ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ವಿರೋಧಿಸಿ ಸಾಗರದಲ್ಲಿ ಜಿಲ್ಲಾ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಿತು. ಈ ವರದಿಯು ಮಲೆನಾಡು ರೈತರಿಗೆ ಮರಣ ಶಾಸನವಾಗಲಿದ್ದು, ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಮರು ಸಮೀಕ್ಷೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾಗರ: ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಗುರುವಾರ ಜಿಲ್ಲಾ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ಅಂತಿಮವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಲೆನಾಡು ರೈತರ ಬದುಕಿಗೆ ಕೊಳ್ಳಿ ಇಡುವ ನೀತಿ

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಹೆಸರಿನಲ್ಲಿ ಮಲೆನಾಡು ರೈತರ ಬದುಕಿಗೆ ಕೊಳ್ಳಿ ಇಡುವ ನೀತಿಯನ್ನು ಯಾವತ್ತೂ ಸಹಿಸುವುದಿಲ್ಲ. ರಾಜ್ಯದ 20668 ಎಕರೆ ಪರಿಸರಸೂಕ್ಷ ವ್ಯಾಪ್ತಿಗೆ ಬರುತ್ತಿದ್ದು 1449 ಹಳ್ಳಿಗಳು ಸೇರುತ್ತಿವೆ. ಜಿಲ್ಲೆಯ 449 ಹಳ್ಳಿಗಳು ಸೇರುತ್ತಿದೆ. ಮಲೆನಾಡು ಭಾಗದ ರೈತರು ಇದನ್ನು ಗಂಭೀರವಾಗಿ ಗಮನಿಸಬೇಕು ಎಂದರು.

ಕೇರಳ ರಾಜ್ಯದಲ್ಲಿ ಸರ್ಕಾರ, ಪಕ್ಷಗಳು, ಸರ್ಕಾರಿ ನೌಕರರು ಒಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಿದ್ದರಿಂದ ಪರಿಷ್ಕೃತ ವರದಿ ಜಾರಿಗೊಳಿಸಲಾಗಿತ್ತು. ಅಲ್ಲಿ ದೈಹಿಕವಾಗಿ ಸಮೀಕ್ಷೆ ನಡೆಸಿ ಸಾಕಷ್ಟು ಪ್ರದೇಶ ಕೈಬಿಡಲಾಗಿದೆ. ಕರ್ನಾಟಕದಲ್ಲಿಯೂ ಎಲ್ಲರೂ ಒಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಬೇಕು. ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆಯುತ್ತೇನೆ ಎಂದಿರುವುದನ್ನು ನಾನು ಸ್ವಾಗತಿಸುತ್ತೇನೆ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರೆ ಮತ್ತೊಂದು ರೂಪದಲ್ಲಿ ನಮ್ಮನ್ನು ಸುತ್ತುವರಿಯುತ್ತದೆ. ಜನವಸತಿ, ಕೃಷಿ ಚಟುವಟಿಕೆ ಸೇರಿ ಉಪಯೋಗಕ್ಕೆ ಬರುವ ಭೂಮಿಯನ್ನು ಹೊರತುಪಡಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಮಲೆನಾಡು ರೈತರ ಆತಂಕ ದೂರ ಮಾಡಿ ಎಂದು ಎಚ್.ಹಾಲಪ್ಪ ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಜಿಲ್ಲೆಗೆ ಶಾಪವಾಗಲಿದೆ. ವರದಿ ಯಥಾವತ್ತು ಜಾರಿಯಾದರೆ ಮಲೆನಾಡು ಜನರಿಗೆ ಮರಣ ಶಾಸನವಾಗಲಿದೆ. ಯೋಜನೆ ವಿರೋಧಿಸಿ ನಿರಂತರ ಹೋರಾಟ ನಡೆಯುತ್ತಿದ್ದು, ರೈತ ಸಂಘ ಎಲ್ಲ ಹೋರಾಟಕ್ಕೂ ಕೈಜೋಡಿಸಲಿದೆ. ವರದಿಯಲ್ಲಿರುವ ಗ್ರಾಮಗಳು ಬಯಲು ಜೈಲು ಆಗುವ ಅಪಾಯವಿದ್ದು, ಮತ್ತೊಮ್ಮೆ ವರದಿ ಕುರಿತು ಪರಿಶೀಲನೆ ಮಾಡಬೇಕು. ಜನವಸತಿ ಪ್ರದೇಶವನ್ನು ಹೊರಗಿಟ್ಟು ದೈಹಿಕವಾಗಿ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ಜಾಥಾಕ್ಕೆ ಚಾಲನೆ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ಚೇತನರಾಜ ಕಣ್ಣೂರು ಮಾತನಾಡಿದರು. ರಮೇಶ್ ಕೆಳದಿ, ಡಾ.ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಪ್ರಸನ್ನ ಕೆರೆಕೈ, ಸೋಮಶೇಖರ್, ಸಂತೋಷ್ ಚಿಕ್ಕನೆಲ್ಲೂರು, ಸುನೀಲ್, ಚಂದ್ರು ಪೂಜಾರಿ ಇನ್ನಿತರರು ಇದ್ದರು.

ಬ್ಯಾರಿಕೇಡ್ ಕಿತ್ತೆಸೆದ ರೈತರು

ಪೊಲೀಸ್ ಇಲಾಖೆ ಪ್ರತಿಭಟನಾ ಮೆರವಣಿಗೆ ಎ.ಸಿ.ಕಚೇರಿ ಬಳಿ ಬಂದಾಗ ಬ್ಯಾರಿಕೇಡ್ ಹಾಕಿತ್ತು. ಇದರಿಂದ ಅಕ್ರೋಶಗೊಂಡ ರೈತರು ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಬ್ಯಾರಿಕೇಡ್ ಹಾಕಿ ಅವಮಾನಿಸಲಾಗುತ್ತಿದೆ ಎಂದ ರೈತರು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಮಾಜಿ ಸಚಿವ ರಚ್.ಹಾಲಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಪೊಲೀಸ್ ಇಲಾಖೆಯ ಧೋರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

------