ಬೆಂಗಳೂರಿನ ಸ್ಯಾಟಲೈಟ್ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ರಿವರ್ಸ್ ತೆಗೆಯುವಾಗ ಹಿಂಬದಿ ನಿಂತಿದ್ದ ಶಾಮದೊರೆ ಎಂಬ ವ್ಯಕ್ತಿಯ ಮೇಲೆ ಚಕ್ರ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದ್ದು, ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಏ.12): ಪಾರ್ಕಿಂಗ್‌ನಲ್ಲಿ ಕಾರು ರಿವರ್ಸ್ ತೆಗೆಯುವ ವೇಳೆ ಹಿಂಬದಿ ನಿಂತಿದ್ದ ವ್ಯಕ್ತಿ ಕಾರಿಗೆ ಸಿಲುಕಿ ಭೀಕರವಾಗಿ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಸಿದ್ಧಾರ್ಥ್ ನಗರ ಸುಂಕದ ಕಟ್ಟೆ ನಿವಾಸಿಯಾದ ಶಾಮದೊರೆ (45) ಮೃತಪಟ್ಟ ದುರ್ದೈವಿ.

Add Asianetnews Kannada as a Preferred SourcegooglePreferred

ಇಂದು ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ನಗರದ ಸ್ಯಾಟ್ ಲೈಟ್ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಲಾಗಿತ್ತು. ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ದುರಂತ ಘಟನೆ ನಡೆದಿದೆ.

ಕಾರು ಚಾಲಕ ಹಿಂಬದಿ ಗಮನಿಸದೇ ಕಾರು ರಿವರ್ಸ್ ತೆಗೆದುಕೊಂಡಿದ್ದೇನೆ ಆದರೆ ಈ ವೇಳೆ ಕಾರಿನ ಹಿಂಬದಿ ನಿಂತಿದ್ದ ಮೃತ ವ್ಯಕ್ತಿ ಶಾಮದೊರೆ ಮೇಲೆ ಕಾರಿನ ಚಕ್ರ ಹರಿದಿದೆ. ಅಪಘಾತದ ತೀವ್ರತೆಗೆ ತೀವ್ರವಾಗಿ ಗಾಯಗೊಂಡಿದ್ದ ಶಾಮದೊರೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಹೆಂಡತಿ ಎದುರೇ ಪ್ರಾಣ ಬಿಟ್ಟ ಗಂಡ

ಸಂಬಂಧಿಗಳು ತೀರಿಕೊಂಡಿದ್ದರಿಂದ ಅಂತ್ಯಕ್ರಿಯೆಗೆ ತಮಿಳುನಾಡಿಗೆ ಹೋಗಿದ್ದ ಕುಟುಂಬ. ಅಲ್ಲಿಂದ ಬೆಳಗ್ಗೆಯಷ್ಟೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಆಗ ಮನೆಗೆ ಹೋಗಲು ಪಾರ್ಕಿಂಗ್‌ನಿಂದ ಹೊರಗೆ ಬರುತ್ತಿದ್ದ ದಂಪತಿ. ಈ ವೇಳೆ ಕಾರು ರಿವರ್ಸ್ ತೆಗೆಯುವಾಗ ದುರಂತ ಸಂಭವಿಸಿದೆ. ಕಾರಿಗೆ ಸಿಲುಕಿ ಪತ್ನಿಯ ಕಣ್ಮುಂದೆಯೇ ಪ್ರಾಣಬಿಟ್ಟ ನತದೃಷ್ಟ ಪತಿ. ಈ ದೃಶ್ಯ ಕಂಡು ಮುಗಿಲು ಮುಟ್ಟಿದ ಪತ್ನಿಯ ಅಕ್ರಂದನ. ಠಾಣೆ ಬಳಿಯೂ 'ನನ್ನ ಕಣ್ಣೆದುರೇ ನನ್ನ ಗಂಡನ ಪ್ರಾಣ ಹೋಯ್ತು..' ಎಂದು ಕಣ್ಣೀರು ಹಾಕಿದ ಪತ್ನಿ ಈ ದೃಶ್ಯ ನೆರೆದವರಿಗೂ ಕಣ್ಣೀರು ತರಿಸಿತು. ಚಾಲಕ ಬೇಜವಾಬ್ದಾರಿ, ನಾವು ಸ್ವಲ್ಪ ಎಚ್ಚರಿಕೆ ತಪ್ಪಿದರೂ ಎಂಥ ದುರಂತ ನಡೆದುಹೋಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..