ಮುಂಬೈಗೆ ಉಡ, ಪಕ್ಷಿಗಳ ಸಾಗಣೆ: ಕಬೂತರ್ ಅರೆಸ್ಟ್
ಉಡಗಳು ಹಾಗೂ ವಿವಿಧ ಜಾತಿಯ ಪಕ್ಷಿಗಳನ್ನು ಅಕ್ರಮವಾಗಿ ಮುಂಬೈಗೆ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಬೆಂಗಳೂರು (ಡಿ.22): ಅಪರೂಪದ ಜಾತಿಯ ಉಡಗಳು ಹಾಗೂ ವಿವಿಧ ಜಾತಿಯ ಪಕ್ಷಿಗಳನ್ನು ಅಕ್ರಮವಾಗಿ ಮುಂಬೈಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ನಿವಾಸಿ ಕಬೂತರ್ ಶಾಹಿದ್ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯಿಂದ ಮೂರು ಜೀವಂತ ಉಡಗಳು ಹಾಗೂ ವಿವಿಧ ಜಾತಿಯ 19 ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬನ್ನೇರುಘಟ್ಟದ ಪಕ್ಷಿಗಳ ಪುನರ್ವಸತಿ ಕೇಂದ್ರದಲ್ಲಿ ರಕ್ಷಣೆ ಮಾಡಲಾಗುತ್ತಿದೆ.
ಉಡಗಳು ಮತ್ತು ಪಕ್ಷಿಗಳನ್ನು ಖರೀದಿ ಮಾಡುತ್ತಿದ್ದ ಆರೋಪಿ ಖಲೀಲ್ ಎಂಬುವರನ್ನು ಮುಂಬೈನ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಈ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಶಿವಾಜಿನಗರದ ಪಿಳ್ಳಣ್ಣ ಗಾರ್ಡನ್ನಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ರೆಡ್ಡಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ...
ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶಾಹಿದ್ ವಿರುದ್ಧ ಅಕ್ರಮ ಬೇಟೆ, ಅಕ್ರಮ ವನ್ಯಜೀವಿ ಸಾಗಾಟದ ಆರೋಪಡಿ ಹಲವು ಪ್ರಕರಣಗಳು ದಾಖಲಾಗಿದ್ದು, ಇದೀಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಯಲಹಂಕದ ಉಪವಲಯ ಅರಣ್ಯಾಧಿಕಾರಿ ಜಗನ್ನಾಥ್ ರೆಡ್ಡಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.