ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯನ್ನು ಒಂದು ಘಟಸರ್ಪ ಕಾಯುತ್ತಿದೆ ಎಂಬ ನಂಬಿಕೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಉತ್ಖನನದ ವೇಳೆ ಕಂಡುಬಂದ ವಿಚಿತ್ರ ಕುರುಹುಗಳು ಮತ್ತು ಪುರಾಣದ ಕಥೆಗಳು ಈ ನಿಗೂಢತೆಯನ್ನು ಹೆಚ್ಚಿಸಿದ್ದು, ಸತ್ಯಾಸತ್ಯತೆ ತಿಳಿಯಲು ಉರಗ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾಗಿದ್ದೆ ಆಗಿದ್ದು. ಚಿತ್ರ ವಿಚಿತ್ರ ಕತೆಗಳು ಹುಟ್ಕೊಂಡಿವೆ. ಅಲ್ದೆ, ಚಿತ್ರ ವಿಚಿತ್ರ ಅನುಭವಗಳನ್ನು ಊರಿನ ಜನ್ರು ಹೇಳ್ಕೊಳ್ತಿದ್ದಾರೆ. ಇದ್ರಲ್ಲಿ ಘಟಸರ್ಪವೊಂದು ಊರಿನಲ್ಲಿ ಹಲವು ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತಿದೆ ಅನ್ನೋದು. ಅಂತಹ ಮೂರು ನಾಲ್ಕು ಸರ್ಪಗಳು ಊರನ್ನು ಕಾಯುತ್ತಿದೆಯಂತೆ. ಇದಕ್ಕೆ ಪೂರಕವಾಗಿ ಉತ್ಖನದ ವೇಳೆ ವಿಚಿತ್ರ ಕುರುಹುಗಳು ಪತ್ತೆಯಾಗುತ್ತಿವೆ. ಇದೆಲ್ಲವನ್ನು ಹುಡುಕಿಕೊಂಡು ಬಂದ ಉರುಗ ತಜ್ಞರಿಗೆ ಸಿಕ್ಕಿದ್ದೇನು? ಪುರಾಣಗಳು ಈ ಬಗ್ಗೆ ಏನು ಹೇಳುತ್ತವೆ. ಈ ಎಲ್ಲಾ ಡೀಟೈಲ್​​​ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ಘಟಸರ್ಪ, ನಿಧಿಯನ್ನು ಕಾವಲಾಗಿ ಕಾಯುತ್ತಿರುತ್ತದೆ. ನಿಧಿಯ ಹತ್ತಿರಕ್ಕೆ ಯಾರನ್ನು ಬಿಟ್ಕೊಳ್ಳೊದಿಲ್ಲ. ಅಕಸ್ಮಾತ್​​​ ಹಾವನ್ನು ದಾಟಿಕೊಂಡು ಯಾರಾದ್ರು ನಿಧಿಯನ್ನು ಮುಟ್ಟಿದ್ರೆ, ಅವ್ರ ಕತೆ ಅಲ್ಲಿಗೆ ಮುಗಿಯುತ್ತದೆ. ಯಾಕಂದ್ರೆ, ಹಾವಿನ ದ್ವೇಷ 12 ವರ್ಷ ಅನ್ನೋ ಮಾತಿದೆಯಲ್ಲ. ಈ ಮಾತು ಅದೆಷ್ಟು ನಿಜವೋ ಸುಳ್ಳೋ ಅನ್ನೋ ಮಾತನ್ನ ಆಮೇಲೆ ಕುಲಂಕುಷವಾಗಿ ಚರ್ಚೆ ಮಾಡೋಣ. ಆದ್ರೆ, ಅದಕ್ಕೂ ಮುಂಚಿತವಾಗಿ ಇವತ್ತು ನಿಮಗಾಗಿ ನಾವು ಹೊತ್ತಿರುವ ಸುದ್ದಿ ಯಾವುದು ಅನ್ನೋ ಮಾತನ್ನು ಹೇಳಿಬಿಡ್ತಿವಿ ಕೇಳಿ. ಹೌದು, ಇಡೀ ಕರ್ನಾಟಕದ ದೃಷ್ಟಿ ಇದೀಗ ಲಕ್ಕುಂಡಿಯ ಮೇಲೆ ಕೇಂದ್ರೀಕೃತವಾಗಿದೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಒಂದು ಕಣ್ಣು ಲಕ್ಕುಂಡಿ ಮೇಲೆ ಇದ್ದೇ ಇದೆ.

