Asianet Suvarna News Asianet Suvarna News

Mandya : ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಚರಂಡಿ ನೀರು

   ಒಳಚರಂಡಿ ನೀರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಹಾಗೂ ಮಾಲೀಕರು ಪಟ್ಟಣದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Mandya  Drainage water on National Highway snr
Author
First Published Nov 19, 2022, 6:03 AM IST

ಮದ್ದೂರು (ನ.19):   ಒಳಚರಂಡಿ ನೀರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಹಾಗೂ ಮಾಲೀಕರು ಪಟ್ಟಣದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ಕಾರಿ ಸಾರಿಗೆ ಸಂಸ್ಥೆ ಬಸ್‌ (KSRTC)  ನಿಲ್ದಾಣದ ಎದುರು ಒಳಚರಂಡಿ ನೀರು (Water)  ಹೆದ್ದಾರಿಯಲ್ಲಿ ಹರಿಯುತ್ತಿದೆ. ಒಳಚರಂಡಿ ಕಾಮಗಾರಿ ತ್ವರಿತವಾಗಿ ಮಾಡಲು ಕ್ರಮ ಕೈಗೊಳ್ಳದೆ ಕಲುಷಿತ ನೀರು ಹರಿಯುವಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಕೆಲಕಾಲ ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಮ.ನ.ಪ್ರಸನ್ನಕುಮಾರ್‌ ಮಾತನಾಡಿ, ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣದ ಮುಂಭಾಗ ಹೆದ್ದಾರಿ ಕಾಮಗಾರಿಗೆ ಅಗೆದು ಗುಂಡಿ ಮಾಡಲಾಗಿದೆ. ವರ್ಷಗಳೆ ಆಗುತ್ತ ಬಂದರೂ ಕಾಮಗಾರಿ ಪೂರ್ಣ ಮಾಡದ ಪರಿಣಾಮ ಒಳಚರಂಯ ಮಲೀನ ನೀರು ಹಾಗೂ ಚರಂಡಿ ನೀರು ಹೆದ್ದಾರಿ ಮೇಲೆ ಹರಿದು ಬಸ್‌ ನಿಲ್ದಾಣದ ಒಳಗೆ ಹಾಗೂ ಆಟೋ ನಿಲ್ದಾಣಕ್ಕೆ ಹರಿದು ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ಅವಾಂತರ ಸೃಷ್ಟಿಸುತ್ತಿದೆ ಎಂದು ದೂರಿದರು.

ಹೆದ್ದಾರಿಯಲ್ಲಿ ಹರಿಯುವ ಕೊಳಚೆ ನೀರು ವಾಹನಗಳು ಚಲಿಸುವಾಗ ನಾಗರಿಕರ ಬಟ್ಟೆಗೆ ಹಾರುತ್ತಿದೆ. ಕೊಳಚೆ ನೀರಿನಲ್ಲಿ ಸಂಚರಿಸುವುದರಿಂದ ನಾಗರಿಕರಿಗೆ ಚರ್ಮದ ಕಾಯಿಲೆ, ವಿವಿಧ ಸೋಂಕು ಹಾಗೂ ರೋಗ ಹರಡುವ ಅತಂಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕೂಡಲೇ ಕಾಮಗಾರಿ ತ್ವರಿತವಾಗಿ ಮುಗಿಸಬೇಕು. ಈ ಬಗ್ಗೆ ಪೊಲೀಸರು ಗುತ್ತಿಗೆ ಪಡೆದಿರುವ ದೀಲಿಪ್‌ ಬಿಲ್ಡ…ಕಾನ್‌ ಸಂಸ್ಥೆಯ ರಕ್ಷಣಾ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಹೆದ್ದಾರಿ ಸಂಚಾರ ತಡೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂದೀಪ್‌, ಮನು, ಜೋಸೆಫ್‌, ಮಣಿಕಂಠ, ಕುಮಾರ್‌, ಶಂಕರ್‌, ವೆಂಕಟೇಶ, ಶಿವು, ಸುರೇಶ್‌, ಮಲ್ಲೇಶ್‌, ಪುನೀತ್‌, ಚಂದ್ರ, ರಮೇಶ್‌, ಉಮೇಶ್‌, ಸ್ವಾಮಿ, ರಾಮು, ಧರ್ಮ, ನಂದೀಶ್‌, ಸಿದ್ದಪ್ಪ ಇದ್ದರು. 

