ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಅರೈ) ಘಟಕ ಸ್ಥಾಪನೆಗೆ 100 ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಮೈಸೂರು: ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಅರೈ) ಘಟಕ ತೆರೆಯಲು 100 ಎಕರೆ ಜಾಗವನ್ನು ಮಂಡ್ಯದಲ್ಲೇ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರೈ ಘಟಕ ಸ್ಥಾಪನೆಗೆ ಬಜೆಟ್‌ನಲ್ಲಿ ಪ್ರಾಥಮಿಕವಾಗಿ ₹500 ಕೋಟಿ ಮೀಸಲಿಡಲಾಗಿದೆ. ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂಗೆ ನಾನೇ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ನಾಟಕವಾಡಲು ಪ್ರಧಾನಿ ನಂಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಹೆಚ್‌ಡಿಕೆ ಉತ್ತರ

ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದ್ರು? ಅಂತ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಉತ್ತರವಿದೆ ಎಂದು ತಿರುಗೇಟು ನೀಡಿದರು.

16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ಬಹಳ ಲಘುವಾಗಿ ಮಾತಾಡಿದ್ದು, ಕೇಂದ್ರದ ದೂರದೃಷ್ಟಿಯ ಬಜೆಟ್ ಅವರಿಗೆ ಅರ್ಥವಾಗಿಲ್ಲ. ರಾಜ್ಯ ಸರ್ಕಾರ ಖಾಲಿ ಚೊಂಬನ್ನು 2 ವರ್ಷದಿಂದ ಜನರಿಗೆ ಕೊಡುತ್ತಿದ್ದು, ಖಾಲಿ ಚೊಂಬಿನ ಕ್ರೇಡಿಟ್ ಕಾಂಗ್ರೆಸ್‌ಗೆ ಹೋಗಬೇಕು. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ. ಖಾಲಿ ಚೊಂಬು ರಾಜ್ಯ ಸರ್ಕಾರದ್ದು. ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆರೋಪಿಸಿದರು.

ಉದ್ಯೋಗ ಸೃಷ್ಟಿಯಾಗಿದೆ

ಕೇಂದ್ರ ಬಜೆಟ್‌ನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕ್ಯಾನ್ಸರ್‌ಗೆ ಸಂಬಂಧಪಟ್ಟ 17 ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬೃಹತ್ ಕೈಗಾರಿಕೆ ವಲಯಕ್ಕೂ ಉತ್ತೇಜನ ನೀಡಲಾಗಿದೆ. ₹7280 ಕೋಟಿ ನನ್ನ ಇಲಾಖೆಗೆ ಮೀಸಲಿಟ್ಟಿದ್ದಾರೆ. ಕರ್ನಾಟದಲ್ಲೇ ಯಂತ್ರೋಪಕರಣ ಉತ್ಪಾದನೆ ಆಗಲಿ ಎಂಬ ಯೋಜನೆ ಇವೆ. ಕರ್ನಾಟಕವನ್ನು ಕಡೆಗಣಿಸುವ ಕಾರಣವೇ ಇಲ್ಲ ಎಂದು ಎಚ್‌ಡಿಕೆ ಹೇಳಿದರು.

16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು ₹50 ಸಾವಿರ ಕೋಟಿ ಈಗ ಅದನ್ನು ₹63 ಸಾವಿರ ಕೋಟಿಗೆ ಏರಿಸಲಾಗಿದೆ. ವಿಶ್ವೇಶ್ವರಯ್ಯ ಸ್ಟೀಲ್ ಫ್ಯಾಕ್ಟರಿ ಪುನಶ್ಚೇತನಕ್ಕೆ ₹4 ರಿಂದ 5 ಸಾವಿರ ಕೋಟಿ ಕೊಡುತ್ತಿದ್ದೇವೆ. ಎಚ್ಎಂಟಿ ಕಂಪನಿ ಪುನರ್ ಆರಂಭಕ್ಕೆ ನಾನು ಬದ್ಧವಾಗಿದ್ದೇನೆ. ಅರಣ್ಯ ಇಲಾಖೆಯವರು ಎಚ್ಎಂಟಿ ಕಂಪನಿ ಜಾಗ ನಮ್ಮದು ಎಂದು ತಕರಾರು ತೆಗೆದುಕೊಂಡು ಕೂತಿದ್ದಾರೆ. ನಾನು ಏನು ಮಾಡಲಿ ಎಂದು ಪ್ರಶ್ನಿಸಿದರು.

ಪ್ರಾಜೆಕ್ಟ್ ಕೇಳಿದ್ದಿರಾ?:

ರಾಜ್ಯಕ್ಕೆ ಏನು ತರಬೇಕು ಎಂಬುದನ್ನು ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿ ಕೊಳ್ಳಬೇಕಾ? ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿ ಕೊಡಿ ಎಂದು ಕೇಳಿದ್ದಿರಾ? ಕಾಂಗ್ರೆಸ್‌ ನಾಯಕರು ವಿರುದ್ಧ ಕಿಡಿಕಾರಿದರು.