Asianet Suvarna News Asianet Suvarna News

Shivamogga; ಕಂದಾಯ ಇಲಾಖೆ ಅಧಿಕಾರಿಗಳಿಂದ ಮನೆ ತೆರವು, ಆರಗ ವಿರುದ್ಧ ಕಿಮ್ಮನೆ ಕಿಡಿ

ಮನೆ ತೆರವು ಕಾರ್ಯಚರಣೆ ವಿರೋಧಿಸಿ ಹುಂಚ ನಾಡಕಚೇರಿವರೆಗೆ ಕಿಮ್ಮನೆ ನೇತೃತ್ವದಲ್ಲಿ ಪಾದಯಾತ್ರೆ. ಗೃಹ ಸಚಿವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ರಕ್ಷಣೆ ಮಾಡ್ತಾರೆ, ಬಡವರಿಗೊಂದು  ಪಕ್ಷದ ಕಾರ್ಯಕರ್ತರಿಗೊಂದು ಕಾನೂನು ಈ ಕ್ಷೇತ್ರದಲ್ಲಿ ನಡೆಸ್ತಿದ್ದಾರೆ ಎಂದು ಆರಗ ವಿರುದ್ಧ ಕಿಮ್ಮನೆ ಕಿಡಿ

kimmane rathnakar opposed House clearance by revenue department in shivamogga gow
Author
First Published Sep 6, 2022, 7:35 PM IST

ವರದಿ : ರಾಜೇಶ್, ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಸೆ.6): ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಹಡ್ಲುಬೈಲು ಸರ್ವೇ ನಂಬರ್ 101 ರಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ ಜ್ಯೋತಿ ಕೋಂ ರಾಮಪ್ಪ ಎಂಬುವವರ ಮನೆಯನ್ನು ಹೊಸನಗರ ಕಂದಾಯ ಇಲಾಖೆ ಅಧಿಕಾರಿಗಳ ಏಕಾಏಕಿ ತೆರವುಗೊಳಿಸಿ ಜೆಸಿಬಿ ಯಂತ್ರದ ಮೂಲಕ ಮನೆ ನೆಲಸಮಗೊಳಿಸಿರುವುದನ್ನು ಖಂಡಿಸಿ ಇಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ಹಡ್ಲುಬೈಲಿನಿಂದ ಆನೆಗದ್ದೆ ಮಾರ್ಗ ಹುಂಚ ನಾಡಕಚೇರಿ ವರೆಗೆ ಸುಮಾರು 6 ಕಿ.ಮೀ ದೂರ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು. ಕ್ಷೇತ್ರ ಶಾಸಕರು ಹಾಗೂ ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ರಕ್ಷಣೆ ಮಾಡುತ್ತಾರೆ. ಆದರೆ ಬಡವರಿಗೊಂದು ಕಾನೂನು ತಮ್ಮ ಪಕ್ಷದ ಕಾರ್ಯಕರ್ತರಿಗೊಂದು ಕಾನೂನು ಈ ಕ್ಷೇತ್ರದಲ್ಲಿ ನಡೆಸುತ್ತಿದ್ದಾರೆ ಅಧಿಕಾರಿ ವರ್ಗ ಸಹ ಅವರ ಮಾತು ಕೇಳಿ ಕಳ್ಳ ಕದೀಮರಿಗೆ ರಕ್ಷಣೆ ನೀಡುತ್ತಿದ್ದಾರೆಂದು ತೀವ್ರವಾಗಿ ಖಂಡಿಸಿ, ಈ ಬಗ್ಗೆ ಬಡಕುಟುಂಬಕ್ಕೆ ನ್ಯಾಯ ಕೊಡಿಸುವವರೆಗೂ ನಾನು ಯಾವುದೇ ಹೋರಾಟ ನಡೆಸಲು ಸಿದ್ದ ಎಂದ ಅವರು ನಗರ ಬಳಿಯಲ್ಲಿ ಇದೇ ರೀತಿಯಲ್ಲಿ ಘಟನೆ ಸಂಭವಿಸಿದಾಗಲೂ ನಾನು ಬಡವರ ಪರ ಹೋರಾಟ ನಡೆಸಿ ನ್ಯಾಯಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆಂದು ಹೇಳಿ, ನಾನು ಎಂದಿಗೂ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

