‘ಶ್..! ಮೊದಲೆ ಹೇಳಿದ್ರೆ ಪಕ್ಕದ ರಾಜ್ಯದವರು ಕಿತ್ಗೊಂಬಿಡ್ತಾರೆ'
ರಾಜ್ಯಕ್ಕೆ ಹಲವಾರು ಕೈಗಾರಿಕೆಗಳು ಬರಲು ಸಿದ್ಧವಿದ್ದು ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಹೇಳಿದರೆ ಹೊರ ರಾಜ್ಯದವರು ತೆಗೆದುಕೊಂಡು ಹೋಗಿ ಬಿಡುತ್ತಾರೆ ಎಂದು ಧಾರವಾಡದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಧಾರವಾಡ(ಜು.17) ಕರ್ನಾಟಕ ತುಂಬಾ ಕೈಗಾರಿಕೆ ಕಂಪನಿಗಳು ಬರುತ್ತಿವೆ. ಪಕ್ಕದ ಆಂಧ್ರ ಮತ್ತು ತೆಲಂಗಾಣದಲ್ಲಿ ಕೈಗಾರಿಕೆ ಶೀಘ್ರವಾಗಿ ಬೆಳೆಯುತ್ತಿದೆ. ಹೀಗಾಗಿ ಅಲ್ಲಿಗೆ ಕೆಲ ಉದ್ಯಮಗಳು ಹೋಗುತ್ತಿವೆ. ಧಾರವಾಡಕ್ಕೆ ಬರಬೇಕಿದ್ದ ಒಂದೆರಡು ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗಿವೆ. ಆದರೆ ಅದಕ್ಕಿಂತ ಹೆಚ್ಚಿನ ಕಂಪನಿಗಳು ಬರಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುವುದು. ಸುಮ್ಮನೇ ಯಾರೋ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಬಜೆಟ್ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಎನ್ನುವುದು ಸರಿ ಅಲ್ಲ ಎಂದರು.
ನಮ್ಮ ಸರ್ಕಾರ ಅಖಂಡ ಸರ್ಕಾರ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಾ ಇದೆ. ಕಾವೇರಿಗೆ ಕೊಟ್ಟಷ್ಟೇ ಮಹತ್ವವವನ್ನು ಕೃಷ್ಣಾ, ತುಂಗಭದ್ರಾಕ್ಕೂ ಕೊಟ್ಟಿದ್ದೇವೆ. ಕುಮಾರಸ್ವಾಮಿ ಜನರಿಗಾಗಿ ಕಣ್ಣೀರು ಹಾಕಿದ್ದಾರೆ. ಜನರ ನೋವನ್ನು ಅವರು ತೋಡಿಕೊಂಡಿದ್ದಾರೆ. ಕಾಂಗ್ರೆಸ್ ಕುಮಾರಸ್ವಾಮಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದರು.