Asianet Suvarna News Asianet Suvarna News

ಕನಕ ಮೂರ್ತಿ ಪ್ರತಿಷ್ಠಾಪನೆ: ಹುನಗುಂದ ಶಾಸಕರ ನಡೆಗೆ ಖಂಡನೆ, ಕುರುಬ ಸಮಾಜದಿಂದ ತಕ್ಕ ಪಾಠದ ಎಚ್ಚರಿಕೆ

ಕುರುಬ ಸಮುದಾಯದ ಕೆಲವರನ್ನು ಮುಂದಿಟ್ಟುಕೊಂಡು ಸಮುದಾಯದಲ್ಲಿ ಒಡಕನ್ನು ತಂದಿರುವ ಶಾಸಕರ ವರ್ತನೆಗೆ ಸಮುದಾಯ ಬರಲಿರುವ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ: ಕುರುಬ ಸಮುದಾಯದ ಮುಖಂಡರು 

Kuruba Community Leaders Slams Hungund BJP MLA Doddanagouda Patil grg
Author
First Published Dec 7, 2022, 10:45 PM IST

ಬಾಗಲಕೋಟೆ(ಡಿ.07): ಹುನಗುಂದ ಮತಕ್ಷೇತ್ರದಲ್ಲಿನ ಇಳಕಲ್‌ ಹಾಗೂ ಹುನಗುಂದ ಪಟ್ಟಣದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ವಿಷಯವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಕುರುಬ ಸಮುದಾಯದ ಹಿರಿಯರ ವಿಶ್ವಾಸ ಪಡೆಯದೆ ಮನಬಂದಂತೆ ನಿರ್ಣಯ ಮಾಡುತ್ತಿರುವ ಶಾಸಕ ದೊಡ್ಡನಗೌಡ ಪಾಟೀಲ ಡಿ.9ರಂದು ಹಮ್ಮಿಕೊಂಡಿರುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕೈಬಿಡದಿದ್ದರೆ ಮುಂಬರುವ ದಿನಗಳಲ್ಲಿ ಸಮುದಾಯ ರಾಜಕೀಯವಾಗಿ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಸಮುದಾಯದ ಮುಖಂಡರು ಎಚ್ಚರಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುರುಬ ಸಮುದಾಯದ ಮುಖಂಡ, ಜಿ.ಪಂ. ಮಾಜಿ ಸದಸ್ಯರಾದ ಶಶಿಕಾಂತ ಪಾಟೀಲ, ವಿರೇಶ ಉಂಡೋಡಿ ಅವರು, ಕುರುಬ ಸಮುದಾಯದ ಕೆಲವರನ್ನು ಮುಂದಿಟ್ಟುಕೊಂಡು ಸಮುದಾಯದಲ್ಲಿ ಒಡಕನ್ನು ತಂದಿರುವ ಶಾಸಕರ ವರ್ತನೆಗೆ ಸಮುದಾಯ ಬರಲಿರುವ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ. ವೈಯಕ್ತಿಕವಾಗಿ, ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಶಾಸಕರ ನಡೆಗೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.

ತಾಕತ್ತಿದ್ದರೆ ನನ್ನನ್ನು ಬಂಧಿಸಲಿ: ಹುನಗುಂದ ಮಾಜಿ ಶಾಸಕ ಕಾಶಪ್ಪನವರ

ಹುನಗುಂದ ಮತಕ್ಷೇತ್ರದಲ್ಲಿ ಕುರುಬ ಸಮುದಾಯ 45 ಸಾವಿರಕ್ಕೂ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ಸಮುದಾಯವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ದೊಡ್ಡನಗೌಡ ಪಾಟೀಲ ಅಂದು ನೀಡಿದ ಕುರುಬ ಸಮಾಜದ ಅಭಿವೃದ್ಧಿಗೆ ನೀಡಿರುವ ಭರವಸೆ ಹುಸಿಯಾಗಿದೆ. ಹುನಗುಂದದಲ್ಲಿರುವ ಸಮುದಾಯದ ಮೂರು ಎಕರೆ ಜಮೀನಿನಲ್ಲಿ ಸಮುದಾಯದ ಅಭಿವೃದ್ಧಿಗೆ .5 ಕೋಟಿ ಹಣ ನೀಡುವುದಾಗಿ ಹೇಳಿದ್ದರು. ಈವರೆಗೂ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಇಂತಹ ಶಾಸಕರು ಚುನಾವಣೆ ಹತ್ತಿರ ಬಂದಾಗ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಆತುರ ಏಕೆ ಎಂದು ಪ್ರಶ್ನಿಸಿದರು.

