ಸಕಲೇಶಪುರ: ಸಿಸಿ ಕ್ಯಾಮೆರಾದ ಕಣ್ತಪ್ಪಿಸಿ ಹಸು ತಿಂದ ಚಿರತೆ
ಚಿರತೆ ಹಾವಳಿಯ ಬಗ್ಗೆ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಅರಣ್ಯ ಇಲಾಖೆಯ ಸಿಸಿಎಫ್ ರವಿಶಂಕರ್, ಡಿಎಫ್ಒ ಮೋಹನ ಕುಮಾರ್ ಹಾಗು ಉಪವಿಭಾಗಾಧಿಕಾರಿ ಡಾ. ಶೃತಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥತಿ ಅವಲೋಕಿಸಿ ಚಿರತೆ ಸೆರೆ ಹಿಡಿಯುವ ಎಲ್ಲಾ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
![Leopard Attack on Cow at Sakleshpura in Hassan grg Leopard Attack on Cow at Sakleshpura in Hassan grg](https://static-ai.asianetnews.com/images/01hfkda8akpb9jvctadjga1fwb/new-project---2023-11-19t143119-787_363x203xt.jpg)
ಸಕಲೇಶಪುರ(ಡಿ.09): ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ವಾರದಿಂದ ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ. ಕಳೆದೊಂದು ವಾರದ ಹಿಂದೆ ಗ್ರಾಮದ ಹೊರವಲಯದ ಹೇಮಾವತಿ ನದಿ ದಂಡೆಯಲ್ಲಿ ಮೇವಿಗಾಗಿ ಕಟ್ಟಿ ಹಾಕಲಾಗಿದ್ದ ಹಸುವನ್ನು ತಿಂದಿದ್ದ ಚಿರತೆ, ಮರುದಿನ ಮತ್ತೊಂದು ಹಸುವನ್ನು ಬಲಿ ಪಡೆದಿತ್ತು. ಇದರಿಂದ ಗಾಬರಿಯಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದರಿಂದಾಗಿ ಅರಕಲಗೂಡಿನಿಂದ ಬೋನ್ ತರಿಸಿ ಹಸು ತಿಂದ ಸ್ಥಳದಲ್ಲಿ ಇಡಲಾಗಿತ್ತು. ಆದರೆ, ಮೂರು ದಿನ ಕಳೆದರು ಬೋನ್ ಸಮೀಪ ಸುಳಿಯದ ಚಿರತೆ ಮಾವಿನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರೆದುರೇ ಕೋಳಿ ಬೇಟೆಯಾಡಿತ್ತು.
ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ೭ ಬೋನು ಹಾಗೂ ೬ ಕಡೆ ಸಿಸಿ ಕ್ಯಾಮೆರಾ ಆಳವಡಿಸಿ ಗ್ರಾಮಸ್ಥರ ರಕ್ಷಣೆ ಹಾಗೂ ಚಿರತೆ ಚಲನವಲನದ ಬಗ್ಗೆ ತಿಳಿಯಲು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಮಧ್ಯೆ ಮತ್ತೆ ಹಸುವೊಂದನ್ನು ತಿಂದಿರುವ ಚಿರತೆ ಸಿ.ಸಿ ಕ್ಯಾಮರದಲ್ಲೂ ಸೆರೆಯಾಗಿಲ್ಲ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೋಟ, ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದು ಇತ್ತಿಚ್ಚಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿಮೆಂಟ್ ಮಂಜು ಎದುರು ಗ್ರಾಮಸ್ಥರು ತಮ್ಮ ಆಹವಾಲನ್ನು ತೋಡಿಕೊಂಡರು.
ಹಾಸನ: ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಯದುವೀರ್ ದಂಪತಿ..!
ಚಿರತೆ ಹಾವಳಿಯ ಬಗ್ಗೆ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಅರಣ್ಯ ಇಲಾಖೆಯ ಸಿಸಿಎಫ್ ರವಿಶಂಕರ್, ಡಿಎಫ್ಒ ಮೋಹನ ಕುಮಾರ್ ಹಾಗು ಉಪವಿಭಾಗಾಧಿಕಾರಿ ಡಾ. ಶೃತಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥತಿ ಅವಲೋಕಿಸಿ ಚಿರತೆ ಸೆರೆ ಹಿಡಿಯುವ ಎಲ್ಲಾ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕರು, ತಾಲೂಕಿನಲ್ಲಿ ಮಾನವ ಮತ್ತು ವನ್ಯ ಮೃಗಗಳ ಸಂಘರ್ಷ ಮಿತಿ ಮಿರುತಿದ್ದು , ರೈತರು ಕಂಗಲಾಗಿದ್ದಾರೆ, ನನಗೆ ಕ್ಷೇತ್ರದ ಜನರ ಹಿತರಕ್ಷಣೆ ಮುಖ್ಯ. ಸರ್ಕಾರ ಚಿರತೆಯನ್ನು ಜಿವಂತವಾಗಿ ಹಿಡಿಯಲು ಸಾಧ್ಯವಾಗದಿದ್ದರೆ, ಗುಂಡ್ಡಿಟ್ಟು ಸಾಯಿಸಿ ಎಂದು ಚಳಿಗಾಳದ ಅಧಿವೇಶನದಲ್ಲಿ ಸರ್ಕಾರವನ್ನು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದರು.