Lakkundi News: ಲಕ್ಕುಂಡಿಯಲ್ಲಿ ನಿಧಿ ಸಿಗುತ್ತಲಿದೆ, ಇನ್ನೊಂದು ಕಡೆ ಉತ್ಖನನವೂ ಆಗುತ್ತಿದೆ. ಹಾಗಾದರೆ ಯಾವ ರಾಜರು ಈ ಸ್ಥಳವನ್ನು ಆಳಿದ್ದರು? ಇಲ್ಲಿ ನಿಧಿ ಹೂತಿಟ್ಟಿದ್ದು ಸತ್ಯವೇ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಬಂಗಾರ, ನಿಧಿ ಸಿಗುತ್ತಿರುವುದು, ಅಷ್ಟೇ ಅಲ್ಲದೆ ನಾಗರಹಾವು ಪ್ರತ್ಯಕ್ಷವಾಗುತ್ತಿರುವ ಸುದ್ದಿಗಳು ವರದಿ ಆಗುತ್ತಿವೆ. ಹಾಗಾದರೆ ಲಕ್ಕುಂಡಿಯಲ್ಲಿ ಏನಿದೆ? ಇದರ ಇತಿಹಾಸ ಗೊತ್ತಿದೆಯಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಕ್ಕುಂಡಿಯನ್ನು ಮೊದಲು ಲೋಕ್ಕಿಗುಂಡಿ ಎಂದು ಕರೆಯಲಾಗುತ್ತಿತ್ತು. ಕರ್ನಾಟಕದ ಇತಿಹಾಸದಲ್ಲಿ ಒಂದು ಸುಣ್ಣದ ಅಕ್ಷರದಲ್ಲಿ ಬರೆಯಬೇಕಾದ ಜಾಗವಿದು. ಕಲೆ, ವಾಸ್ತುಶಿಲ್ಪ, ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಜಾಗವಿದು. ಇದು ದಕ್ಷಿಣ ಭಾರತದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು.

ಲಕ್ಕುಂಡಿಯ ಇತಿಹಾಸ, ರಾಜವಂಶಗಳು

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯ ಸುವರ್ಣ ಯುಗ ಆರಂಭವಾಗಿತ್ತು 11ನೇ, 12ನೇ ಶತಮಾನದಲ್ಲಿ ಚಾಲುಕ್ಯರ ಪ್ರಮುಖ ಪ್ರಾಂತ್ಯ. ಇಲ್ಲಿ ಇರುವ ವಾಸ್ತುಶಿಲ್ಪವನ್ನು 'ಲಕ್ಕುಂಡಿ ಶೈಲಿ' ಎಂದೇ ಕರೆಯಲಾಗಿದೆ. ಚಾಲುಕ್ಯರ ನಂತರ ಈ ಸ್ಥಳವನ್ನು ಕಳಚುರಿಗಳು, ಸೇವುಣರು (ಯಾದವರು) ಮತ್ತು ಹೊಯ್ಸಳರು ಆಳಿದ್ದಾರೆ.

ಹೊಯ್ಸಳ ದೊರೆ ಇಮ್ಮಡಿ ವೀರಬಲ್ಲಾಳನು ಲಕ್ಕುಂಡಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. 'ದಾನಚಿಂತಾಮಣಿ' ಎಂದು ಖ್ಯಾತಿಯಾದ ಅತ್ತಿಮಬ್ಬೆ ಇಲ್ಲಿನ ಜೈನ ಧರ್ಮದ ದೇವಸ್ಥಾನಗಳ ಪುನರುತ್ಥಾನಕ್ಕೆ, ಬ್ರಹ್ಮ ಜಿನಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ ಎನ್ನಲಾಗಿದೆ.

ಲಕ್ಕುಂಡಿ ಮತ್ತು ನಿಧಿಯ ಸಂಬಂಧ

ಲಕ್ಕುಂಡಿಗೂ 'ನಿಧಿ'ಗೂ ಸಂಬಂಧವಿದೆ, ಇದು ಕೇವಲ ಕಟ್ಟುಕಥೆಯಲ್ಲ, ಅದಕ್ಕೊಂದು ನಿಜವಾದ ಐತಿಹಾಸಿಕ ಹಿನ್ನೆಲೆಯಿದೆ. ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯು ಚಿನ್ನದ ನಾಣ್ಯಗಳನ್ನು ಮುದ್ರಿಸುವ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ಶಾಸನಗಳಲ್ಲಿ 'ಲೊಕ್ಕಿಗುಂಡಿ ಗದ್ಯಾಣ' ಎಂಬ ನಾಣ್ಯದ ಉಲ್ಲೇಖವಿದೆ. ಇಲ್ಲಿ ಆಗ ಚಿನ್ನದ ವ್ಯಾಪಾರ, ನಾಣ್ಯಗಳ ಚಲಾವಣೆ ಇಲ್ಲಿ ಹೇರಳವಾಗಿತ್ತು. ಹೀಗಾಗಿ ಈ ಸ್ಥಳವನ್ನು "ಶ್ರೀಮಂತ ನಗರ" ಎಂದು ಕರೆಯಲಾಗುತ್ತಿತ್ತು.

ಗುಪ್ತ ನಿಧಿಯ ನಂಬಿಕೆ

ಇಲ್ಲಿನ ದೇವಾಲಯಗಳ ಅಡಿಪಾಯ, ರಹಸ್ಯ ಕೋಣೆಗಳು ಮತ್ತು ಕಲ್ಯಾಣಿಗಳಲ್ಲಿ (ಬಾವಿಗಳು) ರಾಜರು ಚಿನ್ನವನ್ನು ಇಟ್ಟಿರಬಹುದು. ರಾಜವಂಶಸ್ಥರು ಆಕ್ರಮಣ ಮಾಡುವಾಗ ತಮ್ಮ ಸಂಪತ್ತನ್ನು ಬಚ್ಚಿಟ್ಟಿರಬಹುದು ಎಂದು ಜನರು ನಂಬಿದ್ದಾರೆ.

ಇಲ್ಲಿನ ದೇವಾಲಯಗಳು, ಬಾವಿಗಳ ರಚನೆಯು ತುಂಬ ಸಂಕೀರ್ಣವಾಗಿದೆ. ಅವುಗಳ ಅಡಿಯಲ್ಲಿ ನಿಧಿ ಇದೆ ಎಂದು ಹಲವು ಬಾರಿ ದುಷ್ಕರ್ಮಿಗಳು ಉತ್ಖನನ ಮಾಡಿದ್ದರು.

ಇಂದು ಲಕ್ಕುಂಡಿ ಎನ್ನುವ ನಗರವು ಸುಮಾರು 50ಕ್ಕೂ ಹೆಚ್ಚು ದೇವಾಲಯಗಳು, 100ಕ್ಕೂ ಹೆಚ್ಚು ಶಾಸನಗಳು ಹಾಗೂ 29ಕ್ಕೂ ಹೆಚ್ಚು ಸುಂದರ ಕಲ್ಯಾಣಿಗಳನ್ನು ಹೊಂದಿರುವ ತೆರೆದ ಮ್ಯೂಸಿಯಂ ಆಗಿದೆ.