Cross Voting: ಪರಿಷತ್ ಚುನಾವಣೆಯ ಕ್ರಾಸ್ ವೋಟಿಂಗ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜೂ.23): ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇರ ಕಾರಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಅಡ್ಡ ಮತದಾನ ನಡೆಯುವ ಬಗ್ಗೆ ಅವರಿಬ್ಬರಿಗೆ ಎಲ್ಲವೂ ಗೊತ್ತಿತ್ತು. ಒಂದಷ್ಟು ಎಂಎಲ್ಎಗಳು ಹೊಟೇಲ್ ಒಂದರಲ್ಲಿ ಕುಳಿತು ಸಭೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ್ರಿಗೆ ಗೊತ್ತಾಗಿದೆ. ಗೊತ್ತಾಗಿಯೇ ವಿಜಯೇಂದ್ರ ಮತ್ತು ಆರ್ ಅಶೋಕ್ ಅವರಿಗೆ ಹೇಳಲು ಕರೆ ಮಾಡಿದ್ದಾರೆ.

ಆದರೆ ಅವರಿಬ್ಬರು ಕರೆ ಸ್ವೀಕರಿಸಿಲಿಲ್ಲ ಅಂತ ಸದಾನಂದಗೌಡರೇ ಹೇಳಿದ್ದಾರೆ. ಅಂದರೆ ಇದರ ಅರ್ಥ ಕ್ರಾಸ್ ಓಟಿಂಗ್ ವಿಷಯ ಇವರಿಗೆ ಗೊತ್ತಿತ್ತು. ಆದರೆ ಈಗ ವಿಜಯೇಂದ್ರ, ಸಿ ಟಿ ರವಿ ಮತ್ತು ಆರ್ ಅಶೋಕ್ ಇಬ್ಬರು ಬಂಬ್ಡಿ ಬಡಿದುಕೊಳ್ಳುತ್ತಿದ್ದಾರೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸುವುದಾಗಿ ಮುಂದಾಗಿದ್ದರೆ. ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವುದು ಬೇಡ. ಅದರ ಬದಲು ವಿಜಯೇಂದ್ರ ಮತ್ತು ಆರ್ ಅಶೋಕ್ ಇಬ್ಬರ ಬ್ರೈನ್ ಮ್ಯಾಪಿಂಗ್ ಮಾಡಲಿ. ಅವರಿಬ್ಬರ ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಲ್ಲಾ ಸತ್ಯವೂ ಗೊತ್ತಾಗುತ್ತದೆ. ಇವರಿಬ್ಬರೇ ಹೇಳಿಕೊಟ್ಟು ಅಡ್ಡಮತದಾನ ಮಾಡಿಸಿದ್ದಾರೆ.

ವಿಜಯೇಂದ್ರ ಆರ್ ಅಶೋಕ್ ಇವರಿಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಏನಾದರೂ ಮಾಡಿ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆರ್. ಅಶೋಕ್ ಅವರಿಗಿದೆ. ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂದು ವಿಜಯೇಂದ್ರ ಅವರಿಗೆ ಇದೆ. ಇಬ್ಬರ ಗಲಾಟೆಯಿಂದ ಈ ವ್ಯವಸ್ಥೆ ಆಗಿದೆ. ಈಗ ಇಬ್ಬರು ನಾಟಕ ಮಾಡುತ್ತಿದ್ದಾರೆ. ನಾವು ಯಾವ ಆಪರೇಷನ್ ಮಾಡಿಲ್ಲ, ಯಾರಿಗೂ ಯಾವ ಹಣದ ಆಮಿಷವನ್ನೂ ಒಡ್ಡಿಲ್ಲ. ನಮಗೆ 138 ಶಾಸಕರ ಜೊತೆಗೆ 3 ಶಾಸಕರು ಸೇರಿ ಒಟ್ಟು 142 ಶಾಸಕರು ಇದ್ದಾರೆ.

ನಾವು ಆರಾಮಾಗಿ ನಾಲ್ಕು ಸ್ಥಾನ ಗೆಲ್ಲುತ್ತಿದ್ದೆವು. ಹೀಗಾಗಿ ನಾವು ಯಾರಿಗೂ ಹಣ ಕೊಟ್ಟಿಲ್ಲ, ಕೊಡುವ ಅಗತ್ಯವೂ ಇರಲಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರನ್ನು ಇಷ್ಟಪಟ್ಟು ಒಪ್ಪಿಕೊಂಡು 13 ಶಾಸಕರು ನಮಗೆ ಓಟ್ ಹಾಕಿದ್ದಾರೆ. ನಿಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ನಿಮಗೆ ಆಗಲ್ಲ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಆರ್ ಅಶೋಕ್, ವಿಜಯೇಂದ್ರ ಇಬ್ಬರು ರಾಜೀನಾಮೆ ಕೊಡಿ. ನಿಮಗೆ ಪಕ್ಷದ ಮೇಲೆ ಹಿಡಿತವಿಲ್ಲ ಎಂದು ವಿಜಯೇಂದ್ರ, ಆರ್ ಅಶೋಕ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಕ್ರಾಸ್ ಓಟಿಂಗ್, ಆಪರೇಷನ್ ಕಮಲ ಇವೆಲ್ಲದರ ಬೀಜ ಬಿತ್ತಿದ್ದೆ ಬಿಜೆಪಿಯವರು. ಎಂಪಿಗಳನ್ನು ಬಿಡದೆ ಇವರು ಆಪರೇಷನ್ ಮಾಡುತ್ತಿದ್ದಾರೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.

