ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ, ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ತುಂಗಭದ್ರಾ ರೈಲು ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿ, ತಾನು ಪಾರಾಗುವ ಯತ್ನದಲ್ಲಿ ಇಂಜಿನ್ ಬಡಿದು ಮೃತಪಟ್ಟಿದ್ದಾರೆ.
ಕೊಪ್ಪಳ: ರೈಲಿನ ಇಂಜಿನ್ ಬಡಿದು ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾದ ದುರ್ಘಟನೆ ತಾಲೂಕಿನ ಹುಲಿಗಿಯಲ್ಲಿ ಜರುಗಿದೆ.
ಮೃತನು ಹೊಸಪೇಟೆ ಹತ್ತಿರದ ಚಿತವಾಡಗಿಯ ಜಗದೀಶ್ ಕೆ. (35) ಎಂದು ತಿಳಿದು ಬಂದಿದೆ. ಜಗದೀಶ್ ಪತ್ನಿಯೊಂದಿಗೆ ಸಂಬಂಧಿಕರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ರೈಲ್ವೆ ಸೇತುವೆ ಮೇಲಿನಿಂದ ನಡೆದುಕೊಂಡು ಹೋಗ್ತಿದ್ದಾಗ ಘಟನೆ
ಚಿತವಾಡಗಿಯಿಂದ ಬೈಕ್ ನಲ್ಲಿ ಪತ್ನಿಯೊಂದಿಗೆ ಆಗಮಿಸಿದ ಜಗದೀಶ್ ಹುಲಿಗಿಯಲ್ಲಿರುವ ತುಂಗಭದ್ರಾ ನದಿಗೆ ನಿರ್ಮಿಸಿರುವ ಬೃಹತ್ ರೈಲು ಸೇತುವೆ ಆಚೆ ಬೈಕ್ ನಿಲ್ಲಿಸಿ ರೈಲ್ವೆ ಸೇತುವೆ ಮೇಲಿನಿಂದ ನಡೆದುಕೊಂಡು ಕಾರ್ಯಕ್ರಮದತ್ತ ಹೊರಟಿದ್ದರು.
ಸೇತುವೆ ಮೇಲಿದ್ದಾಗಲೇ ರೈಲು ವೇಗವಾಗಿ ಬಂದಿದ್ದು, ಹತ್ತಿರ ಬಂದಾಗ ಗಮನಿಸಿ ಅವಸರದಲ್ಲಿಯೆ ಪತ್ನಿಯನ್ನು ಸೇತುವೆ ಪಕ್ಕ ಇರುವ ಬಾಕ್ಸ್ ನಂಥ ಸೇಫ್ಟಿ ಪ್ಲಾಟಫಾರ್ಮ್ ಗೆ ಕಳಿಸಿ ತಾನೂ ಹೋಗುವ ಪ್ರಯತ್ನದಲ್ಲಿದ್ದಾಗ ರೈಲಿನ ಇಂಜಿನ್ ಬಡಿದು ಜಗದೀಶ್ ಸೇತುವೆ ಮೇಲಿನಿಂದ ಕೆಳಗೆ ಬಿದ್ದು ನದಿಯ ಬಂಡೆಗೆ ಬಡಿದು ಸಾವಿಗೀಡಾಗಿದ್ಧಾರೆ. ಕೊಪ್ಪಳ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.