ಸಮುದಾಯದಿಂದ ಮೂರ್ತಿ ಸ್ಥಾಪನೆಗೆ ಒಲವು:

ಹುನಗುಂದ-ಇಳಕಲ್‌ನಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಖರ್ಚು-ವೆಚ್ಚವನ್ನು ನೋಡಿಕೊಳ್ಳಲು ಈ ಹಿಂದೆ ಎಸ್‌.ಆರ್‌.ನವಲಿಹಿರೇಮಠ ಪ್ರಸ್ತಾವ ತಂದಿದ್ದರು. ಆಗ ಸಮುದಾಯ ಸಭೆ ಸೇರಿ ಯಾರಿಂದಲೂ ಹಣ ಪಡೆದು ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಬೇಡ. ಮೂರ್ತಿ ಪ್ರತಿಷ್ಠಾಪನೆಗೆ ಕುರುಬ ಸಮುದಾಯದವರೇ ಹಣ ಸೇರಿಸಿ ಮಾಡೋಣ. ಉಳಿದಂತೆ ಸಮುದಾಯಕ್ಕೆ ಎಲ್ಲರೂ ಸಹ ಸಹಾಯ ನೀಡಲಿ. ಅದನ್ನು ಪಡೆಯೋಣ ಎಂದು ನಿರ್ಧಾರಕ್ಕೆ ಬಂದಿದ್ದೆವು. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದರೂ ಸಹ ಅದನ್ನು ಪರಿಶೀಲಿಸದೇ ಏಕಪಕ್ಷೀಯವಾಗಿ ಆತುರದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಕಾರಣವಾದರೂ ಏನು ಎಂದು ಪ್ರಶ್ನಿಸಿದರು.
ಮೂರು ಬಾರಿ ಶಾಸಕರಾಗಿದ್ದರೂ ಕೂಡ ಕುರುಬ ಸಮುದಾಯದ ನೆನಪು ಇಟ್ಟುಕೊಂಡು ಯಾವ ಕೆಲಸವನ್ನೂ ಮಾಡದ ಶಾಸಕ ದೊಡ್ಡನಗೌಡರು ಇದೀಗ ಸಮುದಾಯದ ನಾಯಕರನ್ನು ದೂರವಿಟ್ಟು ಅವರ ಸಲಹೆಗೆ ಬೆಲೆ ನೀಡದೆ ಇರುವುದನ್ನು ತಾಲೂಕಿನಲ್ಲಿರುವ ಬಹುಸಂಖ್ಯಾತ ಕುರುಬ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬುದನ್ನು ಶಾಸಕರು ಮರೆಯಬಾರದು ಎಂದರು.

ಪಕ್ಷಾತೀತವಾಗಿ ಒಂದಾದ ನಾಯಕರು:

ಶಾಸಕ ದೊಡ್ಡನಗೌಡರ ನಡೆಗೆ ಪಕ್ಷಾತೀತವಾಗಿ ಒಂದಾಗಿರುವ ಹುನಗುಂದದ ಕುರುಬ ಸಮುದಾಯದ ನಾಯಕರುಗಳು ಸಮುದಾಯದ ವಿಷಯದಲ್ಲಿ ಏನೇ ಅನ್ಯಾಯವಾದರೂ ನಾವು ಎಲ್ಲರೂ ಒಂದಾಗುತ್ತೇವೆ ಎಂದು ಹೇಳಿದರಲ್ಲದೇ, ಅದರಲ್ಲೂ ಕನಕದಾಸರ ವಿಷಯದಲ್ಲಿ ಶಾಸಕರ ವರ್ತನೆಗೆ ನಮ್ಮ ತೀವ್ರ ಖಂಡನೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಗಂಗಾಧರ ದೊಡಮನಿ ಮಾತನಾಡಿ, ಈ ಹಿಂದೆ ವಿಜಯಾನಂದ ಕಾಶಪ್ಪನವರ ಶಾಸಕರಾಗಿದ್ದಾಗ ತಾಲೂಕಿಗೆ 5 ಕನಕದಾಸ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದರೂ ಸಹ ಸದ್ಯದ ಶಾಸಕರು ಅವುಗಳ ನಿರ್ಮಾಣ ಮಾಡಲು ಅವಕಾಶ ಕೊಡಲಿಲ್ಲ ಎಂದು ದೂರಿದರಲ್ಲದೇ, ಸಮುದಾಯದ ಪ್ರಗತಿಯನ್ನು ಬಯಸದ ಇಂತವರಿಗೆ ಸಮಾಜ ಸರಿಯಾದ ಉತ್ತರ ನೀಡಲಿದೆ ಎಂದರು.