ಇಡೀ ದೇಶದ ಗಮನ ಸೆಳೆಯುತ್ತಿರುವ ಲಕ್ಕುಂಡಿ

ಕಳೆದ ಹನ್ನೆರಡು ದಿನಗಳಿಂದ ಇಡೀ ದೇಶದ ಜನ್ರ ಗಮನವನ್ನು ಲಕ್ಕುಂಡಿ ತನ್ನತ್ತ ಹಿಡಿದಿಟ್ಕೊಂಡಿದೆ. ಇದಕ್ಕೆ ಕಾರಣವಾಗಿರೋದು ನಿಧಿ. ತಾಮ್ರದ ಕಳಶದಲ್ಲಿ ಬರೋಬ್ಬರಿ ಅರ್ಧ ಕೆಜಿ ಬಂಗಾರ ಪತ್ತೆಯಾಗಿತ್ತು. ಅಮ್ಮ-ಮಗ ಮನೆಯ ಪಾಯ ತೆಗೆಯುತ್ತಿದ್ದ ವೇಳೆ, ಠಣ್​​ ಅಂತ ಶಬ್ದವಾಗಿದೆ. ಏನೋ ಇದ್ಯಲ್ಲ ಅಂತ ನೋಡಿದವ್ರಿಗೆ ಕಳಶ ಸಿಕ್ಕಿದೆ. ಆ ಕಳಶದಲ್ಲಿ ಬಂಗಾರದ ಒಡವೆಗಳು ಪತ್ತೆಯಾಗಿವೆ. ಕೂಡಲೇ ತಾಯಿ ಕಸ್ತೂರಿ ಹಾಗೂ ಮಗ ಪ್ರಜ್ವಲ್​​ ಅದನ್ನ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಸರ್ಕಾರದ ಸುಪರ್ದಿಗೆ ಕೊಟ್ಟುಬಿಟ್ಟಿದ್ದಾರೆ.

ನಿಧಿ ಸಿಕ್ಕ ಜಾಗದಲ್ಲೀಗ ಉತ್ಖನನ ನಡೀತಿದೆ. ಪ್ರತಿ ದಿನವೂ ಒಂದಲ್ಲ ಒಂದು ಅಚ್ಚರಿ ಉತ್ಖನದಲ್ಲಿ ಕಾಣಿಸ್ತಾನೆ ಇದೆ. ಈ ಅಚ್ಚರಿಗಳಲ್ಲೇ ಇದೀಗ ನಮ್ಮ ಕತೆಯ ಮೂಲ ಇರೋದು. ಹೌದು, ಈ ಅಚ್ಚರಿಗಳು ಇಡೀ ಲಕ್ಕುಂಡಿ ಜನ್ರಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಯಾರೊಬ್ಬರು ಇಲ್ಲಿಗೆ ಸುಳಿಯೋದಕ್ಕೆ ಹೆದರುತ್ತಿದ್ದಾರೆ. ಯಾಕಂದ್ರೆ, ಇಲ್ಲೊಂದು ಘಟ ಸರ್ಪ ಇದ್ಯಂತೆ. ಆ ಘಟ ಸರ್ಪ ಇಲ್ಲಿರೋ ನಿಧಿಯನ್ನು ಹಾಗೂ ಸ್ಥಳವನ್ನು ಕಾಯುತ್ತಿದ್ಯಂತೆ. ಈ ಏಳು ಹೆಡೆಯ ನಾಗರಹಾವನ್ನ ಇಲ್ಲಿನ ಕೆಲವ್ರು ನೋಡಿದ್ದಾರಂತೆ. ಈ ಹಾವು ಎಲ್ಲರಿಗೂ ಕಾಣಿಸೋದಿಲ್ವಂತೆ. ಅದೃಷ್ಟ ಇದ್ದವ್ರಿಗೆ ಹಾಗೂ ಪುಣ್ಯವಂತರಿಗೆ ಮಾತ್ರವೇ ಇಂತಹ ಘಟಸರ್ಪ ಕಾಣುವುದಂತೆ.