ಇದು ಮೈಸೂರಿನ ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯದ ಪ್ರವೇಶದ್ವಾರ!

‘ನ್ಯಾಯದೇಗುಲವಿದು ...ಕೈಮುಗಿದು ಒಳಗೆ ಬಾ..’ ಎಂದು ಸ್ವಾಗತಿಸಬೇಕಾದ ಈ ಪ್ರವೇಶದ್ವಾರದ ಬಳಿ ಮಲಮೂತ್ರಾದಿಗಳಿಂದ ತುಂಬಿದ ಕೊಳಚೆ ನೀರು ಹರಿಯುತ್ತಿದೆ! ಹಾಗಾಗಿ ಈ ಪ್ರವೇಶ ದ್ವಾರದ ಮೂಲಕ ನ್ಯಾಯಾಲಯವನ್ನು ಪ್ರವೇಶಿಸುವ ನ್ಯಾಯಾಧೀಶರು, ನ್ಯಾಯವಾದಿಗಳು ಪೊಲೀಸರು ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ‘ಮೂಗು ಮುಚ್ಚಿ ಒಳಗೆ ಬಾ’ ಎಂದು ಕರೆಯಬೇಕಾದ ಪರಿಸ್ಥಿತಿ ಇದೆ.

ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮೊದಲಿನಿಂದಲೂ ನ್ಯಾಯಾಲಯವೆಂದರೆ ನಿರ್ಲಕ್ಷ್ಯ. ನೂರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ಭವ್ಯ ನ್ಯಾಯಾಲಯಗಳ ಸಂಕೀರ್ಣದ ಎದುರು ಇರುವ ಮೋರಿ ಹಾಗೂ ಪಾದಚಾರಿ ಮಾರ್ಗದ ಕಳಪೆ ಕಾಮಗಾರಿಯಿಂದ ನ್ಯಾಯಾಲಯದ ಸಂಕೀರ್ಣಕ್ಕೆ ಕರಿ ಚುಕ್ಕೆ ಇಟ್ಟಂತಾಗಿದೆ. ಈ ಕಳಪೆ ಕಾಮಗಾರಿಯಿಂದಾಗಿ ಸರಾಗವಾಗಿ ಹರಿಯಬೇಕಾಗಿದ್ದ ಕೊಳಚೆ ನೀರು ನ್ಯಾಯಾಲಯದ ಪ್ರವೇಶದ್ವಾರದಲ್ಲಿ ಕಾರಂಜಿಯಂತೆ ಉಕ್ಕಿಹರಿಯುತ್ತಿದೆ.

ಇಪ್ಪತ್ತು ನ್ಯಾಯಾಲಯ:

ಈ ನ್ಯಾಯಾಲಯದ ಆವರಣದಲ್ಲಿ ಒಟ್ಟು ಇಪ್ಪತ್ತು ನ್ಯಾಯಾಲಯಗಳಿವೆ. ಜೊತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಿದೆ. 2-3 ತಿಂಗಳಿಗೊಮ್ಮೆ ಬೃಹತ್‌ ಲೋಕ ಅದಾಲತ್‌ ನಡೆಯುತ್ತದೆ. ವಿಪರ್ಯಾಸವೆಂದರೆ ಕಳೆದ ವಾರ ನಡೆದ ಲೋಕ ಅದಾಲತ್ತಿನಲ್ಲಿ ನಗರಪಾಲಿಕೆಯ ಅಧಿಕಾರಿಗಳು ಭಾಗವಹಿಸಲು ಆಗಮಿಸಿದ್ದು, ಆ ಸಮಯದಲ್ಲಿ ಸಾರ್ವಜನಿಕರು ನೀರಿನ ಬಿಲ್‌ ಪಾವತಿಸದಿರುವುದಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಒಟ್ಟು 37,762 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆಯಂತೆ. ಸಾರ್ವಜನಿಕರಿಂದ ಬಾಕಿ ಇರುವ ನೀರಿನ ಬಿಲ್‌ ಮೊತ್ತವನ್ನು ವಸೂಲಿ ಮಾಡುವ ಅಧಿಕಾರ ಉಳ್ಳ ಪಾಲಿಕೆ ಅಧಿಕಾರಿಗಳಿಗೆ ನ್ಯಾಯಾಲಯದ ಮುಂದೆ ಉಕ್ಕಿ ಹರಿಯುವ ಮೋರಿಯನ್ನು ಸರಿಪಡಿಸುವ ಜವಾಬ್ದಾರಿ ಇಲ್ಲವೇ?

