ಈಗಲೂ ಇವಿಎಂ ಬಗ್ಗೆ ಅನುಮಾನ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 11-12ರಲ್ಲಿ ಗೆಲ್ಲುವ ವಿಶ್ವಾಸ| ಯಡಿಯೂರಪ್ಪನವರ ಸರ್ಕಾರಕ್ಕೆ ಬಹುಮತವಿಲ್ಲ| ಈ ಉಪ ಚುನಾವಣೆ ನಂತರ ಬಹುಮತ ಕಳೆದುಕೊಳ್ಳಲಿದ್ದು, ಮೈನಾರಿಟಿ ಸರ್ಕಾರದ ಪತನ ಗ್ಯಾರಂಟಿ| ಈ ಸರ್ಕಾರ ಬಿದ್ದ ನಂತರ ಮುಂದೇನಾಗುತ್ತದೆ ಎಂಬುದನ್ನು ನೋಡೋಣ ಎಂದ ಗುಂಡೂರಾವ್|

ಹರಪನಹಳ್ಳಿ(ಡಿ.01): ಬಿಜೆಪಿಯವರು ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಆಪರೇಷನ್‌ ಕಮಲ -2 ನಡೆಸಲು ಕೈ ಹಾಕಿದ್ದಾರೆ. ಅಂತಹ ಕೆಲಸಕ್ಕೆ ಮತ್ತೊಮ್ಮೆ ಕೈ ಹಾಕಿದರೆ ರಾಜ್ಯದ ಜನತೆ ಸುಮ್ಮನೆ ಕೂರಲ್ಲ. ಈಗಲೇ ಜನರು ಬೇಸತ್ತಿದ್ದಾರೆ. ಇದು ನಡೆದರೆ ಜನ ರೊಚ್ಚಿಗೆದ್ದು ಅವರನ್ನು ಹರಾಜು ಹಾಕುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 11-12ರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮತ ಯಂತ್ರದ (ಇವಿಎಂ) ಬಗ್ಗೆ ಈಗಲೂ ಅನುಮಾನವಿದೆ. ಬೇರೆ ಬೇರೆ ದೇಶದಲ್ಲಿ ಇವಿಎಂ ಬಳಕೆ ಇಲ್ಲ, ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತಿದೆ. ಆದ್ದರಿಂದ ನಮ್ಮಲ್ಲೂ ಇವಿಎಂ ಬಳಕೆ ಕೈ ಬಿಡಲು ಚುನಾವಣೆ ಆಯೋಗ ಗಂಭೀರವಾಗಿ ಚಿಂತಿಸಬೇಕು ಎಂದರು. ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡರೊಬ್ಬರು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅನೈತಿಕವಾಗಿ, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಇಂದೂ ಯಡಿಯೂರಪ್ಪನವರ ಸರ್ಕಾರಕ್ಕೆ ಬಹುಮತವಿಲ್ಲ. ಕೃತಕ ಬಹುಮತ ಸೃಷ್ಟಿಸಲಾಗಿದೆ. ಈ ಉಪ ಚುನಾವಣೆ ನಂತರ ಬಹುಮತ ಕಳೆದುಕೊಳ್ಳಲಿದ್ದು, ಮೈನಾರಿಟಿ ಸರ್ಕಾರದ ಪತನ ಗ್ಯಾರಂಟಿ. ಈ ಸರ್ಕಾರ ಬಿದ್ದ ನಂತರ ಮುಂದೇನಾಗುತ್ತದೆ ಎಂಬುದನ್ನು ನೋಡೋಣ ಎಂದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