ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ..

ಬೆಂಗಳೂರು (ಜು.13): ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ ಗಮನ ಹರಿಸಿದ್ದು, ಎಂಟು ಪ್ರಮುಖ ಕಂಪನಿಗಳ ಜತೆ ಸೋಮವಾರ ಕೋಲ್ಕತ್ತಾದಲ್ಲಿ ಮಾತುಕತೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉನ್ನತ ಮಟ್ಟದ ನಿಯೋಗದೊಂದಿಗೆ ಕೋಲ್ಕತ್ತಾ ತಲುಪಿರುವ ಸಚಿವರು ಪ್ಲೈವುಡ್ ತಯಾರಿಕೆಗೆ ಹೆಸರಾಗಿರುವ ಗ್ರೀನ್ ಪ್ಲೈ, ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಗೆ ಹೆಸರಾಗಿರುವ ತೇಗಾ ಇಂಡಸ್ಟ್ರೀಸ್, ಕೃಷ್ಯುತ್ಪನ್ನ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ರೀಗಾಲ್ ರಿಸೋರ್ಸಸ್, ಗ್ರಾಫೈಟ್ ಎಲೆಕ್ಟ್ರೋಡ್ ತಯಾರಿಕೆಗೆ ಖ್ಯಾತವಾಗಿರುವ ಗ್ರಾಫೈಟ್ ಇಂಡಿಯಾ, ಸೋಲಾರ್ ಪಿ.ವಿ. ಮಾಡ್ಯೂಲ್ ತಯಾರಿಸುವ ವಿಕ್ರಂ ಸೋಲಾರ್, ಉಡುಪು ತಯಾರಿಕೆಗೆ ಹೆಸರಾಗಿರುವ ರೂಪಾ ಇಂಡಸ್ಟ್ರೀಸ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ವಿಸ್ತೃತ ವಿಚಾರ ವಿನಿಮಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮತ್ತು ವಿಸ್ತರಣೆಗೆ ಆದ್ಯತೆ ಕೊಡುವಂತೆ ಕೋರಿದ್ದಾರೆ.

ಅಲ್ಲದೆ, ರಾಜ್ಯ ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಸಮಗ್ರ ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಟ್ಟಿದೆ. ಆದ್ದರಿಂದ ಹೂಡಿಕೆದಾರರು ವಿಜಯಪುರ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆಗಳತ್ತಲೂ ಗಮನ ಹರಿಸಬೇಕು. ಈ ಭಾಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಮರುಬಳಕೆ ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಗೆ ಯಥೇಚ್ಛ ಅವಕಾಶಗಳಿವೆ. ಹೀಗಾಗಿ ಕಂಪನಿಗಳ ನಿಯೋಗವು ಭೂಮಿ, ನೀರು, ವಿದ್ಯುತ್ ಲಭ್ಯತೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಬೇಕು. ಇದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.

ಮತ್ತೊಂದು ತಯಾರಿಕಾ ಘಟಕ

ರೀಗಾಲ್ ರಿಸೋರ್ಸಸ್ ಕಂಪನಿಯು ಸದ್ಯಕ್ಕೆ ಮೆಕ್ಕೆಜೋಳದ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸುತ್ತಿದೆ. ತೊಗರಿಬೇಳೆ ಮತ್ತಿತರ ಕೃಷಿ ಉತ್ಪನ್ನಗಳ ಕಡೆಗೂ ಅದು ಗಮನ ಹರಿಸಬೇಕು. ಹಾಗೆಯೇ, ರೂಪಾ ಇಂಡಸ್ಟ್ರೀಸ್ ರಾಜ್ಯದಲ್ಲಿ ತನ್ನ ಮತ್ತೊಂದು ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದೆ. ಈ ಉದ್ದೇಶಿತ ಯೋಜನೆಗಳಿಗೆ ಸಂಬಂಧಿಸಿ ಮತ್ತಷ್ಟು ಚರ್ಚಿಸಿ, ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಪಾಟೀಲ ವಿವರಿಸಿದ್ದಾರೆ.

ಈ ಮಾತುಕತೆಗಳಲ್ಲಿ ಗ್ರೀನ್ ಪ್ಲೈ ಕಂಪನಿಯ ಸಿಎಫ್ಒ ಸಂಜೀವ್ ಕೇಸರಿ ಮತ್ತು ಉಪಾಧ್ಯಕ್ಷ ಜಿತೇಂದ್ರಕುಮಾರ್ ಜೈನ್, ತೇಗಾ ಇಂಡಸ್ಟ್ರೀಸ್ ಪರವಾಗಿ ಅದರ ಜಾಗತಿಕ ಅಧ್ಯಕ್ಷ ಪ್ರತೀಕ್ ಬಸು ರಾಯ್, ರೀಗಾಲ್ ರಿಸೋರ್ಸಸ್ ಪರವಾಗಿ ಸಿಎಫ್ಒ ರೋಹನ್ ಕಿಶೋರಪುರಿಯಾ ಮತ್ತು ಸಿದ್ಧಾರ್ಥ ವರ್ಮಾ, ಗ್ರಾಫೈಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆಶುತಕೋಷ್ ದೀಕ್ಷಿತ್ ಮತ್ತು ಉಪಾಧ್ಯಕ್ಷ ಸಿದ್ಧಾಂತ್ ಬಾಂಗೂರ್, ವಿಕ್ರಂ ಸೋಲಾರ್ ಕಂಪನಿಯ ಉಪಾಧ್ಯಕ್ಷ ವಿವೇಕ್ ಚೌಧರಿ ಮತ್ತು ಸಿಇಒ ಅರುಣ್ ಮಿತ್ತಲ್, ರೂಪಾ ಇಂಡಸ್ಟ್ರೀಸ್ ಸಂಸ್ಥೆಯ ಸಿಎಫ್ಒ ಸಮಿತ್ ಕೋವಾಲ ಮತ್ತು ಹಣಕಾಸು ವ್ಯವಸ್ಥಾಪಕ ಪ್ರವೀಣ್ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಮುಂತಾದವರು ಉಪಸ್ಥಿತರಿದ್ದರು.