ಪ್ರತಿನಿತ್ಯ ಸಹಸ್ರಾರು ಅಧಿಕಾರಿಗಳು, ವಕೀಲರು, ಪೊಲೀಸರು ಹಾಗೂ ಸಾರ್ವಜನಿಕರು ನ್ಯಾಯಾಲಯಕ್ಕೆ ಆಗಮಿಸುತ್ತಾರೆ. ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಜನಸಂದಣಿ ಇರುವ ಜಾಗವೆಂದರೆ ಅದು ನ್ಯಾಯಾಲಯ. ಇಂತಹ ನ್ಯಾಯದೇಗುಲದ ಪ್ರವೇಶದ್ವಾರದಲ್ಲಿ ಪ್ರತಿನಿತ್ಯ ರಾಜಾರೋಷವಾಗಿ ಮಲಮೂತ್ರಾದಿಗಳ ಹೊಳೆ ಹರಿಯುತ್ತಿದ್ದರೂ, ಕೊಳಚೆ ನೀರಿನ ಕಾರಂಜಿ ಪುಟಿಯುತ್ತಿದ್ದರೂ, ಮೋರಿ ನೀರಿನ ಚಿಲುಮೆ ಉಕ್ಕುತ್ತಿದ್ದರೂ ಸಹ ನ್ಯಾಯದೇವತೆ ಕೈಕಟ್ಟಿಕುಳಿತಿರುವುದೇತಕೆ? ನ್ಯಾಯದೇವತೆಯು ಕಣ್ಣಿಗೆ ಬಟ್ಟೆಕಟ್ಟಿಕೊಂಡಿರಬಹುದು. ಆದರೆ ಈ ನ್ಯಾಯದೇವತೆಯ ಮೂಗಿಗೇನಾಗಿದೆ?

ಪ್ರತಿನಿತ್ಯ ಈ ಪ್ರವೇಶ ದ್ವಾರದ ಮೂಲಕ ನ್ಯಾಯದೇಗುಲವನ್ನು ಪ್ರವೇಶಿಸುವ ಅಧಿಕಾರಿಗಳು ಪಾಲಿಕೆ, ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಚಾಟಿ ಬೀಸಬಾರದೇಕೆ?

ನಮ್ಮ ಜನರು ದೇವರ ಕೃಪೆಯಿಂದ ಕೋವಿಡ್‌ ಎಂಬ ಮಹಾಮಾರಿಯ ಅವಕೃಪೆಯಿಂದ ಚೇತರಿಸಿಕೊಂಡಿದೆ. ಅದೇ ಜನತೆ ಈಗ ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ಹರಿಯುತರತಿರುವ ಮಹಾಮೋರಿಯ ಅವಕೃಪೆಗೆ ತುತ್ತಾದಂತಾಗಿದೆ. ನ್ಯಾಯಾಲಯವನ್ನು ಪ್ರವೇಶಿಸುವ ಹಾಗೂ ನಿರ್ಗಮಿಸುವ ಸಾರ್ವಜನಿಕರಿಗೆ ಈ ಚರಂಡಿಯ ಕೊಳಚೆ ನೀರಿನಿಂದ ರೋಗ ತಗಲುವ ಭೀತಿ ಉಂಟಾಗಿದೆ. ದಿನವಿಡೀ ಈ ಪ್ರವೇಶದ್ವಾರದ ಬಳಿ ಕಾರ್ಯ ನಿರ್ವಹಿಸುವ ಪೊಲೀಸರ ಬವಣೆ ಹೇಳತೀರದು.

Follow Us:
Download App:
  • android
  • ios