*  ಬಿಜೆಪಿ ಕಚೇರಿಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ*  ಕಾಂಗ್ರೆಸ್‌ ಜನಪರವಾಗಿ ವರ್ತಿಸಲಿಲ್ಲ ಎಂಬುದಕ್ಕೆ ತುರ್ತು ಪರಿಸ್ಥಿತಿಯಂತಹ ನಿದರ್ಶನ ಬೇಕಾಗಿಲ್ಲ*  ಆ ಪಕ್ಷದ ನಾಯಕರ ಸರ್ವಾಧಿಕಾರಿಧೋರಣೆಯಿಂದಾಗಿಯೇ ಇಡೀ ದೇಶದಲ್ಲಿ ಪಕ್ಷ ನೆಲಕಚ್ಚಿತು

ಬಳ್ಳಾರಿಜೂ.26): ತುರ್ತು ಪರಿಸ್ಥಿತಿ ಹೇರಿಕೆಯಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್‌ ಬಹುದೊಡ್ಡ ಆಘಾತ ಅನುಭವಿಸಿತು. ತುರ್ತು ಪರಿಸ್ಥಿತಿ ಎದುರಿಸಿದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದರು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್‌ ಜನಪರವಾಗಿ ವರ್ತಿಸಲಿಲ್ಲ ಎಂಬುದಕ್ಕೆ ತುರ್ತು ಪರಿಸ್ಥಿತಿಯಂತಹ ನಿದರ್ಶನ ಬೇಕಾಗಿಲ್ಲ. ಆ ಪಕ್ಷದ ನಾಯಕರ ಸರ್ವಾಧಿಕಾರಿಧೋರಣೆಯಿಂದಾಗಿಯೇ ಇಡೀ ದೇಶದಲ್ಲಿ ಪಕ್ಷ ನೆಲಕಚ್ಚಿತು. ತುರ್ತು ಪರಿಸ್ಥಿತಿಯ ವೇಳೆ ಅನೇಕ ಹೋರಾಟಗಾರರನ್ನು ಜೈಲಿಗೆ ಕಳಿಸಲಾಯಿತು.

ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರ: ಸಚಿವ ಶ್ರೀರಾಮುಲು

ಮಾಧ್ಯಮದ ಸ್ವಾತಂತ್ರ್ಯ ಹಕ್ಕನ್ನು ಕಸಿಯಲಾಯಿತು. ಮಿಲಿಟರಿ ಆಡಳಿತದಿಂದಾಗಿ ಇಡೀ ದೇಶ ಕುಗ್ಗಿ ಹೋಗಿತು. ಯಾವುದೇ ಪಕ್ಷ ಅಥವಾ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕು. ಜನರಿಂದ ದೂರ ಉಳಿದರೆ ಯಾವ ಪಕ್ಷಕ್ಕೂ ಭವಿಷ್ಯ ಇರುವುದಿಲ್ಲ. ಜನ ಹಿತ ಮರೆತ ನಡೆದ ಕಾಂಗ್ರೆಸ್‌ಗೆ ಇಂದು ಇಡೀ ದೇಶದಲ್ಲಿ ಅಧಿಕಾರವಿಲ್ಲದೆ ಒದ್ದಾಡುವ ಪರಿಸ್ಥಿತಿ ಬಂದಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಮುರಾರಿಗೌಡ ಗೋನಾಳ್‌, ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ವಿಧಾನಪರಿಷತ್‌ ಸದಸ್ಯ ಏಚರೆಡ್ಡಿ ಸತೀಶ್‌, ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌. ಗುರುಲಿಂಗನಗೌಡ, ಬುಡಾ ಅಧ್ಯಕ್ಷ ಪಾಲಣ್ಣ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್‌, ಹನುಮಂತ ಗುಡಿಗಂಟಿ, ಪಕ್ಷದ ಮಹಿಳಾ ಘಟಕದ ಸುಮಾರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ಹನುಮಂತಪ್ಪ, ವೇಮಣ್ಣ, ವೆಂಕಟರಾಮಿರೆಡ್ಡಿ, ಮಲ್ಲನಗೌಡ, ಗೋವಿಂದ್‌, ಬಸವರಾಜ್‌, ಜಿ.ವೀರಶೇಖರ ರೆಡ್ಡಿ, ಮಾಧ್ಯಮ ಸಹ ಸಂಚಾಲಕ ರಾಜೀವ್‌ ತೊಗರಿ ಸೇರಿದಂತೆ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.