ಕೇಂದ್ರದ ಅನೀತಿಗಳೇ ಕಾರಣ

ಇನ್ನು ನೀಟ್ ಪರೀಕ್ಷೆ ಕುರಿತು ಮಾತನಾಡಿದ ಲಕ್ಷ್ಮಣ್ ಮೂರು ಸ್ಟುಡೆಂಟ್ ಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯಲಾಗದಂತೆ ಮಾಡಿದ್ದು ಯಾರು. ಮೂವರು ವಿದ್ಯಾರ್ಥಿಗಳು ಪರೀಕ್ಷೆಯದೇ ಬರೆಯದೇ ಉಳಿದುಕೊಳ್ಳುವುದಕ್ಕೆ ಕೇಂದ್ರದ ಅನೀತಿಗಳೇ ಕಾರಣ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಡಿಕೇರಿಯಲ್ಲಿ ಹರಿಹಾಯ್ದರು. ಪರೀಕ್ಷಾ ಕೇಂದ್ರಕ್ಕೆ 20 ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಎಂಟ್ರಿ ಕೊಡಲಿಲ್ಲ. ಒಂದುವರೆ ಗಂಟೆ ಮೊದಲೇ ಗೇಟ್ ಮುಚ್ಚಿ ಎಕ್ಸಾಂಗೆ ಎಂಟ್ರಿ ಕೊಡಲಿಲ್ಲ.

ನಿಮ್ಮ ಈ ಮೂರ್ಖತನದ ಪರಮಾವಧಿಯ ಕಂಡೀಷನ್ಸ್ ಗಳು ಹೀಗೆ ಮಾಡಿವೆ ಎಂದರು. 2017 ರಲ್ಲಿ ನೀಟ್ ಪರೀಕ್ಷೆಯನ್ನು ಕೇಂದ್ರ ಜಾರಿಗೆ ತಂದಿತು. ಯಾವ ಉದ್ದೇಶಕ್ಕಾಗಿ ಜಾರಿಗೆ ತಂದಿತು. ಇದುವರೆಗೆ ಒಬ್ಬ ಹಳ್ಳಿಯ ಹುಡುಗ ನೀಟ್ ಪಾಸು ಮಾಡಿಕೊಂಡು ಡಾಕ್ಟರ್ ಓದಲು ಆಗಲಿಲ್ಲ. ಯಾವ ಕಾರಣಕ್ಕೂ ಬಡವರು, ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ನೀಟ್ ಬರೆಯುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಿಸಲಾಗಿದೆ. ಸಿಇಟಿಯಲ್ಲಿ ಜನಿವಾರ ತೆಗೆಸಿದ್ರು ಅಂತ ಇದೇ ತೇಜಸ್ವಿ ಸೂರ್ಯ ಬಾಯಿ ಬಡಿದುಕೊಂಡಿದ್ರು. ನಿನ್ನೆ ನೀಟ್ ಪರೀಕ್ಷೆಯಲ್ಲಿ ಎಲ್ಲಾ ಕಡೆ ಜನಿವಾರಗಳನ್ನು ಕಟ್ ಮಾಡಿ ಬಿಸಾಕಿದ್ದಾರೆ.

ಯಾರಾದರೂ ಒಬ್ಬ ಬಿಜೆಪಿಯವರು ಮಾತಾಡಿದ್ದಾರಾ. ಯಾಕೆ ಇದು ಕೇಂದ್ರದ ಎಕ್ಸಾಂ ಅಂತ ಸುಮ್ಮನಾಗಿದ್ದೀರಾ. ಅದೇ ರಾಜ್ಯದ ಪರೀಕ್ಷೆ ಆಗಿದ್ದರೆ ಉರುಳು ಸೇವೆ ಮಾಡಿರುತ್ತಿದ್ದಿರಿ. ನಿನ್ನೆ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ಕಿವಿಯಲ್ಲಿ ಓಲೆ, ಕೊರಳಿನಲ್ಲಿ ತಾಳಿ ಹಾಕಲು ಬಿಟ್ಟಿಲ್ಲ. ಹೆಣ್ಣುಮಕ್ಕಳು ರಬ್ಬರ್ ಬ್ಯಾಂಡ್ ಹಾಕಲು ಬಿಟ್ಟಿಲ್ಲ. ಪರೀಕ್ಷೆಯನ್ನು ಮುಂದೂಡಿ ಇಡೀ ದೇಶದಲ್ಲಿ 16 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಕೊಳ್ಳುವಂತೆ ಮಾಡಿದ್ರಿ, ಡೈಪರ್ ಸೂರ್ಯ ಇದುವರೆಗೆ ಒಂದು ಕ್ಷಮೆ ಕೇಳಲಿಲ್ಲ. ಪ್ರಧಾನಿ ಮೋದಿ ಅವರು ಒಂದೇ ಒಂದು ಸಂತಾಪ ಸೂಚಿಸಿ ಪೋಸ್ಟ್ ಮಾಡಲಿಲ್ಲ. ಇಂತಹ ಪರೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮಡಿಕೇರಿಯಲ್ಲಿ ವಾಗ್ದಾಳಿ ನಡೆಸಿದರು.