- Home
- Karnataka Districts
- ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!
ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!
ಗದಗದ ಲಕ್ಕುಂಡಿ ಐತಿಹಾಸಿಕ ಉತ್ಖನನ ಸ್ಥಳದಲ್ಲಿ ಕಾರ್ಮಿಕರ ಹಿತದ ನೆಪದಲ್ಲಿ ಬೆಂಗಳೂರಿನ ಹೋರಾಟಗಾರರೊಬ್ಬರು ಕೆಲಸಕ್ಕೆ ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಹೋರಾಟಗಾರನನ್ನು ವಶಕ್ಕೆ ಪಡೆದರು.

ಲಕ್ಕುಂಡಿ ಉತ್ಖನನ ಜಾಗದಲ್ಲಿ ಕಾರ್ಮಿಕ ಮುಖಂಡನ ಹೈಡ್ರಾಮಾ
ಗದಗ (ಜ.23): ದೇಶದ ಗಮನ ಸೆಳೆದಿರುವ ಲಕ್ಕುಂಡಿಯ ಐತಿಹಾಸಿಕ ಉತ್ಖನನ ಸ್ಥಳದಲ್ಲಿ ಇಂದು ತೀವ್ರ ಹೈಡ್ರಾಮಾ ನಡೆದಿದೆ. ಕಾರ್ಮಿಕರ ಹಿತರಕ್ಷಣೆಯ ನೆಪದಲ್ಲಿ ಉತ್ಖನನ ಕಾರ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ ಬೆಂಗಳೂರು ಮೂಲದ ಹೋರಾಟಗಾರ ಅಶ್ವಥ್ ಮರಿಗೌಡರ್ ಎಂಬುವವರನ್ನು ಸ್ಥಳೀಯ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಏಕಾಏಕಿ ಧರಣಿ ಮತ್ತು ಬೇಡಿಕೆಗಳು
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿರುವಾಗಲೇ ಸ್ಥಳಕ್ಕೆ ಆಗಮಿಸಿದ ಅಶ್ವಥ್ ಮರಿಗೌಡರ್, ತಾನು 'ನೆರವು ಅಸಂಘಟಿತ ಕಾರ್ಮಿಕರ ಸಂಘಟನೆ'ಯ ರಾಜ್ಯಾಧ್ಯಕ್ಷ ಎಂದು ಪರಿಚಯಿಸಿಕೊಂಡರು. ಉತ್ಖನನದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ ಮತ್ತು ಅವರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು (Safety Gears) ಒದಗಿಸಿಲ್ಲ ಎಂದು ಆರೋಪಿಸಿ, ಏಕಾಏಕಿ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿ ಧರಣಿ ಕುಳಿತರು.
ಸ್ಥಳೀಯರ ಆಕ್ರೋಶ ಮತ್ತು ಕ್ಲಾಸ್
ಉತ್ಖನನಕ್ಕೆ ಅಡ್ಡಿಪಡಿಸುತ್ತಿರುವುದನ್ನು ಕಂಡ ಲಕ್ಕುಂಡಿಯ ಗ್ರಾಮಸ್ಥರು ಪ್ರತಿಭಟನಾಕಾರನ ವಿರುದ್ಧ ತಿರುಗಿಬಿದ್ದರು. 'ಹಲವು ದಶಕಗಳ ನಂತರ ನಮ್ಮೂರಿನ ಇತಿಹಾಸ ಹೊರಬರುತ್ತಿದೆ, ಇಂತಹ ಸಮಯದಲ್ಲಿ ಬೆಂಗಳೂರಿನಿಂದ ಬಂದು ಇಲ್ಲಿ ಯಾಕೆ ಹೈಡ್ರಾಮಾ ಮಾಡುತ್ತಿದ್ದೀರಿ?' ಎಂದು ಗ್ರಾಮಸ್ಥರು ಅಶ್ವಥ್ನನ್ನು ಪ್ರಶ್ನಿಸಿದರು.
ಕಾರ್ಮಿಕರ ಪರ ಹೋರಾಟದ ಹೆಸರಲ್ಲಿ ಇತಿಹಾಸದ ಶೋಧಕ್ಕೆ ಅಡ್ಡಿ ಮಾಡುತ್ತಿರುವುದಕ್ಕೆ ತೀವ್ರ ಛೀಮಾರಿ ಹಾಕಿದರು. ಗ್ರಾಮಸ್ಥರು ಮತ್ತು ಹೋರಾಟಗಾರನ ನಡುವೆ ಕೆಲಕಾಲ ತೀವ್ರ ವಾಕ್ಸಮರ ನಡೆಯಿತು.
ನಿಧಿ ಹಿಂದಿರುಗಿಸಿದ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯತ್ನಿಂದ ಬಂಪರ್ ಕೊಡುಗೆ ಘೋಷಣೆ
ಪೊಲೀಸ್ ವಶಕ್ಕೆ
ಇನ್ನು ಗ್ರಾಮಸ್ಥರು ಮತ್ತು ಕಾರ್ಮಿಕ ಮುಖಂಡನ ನಡುವಿನ ವಾಗ್ವಾದ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಗ್ರಾಮಾಂತರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಸಾರ್ವಜನಿಕ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ನಿಷೇಧಿತ ಪ್ರದೇಶದಲ್ಲಿ ಗಲಾಟೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅಶ್ವಥ್ ಮರಿಗೌಡರ್ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಕೆಲಸ ಪುನಾರಂಭ
ಇದರಿಂದಾಗಿ ಕೆಲಕಾಲ ಸ್ಥಗಿತಗೊಂಡಿದ್ದ ಉತ್ಖನನ ಕಾರ್ಯವು ಮತ್ತೆ ಸುಸೂತ್ರವಾಗಿ ಆರಂಭವಾಯಿತು. ಈ ಘಟನೆಯು ಸ್ಥಳೀಯರಲ್ಲಿ ಮಾತ್ರವಲ್ಲದೆ, ಇತಿಹಾಸ ಪ್ರೇಮಿಗಳಲ್ಲೂ ಅಸಮಾಧಾನ ಮೂಡಿಸಿದೆ. ಇತಿಹಾಸದ ಮಹತ್ವದ ಘಟ್ಟದಲ್ಲಿ ಅನಗತ್ಯ ವಿವಾದ ಸೃಷ್ಟಿಸದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