Bagalakote: ಸರ್ಕಾರದ ಕಬ್ಬಿನ ಬೆಲೆ ನಿಗದಿ ಕ್ರಮಕ್ಕೆ ಮುಧೋಳ ರೈತರ ಅಸಮಾಧಾನ

ಒಪ್ಪಿಗೆ ಪಡೆದಿಲ್ಲ:

ಡಿ.9ರಂದು ನಡೆಯುವ ಮೂರ್ತಿ ಪ್ರತಿಷ್ಠಾಪನೆಗೆ ಸಂಬಧಿಸಿದಂತೆ ಹಾಕಲಾಗಿರುವ ಬ್ಯಾನರ್‌ ಹಾಗೂ ಪೋಸ್ಟರ್‌ಗಳಲ್ಲಿ ನಮ್ಮ ಒಪ್ಪಿಗೆ ಇಲ್ಲದೇ ಭಾವಚಿತ್ರಗಳನ್ನು ಬಳಸಿಕೊಂಡಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಪೊಲೀಸರು ಈ ಬ್ಯಾನರ್‌ಗಳನ್ನು ತೆಗೆಸಬೇಕು ಎಂದು ಆಗ್ರಹಿಸಿದರು. ಸಮುದಾಯದ ಮುಖಂಡರಾದ ವಿಜಯ ಗದ್ದನಕೇರಿ, ನಿಂಬಣ್ಣ ಮುಕ್ಕನ್ನವರ, ದೇವು ಡಂಬಳ ಉಪಸ್ಥಿತರಿದ್ದರು.

ಹುನಗುಂದ ಮತಕ್ಷೇತ್ರದಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ನಾನು ಪ್ರಬಲ ಆಕಾಂಕ್ಷಿ. ಹೀಗಾಗಿ, ನನ್ನ ಏಳಿಗೆಯನ್ನು ಸಹಿಸದ ಶಾಸಕ ದೊಡ್ಡನಗೌಡ ಪಾಟೀಲ, ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸಮುದಾಯದ ಒಡಕಿಗೆ ಬಳಸಿಕೊಳ್ಳುತ್ತಿದ್ದಾರೆ. ನಾನು ಸೇರಿದಂತೆ ಕುರುಬ ಸಮುದಾಯದ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮೂರ್ತಿ ಪ್ರತಿಷ್ಠಾಪನೆಗೆ ಕುರುಬರ ವಿಶ್ವಾಸ ಪಡೆಯದೇ ಹೊರಟಿರುವ ಶಾಸಕ ದೊಡ್ಡನಗೌಡರಿಗೆ ಸಮುದಾಯದ ಮೇಲೆ ಪ್ರೀತಿ ಇದ್ದರೆ ತಾವೇ ನೀಡಿದ ಕಳೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಅಭಿವೃದ್ಧಿಗೆ .5 ಕೋಟಿ ಹಣ ನೀಡುವ ಆಶ್ವಾಸನೆ ಈಡೇರಿಸಬಹುದಾಗಿತ್ತು ಅಂತ ಮಾಜಿ ಜಿ.ಪಂ. ಸದಸ್ಯ ವಿರೇಶ ಉಂಡೋಡಿ ತಿಳಿಸಿದ್ದಾರೆ.
 

Follow Us:
Download App:
  • android
  • ios