬಿನ್ನಾಳ ಗ್ರಾಮದಲ್ಲಿಯೂ ದೇವಸ್ಥಾನಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಧನ್ಯವಾದ ಹೇಳಿದ ಅವರು, ಅಲ್ಲಿಂದ ಕುಕನೂರು ಮಹಾಮಾಯೆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆರ್ಶಿವಾದ ಪಡೆದರು.

ಮೊಬೈಲ್‌ ಸ್ವಿಚ್‌ ಆಫ್‌ ಮಾಡಂಗಿಲ್ಲ, ಸಬೂಬು ಹೇಳಂಗಿಲ್ಲ: ಖಡಕ್‌ ಎಚ್ಚರಿಕೆ ಕೊಟ್ಟ ಆಚಾರ್‌

50ಕ್ಕೂ ಅಧಿಕ ಗ್ರಾಮಗಳು

ಯಲಬುರ್ಗಾ ವಿಧಾನಸಭಾ ಕ್ಷೇತ್ರ ಕುಕನೂರು ಹಾಗೂ ಯಲಬುರ್ಗಾ ತಾಲೂಕುಗಳನ್ನೊಳಗೊಂಡಿದೆ. ಸುಮಾರು 147 ಗ್ರಾಮಗಳು ಇದ್ದು, ಸಚಿವ ಹಾಲಪ್ಪ ಆಚಾರ್‌ ಅವರು ದಾರಿಯುದ್ದಕ್ಕೂ ಇರುವ ಗ್ರಾಮಗಳನ್ನು ಸುತ್ತುತ್ತಲೇ 50ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿದರು. ದಾರಿಯುದ್ದಕ್ಕೂ ಸ್ವಾಗತಿಸಲು ನಿಂತಿದ್ದ ಗ್ರಾಮಸ್ಥರನ್ನು ಭೇಟಿಯಾಗಿ, ನಾನೇ ನಿಮ್ಮ ಬಳಿ ಬಂದಿದ್ದೇನೆ, ನೀವ್ಯಾಕೆ ದಾರಿಯಲ್ಲಿ ನಿಲ್ಲುತ್ತೀರಿ ಎನ್ನುವ ಸಹಜ ಮಾತುಗಳನ್ನಾಡುತ್ತಲೇ ಸಾಗುತ್ತಿದ್ದರು.
ನಾನು ಇಂದು ಸಚಿವನಾಗಿರಬಹುದು. ಆದರೆ, ಅದಕ್ಕಿಂತ ಪೂರ್ವದಲ್ಲಿ ನೀವು ಆಯ್ಕೆ ಮಾಡಿದ್ದರಿಂದ ಶಾಸಕನಾದೆ. ಶಾಸಕನಾದ ಮೇಲೆ ಸಚಿವಗಿರಿ ಬರಬಹುದು. ಆದರೆ, ಸಚಿವಗಿರಿ ಬಂದ ಮೇಲೆ ಶಾಸಕ ಸ್ಥಾನ ಬರುವುದಿಲ್ಲ. ಆದ್ದರಿಂದ ನಿಮ್ಮ ಈ ಋುಣ ತೀರಿಸಲು ಸಾಧ್ಯವೇ ಇಲ್ಲ. ನನ್ನನ್ನು ಶಾಸಕನಾಗಿ ಮಾಡಿದ ನಿಮಗೆ ನಾನು ಧನ್ಯವಾದ ಹೇಳಲು ಸಚಿವನಾಗಿ ಬಂದಿದ್ದೇನೆ ಅಷ್ಟೇ ಎಂದು ವಿನಯದಿಂದ ಹೇಳಿದರು.