ಲಕ್ಕುಂಡಿಯ ನಿಧಿ ಬಗ್ಗೆ ದಿನಕ್ಕೊಂಡು ಕತೆಗಳು ಶುರುವಾಗುತ್ತಲೆ ಇವೆ. ಅಲ್ಲಿ ಪತ್ತೆಯಾಗುತ್ತಿರುವ ವಿಚಿತ್ರ ಕುರುಹುಗಳು ಅದಕ್ಕೆ ಪುಷ್ಟಿ ನೀಡುತ್ತಿವೆ. ಈ ಬಗ್ಗೆ ನಮ್ಮ ಪುರಾಣ ಕತೆಗಳು ಏನು ಹೇಳುತ್ತವೆ. ಆದ್ಯಾತ್ಮಿಕ ವಿದ್ವಾಂಸರು ಏನು ಹೇಳುತ್ತಾರೆ ಅನ್ನೋದನ್ನ ಇಲ್ಲಿ ನೋಡೋಣ. ಪುರಾಣಗಳಲ್ಲಿಯೂ ನಿಧಿಯನ್ನು ಸರ್ಪಕಾವಲು ಕಾಯುತ್ತದೆ ಅನ್ನೋದನ್ನು ಹೇಳಲಾಗಿದೆ. ಹಿಂದೂಗಳಂತೆಯೇ ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲೂ ಇಂತಹದೊಂದು ವಿಚಾರವನ್ನು ಬಲವಾಗಿ ನಂಬಿಕೊಂಡು ಬರಲಾಗಿದೆ. ಈ ನಂಬಿಕೆಯಿಂದಲೇ ಲಕ್ಕುಂಡಿಯಲ್ಲೂ ಕಾರ್ಯಾಚರಣೆಯನ್ನು ಮಾಡಲಾಯ್ತು.

ಲಕ್ಕುಂಡಿಯಲ್ಲಿ ಜನ್ರಿಗೆ ಘಟಸರ್ಪವೊಂದು ಕಾಣಿಸುತ್ತಿದೆ.. ಒಂದಲ್ಲ ಅಂತಹ ಘಟಸರ್ಪಗಳು ಮೂರು ನಾಲ್ಕು ಇವೆ ಅನ್ನೋದು ಗ್ರಾಮಸ್ಥರ ಮಾತಾಗಿತ್ತು. ಇದಕ್ಕಾಗಿ ತಮ್ಮದೆ ಆದ ಅನುಭವಗಳನ್ನು ಇಟ್ಕೊಂಡು ಕತೆಗಳನ್ನು ಹೇಳುತ್ತಿದ್ರು. ಇದೆಲ್ಲವೂ ಗ್ರಾಮದಲ್ಲಿ ಆತಂಕವನ್ನು ಉಂಟುಮಾಡಿತ್ತು. ಈ ಆತಂಕವನ್ನು ದೂರ ಮಾಡೋದಕ್ಕೆ ಬಂದಿದ್ದ ಉರುಗ ತಜ್ಞರಿಗೆ ಏನು ಸಿಕ್ತು ಇಲ್ಲಿದೆ ನೋಡಿ.