Kodagu News: ನಾಲ್ಕು ದಿನಗಳ ಅಂತರದಲ್ಲಿ ಎರಡು ಬಾರಿ ಬಾಂಬ್ ಬೆದರಿಕೆ ಬಂದಿದ್ದರೆ, ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಬಾಂಬ್ ಬೆದರಿಕೆ ಮೇಲ್ ಸಂದೇಶ್ ಬಂದಿರುವುದು ಆತಂಕಗೊಳ್ಳುವಂತೆ ಮಾಡಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜೂ.27): ಕೊಡಗು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಬರುವ ಮೂಲಕ ಎಲ್ಲರೂ ಆತಂಕಗೊಳ್ಳುವಂತೆ ಮಾಡಿದೆ. ಆದರೆ ಈ ಬಾರಿ ನ್ಯಾಯಾಲಯದ ಜೊತೆಗೆ ಕೊಡಗು ಕೇಂದ್ರೀಯ ವಿದ್ಯಾಲಯಕ್ಕೂ ಬಾಂಬ್ ಬೆದರಿಕೆ ಬರುವ ಮೂಲಕ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿತು.

ಹೌದು ಮಡಿಕೇರಿಯಲ್ಲಿ ಇರುವ ಕೊಡಗು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಶನಿವಾರವೂ ಬಾಂಬ್ ಬೆದರಿಕೆ ಬಂದಿರುವುದು ನ್ಯಾಯಾಧೀಶರು, ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರು ಹಾಗೂ ಕಕ್ಷೀದಾರರನ್ನು ಒಂದು ಕ್ಷಣ ಭಯಭೀತಗೊಳ್ಳುವಂತೆ ಮಾಡಿತು. ನಾಲ್ಕು ದಿನಗಳ ಅಂತರದಲ್ಲಿ ಎರಡು ಬಾರಿ ಬಾಂಬ್ ಬೆದರಿಕೆ ಬಂದಿದ್ದರೆ, ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಬಾಂಬ್ ಬೆದರಿಕೆ ಮೇಲ್ ಸಂದೇಶ್ ಬಂದಿರುವುದು ಆತಂಕಗೊಳ್ಳುವಂತೆ ಮಾಡಿದೆ.

ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮತ್ತು ಸಮೀಪದಲ್ಲೇ ಇರುವ ಕೇಂದ್ರೀಯ ವಿದ್ಯಾಲಯದಲ್ಲಿ ಬಾಂಬ್ ಸ್ಫೋಟಿಸುವುದಾಗಿ ನ್ಯಾಯಾಲಯ ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿದ್ದರು. ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದ ನ್ಯಾಯಾಧೀಶರು ಮೇಲ್ ಪರಿಶೀಲಿಸಿದಾಗ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ನ್ಯಾಯಾಧೀಶರು ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದೊಂದಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗೆ ದೌಡಾಯಿಸಿದ್ದಾರೆ.

ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕೂಡಲೇ ಶಾಲಾ ಕಟ್ಟಡದಿಂದ ಹೊರಗೆ ಕಳುಹಿಸಿದ್ದಾರೆ. ಮಾಹಿತಿ ತಿಳಿದು ಪೋಷಕರು ಕೂಡ ಶಾಲೆಯ ಬಳಿಗೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ನಂತರ ಶಾಲೆಯ ಪ್ರತೀ ಕೊಠಡಿಯಲ್ಲೂ ಇಂಚಿಂಚೂ ಜಾಲಾಡಿದ್ದಾರೆ. ಯಾವುದೇ ಸ್ಫೋಟಕ ದೊರೆತ್ತಿಲ್ಲ. ಮತ್ತೊಂದೆಡೆ ನ್ಯಾಯಾಲಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಕೀಲರು ಮತ್ತು ಕಕ್ಷೀದಾರರೆಲ್ಲರೂ ಭಯಭೀರಾಗಿ ನ್ಯಾಯಲಯ ಸಂಕೀರ್ಣದಿಂದ ಹೊರಗೆ ನಿಲ್ಲಬೇಕಾಯಿತು.

ಹುಸಿ ಬಾಂಬ್ ಬೆದರಿಕೆ

ಸ್ಥಳಕ್ಕೆ ಬಂದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಇಡೀ ನ್ಯಾಯಾಲಯ ಸಂಕೀರ್ಣದ ಎಲ್ಲೆಡೆ ಶೋಧ ನಡೆಸಿತು. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ಇರುವ ಹೊಟೇಲ್ ಸೇರಿದಂತೆ ಎಲ್ಲೆಡೆ ಬಾಂಬ್ ಪತ್ತೆ ಸಾಧನಗಳಿಂದ ಶೋಧ ನಡೆಸಲಾಯಿತು. ಬಳಿಕ ಅಂತಹ ಯಾವುದೇ ಸಂಗತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ನ್ಯಾಯಾಧೀಶರು, ಅಧಿಕಾರಿಗಳಿಗೆ ಮನವರಿಕೆ ಮಾಡಿ ಧೈರ್ಯ ತುಂಬಿದರು.

ನಂತರ ಎಂದಿನಂತೆ ನ್ಯಾಯಾಲಯದ ಕಾರ್ಯ ಕಲಾಪಗಳು ಆರಂಭವಾದವು. ಆದರೆ ಮೂರು ತಿಂಗಳಲ್ಲಿ ಮೂರು ಬಾರಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಮತ್ತು ಒಮ್ಮೆ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಎಲ್ಲರೂ ಆತಂಕಗೊಳ್ಳುವಂತೆ ಮಾಡಿದೆ. ಹೀಗೆ ಪದೇ ಪದೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿ ಗೇಲಿ ಮಾಡಲಾಗುತ್ತಿದೆಯೇ ಅಥವಾ ಇಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಬೇರೆ ಬಾಂಬ್ ಸ್ಫೋಟಿಸುವ ಹುನ್ನಾರ ಇರಬಹುದೇ ಎನ್ನುವ ಆತಂಕವನ್ನು ವಕೀಲ ಸಂಘದ ಕಾರ್ಯದರ್ಶಿ ಪವನ್ ಪೆಮ್ಮಯ್ಯ ವ್ಯಕ್ತಪಡಿಸಿದ್ದಾರೆ.