Mandya: ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ ಮಂಡ್ಯ ಮುಖಂಡ
ಕ್ಷೇತ್ರದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ರಾಜಕಾರಣಿಗಳು ಭ್ರಷ್ಟಾಚಾರದ ಕೂಪವನ್ನಾಗಿಸಿ ತಾಲೂಕನ್ನು ಕಲುಶಿತ ಗೊಳಿಸಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು, ಸಮಾಜ ಸೇವೆ ಜೊತೆಗೆ, ಸ್ವಚ್ಛ ನಾಗ ಮಂಗಲವನ್ನಾಗಿ ಬದಲಾಯಿಸಲು ಮುಂದಿನ ದಿನಗಳಲ್ಲಿ ಶ್ರಮಿಸುತ್ತೇನೆ ಎಂದು ಸಮಾಜ ಸೇವೆಕ ಮಲ್ಲಿಕಾರ್ಜುನ್ (ಫೈಟರ್ ರವಿ) ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದರು
ನಾಗಮಂಗಲ (ಅ..20): ಕ್ಷೇತ್ರದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ರಾಜಕಾರಣಿಗಳು ಭ್ರಷ್ಟಾಚಾರದ ಕೂಪವನ್ನಾಗಿಸಿ ತಾಲೂಕನ್ನು ಕಲುಶಿತ ಗೊಳಿಸಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು, ಸಮಾಜ ಸೇವೆ ಜೊತೆಗೆ, ಸ್ವಚ್ಛ ನಾಗ ಮಂಗಲವನ್ನಾಗಿ ಬದಲಾಯಿಸಲು ಮುಂದಿನ ದಿನಗಳಲ್ಲಿ ಶ್ರಮಿಸುತ್ತೇನೆ ಎಂದು ಸಮಾಜ ಸೇವೆಕ ಮಲ್ಲಿಕಾರ್ಜುನ್ (ಫೈಟರ್ ರವಿ) ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದರು.
ತಾಲೂಕಿನ ಮಂಗರವಳ್ಳಿಯಲ್ಲಿ ವೈಯುಕ್ತಿಕವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ (Drinking Water) ಘಟಕವನ್ನು ಉದ್ಘಾಟಿಸಿದ ನಂತರ ಬೊಮ್ಮೇನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದರು.
ಸಮಾಜ ಸೇವೆ (Social Service) ಮೂಲಕ ಹುಟ್ಟಿದ ಮಣ್ಣಿನ ಋುಣ ತೀರಿಸಲು ಬಂದಿರುವ ನನಗೆ ಇಲ್ಲಿನ ರಾಜಕೀಯ ಶಕ್ತಿಗಳು ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ನನ್ನೊಂದಿಗೆ ಗುರುತಿಸಿಕೊಳ್ಳುತ್ತಿರುವ ಯುವಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಒಳ್ಳೆಯ ಕೆಲಸಗಳಿಗೂ ಅಡ್ಡಿಯುಂಟು ಮಾಡುತ್ತಿರುವುದರಿಂದ ಬೇಸತ್ತಿರುವ ನಾನು ತಾಲೂಕಿನ ಜನರ ಹಿತದೃಷ್ಟಿಯಿಂದ ರಾಜಕೀಯ ಪ್ರವೇಶ ಮಾಡುವುದು ಅನಿವಾರ್ಯವಾಗಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ನೂರಾರು ಸಮಸ್ಯೆಗಳಿವೆ. ಶುದ್ಧ ಕುಡಿಯುವ ನೀರು, ರಸ್ತೆ, ಸೇತುವೆ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳು ಮೂಲ ಸೌಕರ್ಯದಿಂದ ವಂಚಿತಗೊಂಡಿವೆ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಪೊಲೀಸ್ ಠಾಣೆಗಳಲ್ಲಿ ನೊಂದವರಿಗೆ ಸೂಕ್ತ ನ್ಯಾಯ ಮತ್ತು ರಕ್ಷಣೆ ಸಿಗುತ್ತಿಲ್ಲ. ಇದರಿಂದ ತಾಲೂಕಿನ ಮುಗ್ಧಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳಿಲ್ಲ. ಹಲವು ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿದ್ದರೂ ಜನಪ್ರತಿನಿಧಿಗಳು ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.
ಶೇ.80ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನರು ಪ್ಲೋರೈಡ್ ಮಿಶ್ರಿತ ನೀರು ಕುಡಿಯುತ್ತಿರುವುದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ನನ್ನಿಂದಾಗುವ ಸಹಾಯ ಮಾಡುವ ಉದ್ದೇಶದಿಂದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಅಗತ್ಯ ಪರಿಕರಗಳನ್ನು ಪೂರೈಸುವುದೂ ಸೇರಿದಂತೆ ಬೇಡಿಕೆಯಿರುವ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಸೇತುವೆ ಮತ್ತು ರಸ್ತೆ ನಿರ್ಮಾಣ, ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿದ್ದೇನೆ. ಇದನ್ನು ಸಹಿಸದ ಕೆಲವರು ಹೊಟ್ಟೆಕಿಚ್ಚಿನಿಂದ ನನ್ನ ಸಮಾಜ ಸೇವೆಗೆ ಅಡ್ಡಿಪಡಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜಕೀಯ ಪ್ರವೇಶ ಘೋಷಣೆ ಸಾಧ್ಯತೆ!:
ಕಳೆದ ಆರು ತಿಂಗಳಿಂದೀಚೆಗೆ ತಾಲೂಕಿನಾದ್ಯಂತ ಮಿಂಚಿನ ಪ್ರವಾಸ ಕೈಗೊಂಡಿರುವ ಫೈಟರ್ ರವಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೇವೆ ಸಿಗಬೇಕು. ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂಬ ಸಂಕಲ್ಪಕ್ಕೆ ಪೂರಕವಾಗಿ ಸಮಾಜ ಸೇವೆಯ ಜೊತೆಗೆ ಕೆಲ ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮುಂದಾದರು.
ಈ ಸಂದರ್ಭದಲ್ಲಿ ಎದುರಾದ ಅಡತಡೆಗಳು ಮತ್ತು ತಮ್ಮ ಬೆಂಬಲಿಗರಿಗೆ ಆಗುತ್ತಿರುವ ತೊಂದರೆಯಿಂದ ಬೇಸತ್ತು ರಾಜಕೀಯ ಕ್ಷೇತ್ರ ಪ್ರವೇಶ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ತಾಲೂಕಿನ ದೇವಲಾ ಪುರದಲ್ಲಿ ಅ.23ರಂದು ಆಯೋಜಿಸಿರುವ ಹೋಬಳಿ ಮಟ್ಟದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರಾಜಕೀಯ ಪ್ರವೇಶ ಮಾಡಿ 2023ರ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವ ಕುರಿತು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಫೈಟರ್ ರವಿ ರಾಜಕೀಯ ಪ್ರವೇಶದ ಮುನ್ಸೂಚನೆ
ಭ್ರಷ್ಟಾಚಾರ, ಸ್ವಚ್ಛ ನಾಗಮಂಗಲವನ್ನಾಗಿ ಬದಲಾಯಿಸುತ್ತೇನೆ: ಸಮಾಜ ಸೇವಕ