ಗುಡ್ಡೆಕೊಪ್ಪದಲ್ಲಿ ಡಿವೈಎಸ್‌ಪಿ ಕಛೇರಿ ತೆರೆಯಲಿ:
ಮಂಗಳೂರಿಗೆ ಮೋದಿ ಬಂದಾಗ ರಾಜ್ಯ ಗೃಹಸಚಿವರು ತಮ್ಮ ಸ್ವಕ್ಷೇತ್ರದಲ್ಲಿ ಇದ್ದರೂ ಇವರಿಗೆ ಹೊರೆಗೆ ಹೋಗಲು ಭಯವೇನೊ ಎಂಬ ಸಂಶಯ ಭಾಸವಾಗುತ್ತಿದೆ. ಗೃಹ ಸಚಿವರು ಗುಡ್ಡೆಕೊಪ್ಪದಲ್ಲಿಯೇ ಡಿವೈಎಸ್‌ಪಿ ಕಛೇರಿ ಆರಂಭಿಸಿಕೊಳ್ಳಲಿ ಎಂದು ಲೇವಡಿ ಮಾಡಿ ಅಧಿಕಾರಿಗಳು ಅವರ ಅಣತಿಗೆ ಮಣಿಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಿಂದುತ್ವದ ಹೆಸರಿನಲ್ಲಿ ಮಕ್ಕಳ ಮುಗ್ದ ಮನಸ್ಸಿನವರನ್ನು ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತವನ್ನು ಮರೆಯದೆ ಕಾರ್ಯಕರ್ತರು ಮತದಾರರನ್ನು ಸಂಘಟಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುವಂತೆ ಕಾರ್ಯಕರ್ತರು ಸಿದ್ದರಾಗಬೇಕು ಎಂದು ಮನವಿ ಮಾಡಿ, ಇದೊಂದು ಸಾಂಕೇತಿಕ ಪ್ರತಿಭಟನೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಬಡಕುಟುಂಬಸ್ಥರ ಮನೆ ತೆರವುಗೊಳಿಸಿರುವ ನಿರ್ಗತಿಕ ಕುಟುಂಬಕ್ಕೆ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮತ್ತು ಶಿವಮೊಗ್ಗ ಮಹಾಸಗರ ಪಾಲಿಕೆ ಕಾರ್ಪೋರೇಟರ್ ರಮೇಶ್ ಹೆಗಡೆ ಮಾತನಾಡಿ, ಮನೆಯನ್ನು ಕಳೆದುಕೊಂಡ ಜೀವನ್ ಕುಟುಂಬಸ್ಥರಿಗೆ ಮನೆ ಕೊಡಿಸುವುದು ಮತ್ತು ಅಡುಗೆ ಗ್ಯಾಸ್ ಮತ್ತು ದಿನನಿತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಳ್ಳುವುದರೊಂದಿಗೆ ರಾಜ್ಯ ಬಿಜೆಪಿ ಸರ್ಕಾರ ಮನೆಮುರಿಯುವುವ ಕಾರ್ಯದಲ್ಲಿ ತೊಡಗಿದೆ ಇವರಿಗೆ ಅಭಿವೃದ್ದಿಗಿಂತ ಧರ್ಮವನ್ನು ಮುಂದಿಟ್ಟುಕೊಂಡು ಯುಜನಾಂಗವನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಮನೆಮನಸ್ಸು ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆಂದರು.

ಜಿ.ಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ತಾ.ಪಂ ಮಾಜಿ ಸದಸ್ಯರಾದ ಎರಗಿ ಉಮೇಶ್, ಬಿ.ಜಿ ಚಂದ್ರುಮೌಳಿ, ಗೌರಮ್ಮ ಕಗ್ಗಲಿ, ತೀರ್ಥಹಳ್ಳಿ ತಾಲ್ಲೂಕ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಘವೇಂದ್ರ ಪುಟ್ಟೊಡು, ಗುರುರಾಜ ಸುಣ್ಣಕಲ್ಲು, ಹೊಸಕೊಪ್ಪ ಚೇತನ್, ಹುಲ್ಲತ್ತಿ ದಿನೇಶ್, ರಾಜಶೇಖರ್, ವೇದಾಂತ, ನಾಗರಾಜ್ ತುರುಗೋಡು, ಮಹೇಶ್ ಗೌಡ, ಲೇಖನ್‌ಮೂರ್ತಿ, ನಾಗರಾಜರೆಡ್ಡಿ, ಚಂದ್ರಕಲಾ, ಸುಮತಿ, ಲಕ್ಷ್ಮಮ್ಮ ,ಮಂಜಣ್ಣ, ಲೋಲಾಕ್ಷಿ, ಕೇಶವ, ಸರಸ್ವತಿ, ಅಮ್ರಪಾಲಿ ಸುರೇಶ್, ಕೆ.ಎಸ್.ಲೋಕಪ್ಪಗೌಡ ತೊರೆಗದ್ದೆ ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಭಾಸ್ಕರ್‌ ರಾವ್‌ ನಂತರ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ: ಕೇಜ್ರಿವಾಲ್‌ ಪಕ್ಷದ ಕಡೆ ವಾಲ್ತಾರ ಕಿಮ್ಮನೆ?

ಪ್ರತಿಭಟನೆಯ ನಂತರ ಹೊಸನಗರ ತಹಶೀಲ್ದಾರ್ ಎಸ್.ವಿ.ರಾಜೀವ್ ಇವರಿಗೆ ಮನವಿ ಪತ್ರವನ್ನು ನೀಡಿ ತಕ್ಷಣ ಅನ್ಯಾಯಕ್ಕೊಳಗಾದ ರೈತ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

Follow Us:
Download App:
  • android
  • ios