- Home
- Karnataka Districts
- ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು; ಎಷ್ಟು ಜನ ಸಾಯಿಸ್ತಾರೋ ಸಾಯಿಸ್ಲಿ, ಒಂದೊಂದು ಮನೇಲಿ 100 ಮಕ್ಕಳು ಹುಟ್ಟಿಸ್ತೇವೆ!
ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು; ಎಷ್ಟು ಜನ ಸಾಯಿಸ್ತಾರೋ ಸಾಯಿಸ್ಲಿ, ಒಂದೊಂದು ಮನೇಲಿ 100 ಮಕ್ಕಳು ಹುಟ್ಟಿಸ್ತೇವೆ!
ಇರಾನ್ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ, 'ಒಂದೊಂದು ಮನೇಲಿ 100 ಮಕ್ಕಳನ್ನು ಹುಟ್ಟಿಸುತ್ತೇವೆ, ಆದರೆ ಶರಣಾಗುವುದಿಲ್ಲ' ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ (ಮಾ.02): ಇರಾನ್ನ ಸುಪ್ರೀಂ ನಾಯಕ ಖಮೇನಿ ಅವರ ಹತ್ಯೆಯನ್ನು ನಾವು ಸಹಿಸುವುದಿಲ್ಲ. ಅವರು ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ' ಎಂದು ಶಿವಮೊಗ್ಗದಲ್ಲಿ ಪ್ರತಿಭಟನಾ ನಿರತ ಮಹಿಳೆಯೊಬ್ಬರು ಖಮೇನಿ ಹತ್ಯೆ ಖಂಡಿಸಿ ಆಕ್ರೋಶಭರಿತ ಹೇಳಿಕೆ ನೀಡಿದರು.
ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಮಾಡಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರದಲ್ಲಿ ಶಿಯಾ ಮುಸ್ಲಿಂ ಸಮುದಾಯದವರಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
100 ಮಕ್ಕಳನ್ನು ಹುಟ್ಟಿಸುತ್ತೇವೆ, ಸೋಲೊಪ್ಪಿಕೊಳ್ಳೋದಿಲ್ಲ:
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮಹಿಳೆ ಸಾನಿಯಾ ಜಹರಾನ್ ಅತ್ಯಂತ ಭಾವನಾತ್ಮಕವಾಗಿ ಮತ್ತು ಆಕ್ರೋಶಭರಿತವಾಗಿ ಮಾತನಾಡಿದರು. 'ನಮಗೆ ನ್ಯಾಯ ಬೇಕು, ನಮ್ಮ ಸುಪ್ರೀಂ ನಾಯಕ ಖಮೇನಿಯನ್ನು ಹತ್ಯೆ ಮಾಡಲಾಗಿದೆ. ಅವರು ಯಾವುದೇ ಭೇದಭಾವ ಮಾಡುತ್ತಿರಲಿಲ್ಲ, ಫ್ಯಾಲೆಸ್ತೀನ್ ಪರವಾಗಿ ಏಕಾಂಗಿಯಾಗಿ ನಿಂತಿದ್ದರು. ಅವರಿಗಾಗಿ ನಾವು ಜೀವ ಕೊಡಲೂ ಸಿದ್ಧರಿದ್ದೇವೆ.
ಅವರು (ಇಸ್ರೇಲ್ ಮತ್ತು ಅಮೇರಿಕಾ) ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ' ಎಂದು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಹರಿಹಾಯ್ದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಹೈವೋಲ್ಟೇಜ್ ಪ್ರತಿಭಟನೆ
ಅಂಜುಮನ್-ಎ-ಫೈಜಾನ್-ಎ-ಹುಸೇನಿ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶಿಯಾ ಧರ್ಮಗುರುಗಳು ಸೇರಿದಂತೆ ನೂರಾರು ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಇರಾನ್ ಮೇಲೆ ಅಮೆರಿಕ (US) ಮತ್ತು ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳನ್ನು ಪ್ರತಿಭಟನಾಕಾರರು ಒಕ್ಕೊರಲಿನಿಂದ ಖಂಡಿಸಿದರು. 'ನಮಗೆ ನಮ್ಮ ತಂದೆಗಿಂತಲೂ ಖಮೇನಿಯೇ ಮುಖ್ಯವಾಗಿದ್ದರು' ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಇಸ್ರೇಲ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ಸರ್ಕಾರ ಮಧ್ಯಪ್ರವೇಶಿಸಲಿ
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಮತ್ತು ಅಮಾಯಕರ ಹತ್ಯೆ ನಿಲ್ಲಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಈ ವಿಚಾರದಲ್ಲಿ ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಜೈಘೋಷಗಳು ಮೊಳಗಿದವು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

