ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರ ವಿದ್ಯಾರ್ಥಿಗಳಿಗೆ KSRTC ಬಸ್‌ನಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್‌ಪಾಸ್‌ ನೀಡಿದ್ದರೂ ಕೆಲವು ಬಸ್‌ಗಳ ನಿರ್ವಾಹಕರು ಹೀಗೆ ಮಾಡುತ್ತಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ನಲ್ಲಿ ಸಂಚರಿಸುವ ಸಂದರ್ಭ ವಿದ್ಯಾರ್ಥಿಗಳಲ್ಲಿ ಶಾಲಾ- ಕಾಲೇಜಿನ ಐಡಿ ಕಾರ್ಡ್‌ ಇಲ್ಲದಿದ್ದರೆ ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ.

ಮಡಿಕೇರಿ(ಸೆ.13): KSRTC ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಸ್‌ಪಾಸ್‌ಗೆ ಅವಕಾಶವಿದ್ದರೂ ಕೆಲವು ಬಸ್‌ನ ನಿರ್ವಾಹಕರು ಬಸ್‌ ಪ್ರವೇಶಕ್ಕೆ ನಿರಾಕರಣೆ ಮಾಡುತ್ತಿರುವುದು ಕಂಡುಬಂದಿದ್ದು, ಇದರಿಂದ ಪ್ರತಿದಿನ ಶಾಲಾ- ಕಾಲೇಜು ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ. ಇಂತಹ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Add Asianetnews Kannada as a Preferred SourcegooglePreferred

ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರ ವಿದ್ಯಾರ್ಥಿಗಳಿಗೆ KSRTC ಬಸ್‌ನಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್‌ಪಾಸ್‌ ನೀಡಿದ್ದರೂ ಕೆಲವು ಬಸ್‌ಗಳ ನಿರ್ವಾಹಕರು ಹೀಗೆ ಮಾಡುತ್ತಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ನಲ್ಲಿ ಸಂಚರಿಸುವ ಸಂದರ್ಭ ವಿದ್ಯಾರ್ಥಿಗಳಲ್ಲಿ ಶಾಲಾ- ಕಾಲೇಜಿನ ಐಡಿ ಕಾರ್ಡ್‌ ಇಲ್ಲದಿದ್ದರೆ ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಕಾರ್ಡ್‌ ಇಲ್ಲ ಎನ್ನುವ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳನ್ನು ಬಸ್‌ನಿಂದ ಇಳಿಸಿರುವ ಉದಾಹರಣೆಗಳಿವೆ.

ವಿದ್ಯಾರ್ಥಿಗಳನ್ನ ಬಸ್‌ಗೆ ಹತ್ತಿಸ್ಕೊಳಲ್ಲ:

ಮಡಿಕೇರಿ KSRTC ನಿಲ್ದಾಣದಲ್ಲಿ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿದೆ. ಮಡಿಕೇರಿ- ಸುಂಟಿಕೊಪ್ಪ- ಕುಶಾಲನಗರ ಮಾರ್ಗದಲ್ಲಿ ಮಡಿಕೇರಿ- ಮೈಸೂರು, ಮಡಿಕೇರಿ- ಹಾಸನ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸುತ್ತಿದೆ. ಆದರೆ ಕೆಲವು ಬಸ್‌ನ ನಿರ್ವಾಹಕರು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ ಮಾಡದಿರುವುದರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ಪಾಸ್ ಅವಕಾಶ ಇಲ್ಲ ಅಂತಾರೆ ನಿರ್ವಾಹಕರು:

ಮಡಿಕೇರಿ- ಕುಶಾಲನಗರ ಮಾರ್ಗದಲ್ಲಿ ಶಟ್ಲ್‌ ಬಸ್‌ ಸಂಚರಿಸುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ ಸುಂಟಿಕೊಪ್ಪ, ಕುಶಾಲನಗರಕ್ಕೆ ತೆರಳುವ ವಿದ್ಯಾರ್ಥಿಗಳು ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಅವಲಂಬಿಸುವಂತಾಗಿದೆ. ಆದರೆ ಕೆಲವು ನಿರ್ವಾಹಕರು ಬಸ್‌ಪಾಸ್‌ಗೆ ಅವಕಾಶವಿಲ್ಲ ಎಂದು ಸುಳ್ಳನ್ನು ಹೇಳುತ್ತಿದ್ದು, ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ.

ವಿಯೆಟ್ನಾಂನಿಂದ ಮತ್ತೆ ಬಂತು ಕಾಳುಮೆಣಸು : ಬೆಳೆಗಾರರು ಕಂಗಾಲು

ಅಂತಾರಾಜ್ಯ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಆದರೆ ಅಂತಾರಾಜ್ಯ ಬಸ್‌ ಅಲ್ಲದಿದ್ದರೂ ನಿರ್ವಾಹಕರು ಶಾಲಾ- ಕಾಲೇಜು ವಿದ್ಯಾರ್ಥಿಗಳು ಬಸ್‌ಗೆ ಹತ್ತುವ ಸಂದರ್ಭ ಈ ಬಸ್‌ನಲ್ಲಿ ಪಾಸ್‌ ವ್ಯವಸ್ಥೆ ಇಲ್ಲ. ಬೇರೆ ಬಸ್‌ಗೆ ಹೋಗಿ ಎನ್ನುವ ಮೂಲಕ ಸುಳ್ಳು ಹೇಳುತ್ತಿರುವುದು ‘ಕನ್ನಡಪ್ರಭ’ ಪ್ರತಿನಿಧಿ​ಗೆ ಪ್ರತ್ಯಕ್ಷವಾಗಿ ಕಂಡುಬಂದಿದೆ. ಒಂದೆರಡು ಬಸ್‌ನವರು ಹೀಗೆ ಮಾಡಿದರೆ ಪರವಾಗಿಲ್ಲ. ಆದರೆ ಬಹುತೇಕ ಬಸ್‌ನ ನಿರ್ವಾಹಕರು ಹೀಗೆ ಹೇಳಿದರೆ ಯಾವ ಬಸ್‌ನಲ್ಲಿ ಸಂಚಾರ ಮಾಡುವುದು ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿ:

ಮಡಿಕೇರಿ- ಕುಶಾಲನಗರ, ಕುಶಾಲನಗರ- ಮಡಿಕೇರಿ ಮಾರ್ಗವಾಗಿ ಬಹುತೇಕ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಶಟ್ಲ್‌ ಬಸ್‌ಗಳಲ್ಲಿ ಹೆಚ್ಚು ಮಂದಿ ವಿದ್ಯಾರ್ಥಿಗಳು ಸಂಚರಿಸುತ್ತಿರುವುದರಿಂದ ದೂರದ ವಿದ್ಯಾರ್ಥಿಗಳಿಗೆ ಇದರಲ್ಲಿ ತೆರಳಲು ಸಾಧ್ಯವಿಲ್ಲ. ಇದರಿಂದ ಎಕ್ಸ್‌ಪ್ರೆಸ್‌ನಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ಕೆಲವು ನಿರ್ವಾಹಕರು ಬಸ್‌ ಪಾಸ್‌ಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕವಾದ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂಬುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಗ್ರಹವಾಗಿದೆ.

-ವಿಘ್ನೇಶ್‌ ಎಂ. ಭೂತನಕಾಡು