ಧಾರವಾಡದಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದಾಗಿ ನಂಬಿಸಿ ಶಿಕ್ಷಕನೊಬ್ಬ ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾನೆ. ವಂಚನೆಯಿಂದ ಮನನೊಂದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯು ಶಿಕ್ಷಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಧಾರವಾಡ (ಫೆ.27): ವಿದ್ಯಾದೇಗುಲದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಶಿಕ್ಷಕನೇ ವಿದ್ಯಾರ್ಥಿಯೊಬ್ಬನ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ಆಘಾತಕಾರಿ ಘಟನೆ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿಕೊಡುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬನಿಂದ ಬರೋಬ್ಬರಿ 80 ಗ್ರಾಂ ಚಿನ್ನ ಪಡೆದು ವಂಚಿಸಿರುವ ಶಿಕ್ಷಕನ ವಿರುದ್ಧ ಈಗ ಶಿಕ್ಷಣ ಇಲಾಖೆ ಚಾಟಿ ಬೀಸಿದೆ. ಈ ವಂಚನೆಯಿಂದ ಮನನೊಂದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಏನಿದು ಘಟನೆ?
ಧಾರವಾಡದ ಪ್ರತಿಷ್ಠಿತ ಕೆ.ಇ. ಬೋರ್ಡ್ (K.E. Board) ಆಡಳಿತ ಮಂಡಳಿಯ ಅಡಿಯಲ್ಲಿ ಬರುವ ವಿದ್ಯಾರಣ್ಯ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ್ ವಡತೇರ ಈ ಕೃತ್ಯ ಎಸಗಿದ ಆರೋಪಿ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಶಿವಾನಂದ ಕರಕಿ ಎಂಬ ವಿದ್ಯಾರ್ಥಿಗೆ ಈತ ಗಾಳ ಹಾಕಿದ್ದನು. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆ ನೀಡುವುದಾಗಿ ನಂಬಿಸಿದ ಶಿಕ್ಷಕ, ಇದಕ್ಕಾಗಿ ಭಾರಿ ಪ್ರಮಾಣದ ಹಣ ಮತ್ತು ಚಿನ್ನಕ್ಕೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
80 ಗ್ರಾಂ ಚಿನ್ನ ಪಡೆದು ವಂಚನೆ:
ಶಿಕ್ಷಕನ ಮಾತನ್ನು ನಂಬಿದ ವಿದ್ಯಾರ್ಥಿ ಅಭಿಷೇಕ್, ತನ್ನ ಮನೆಯಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನದ ಆಭರಣಗಳನ್ನು (ಸುಮಾರು 5 ತೊಲೆಗೂ ಅಧಿಕ) ಶಿಕ್ಷಕನಿಗೆ ನೀಡಿದ್ದನು. ಆದರೆ, ಪರೀಕ್ಷೆಯ ನಂತರ ವಿದ್ಯಾರ್ಥಿ ಮರಳಿ ತನ್ನ ಚಿನ್ನವನ್ನು ಕೇಳಿದಾಗ ಶಿಕ್ಷಕ ರಾಜಶೇಖರ್ ವಡತೇರ ಅಸಲಿ ಬಣ್ಣ ತೋರಿಸಿದ್ದಾನೆ. ಚಿನ್ನ ವಾಪಸ್ ಕೊಡಲು ನಿರಾಕರಿಸಿದ್ದಲ್ಲದೆ, 'ಪೂರಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವುದಿಲ್ಲ' ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ತನ್ನಿಂದ ದೊಡ್ಡ ತಪ್ಪಾಗಿದೆ ಮತ್ತು ಮನೆಯವರ ಚಿನ್ನ ಕಳೆದುಹೋಯಿತು ಎಂಬ ನೋವಿನಿಂದ ವಿದ್ಯಾರ್ಥಿ ಅಭಿಷೇಕ್ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ.
ಶಿಕ್ಷಣ ಇಲಾಖೆಯಿಂದ ಶಾಲಾ ಮಂಡಳಿಗೆ ನೋಟಿಸ್:
ಈ ಗಂಭೀರ ಪ್ರಕರಣದ ಬಗ್ಗೆ ವಿದ್ಯಾರ್ಥಿಯ ತಾಯಿ ಸರೋಜಿನಿ ಶಿವಾನಂದ ಕರಕಿ ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI), ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ನಲ್ಲಿ, 'ಶಿಕ್ಷಕ ರಾಜಶೇಖರ್ ವಡತೇರ ಅವರು ಹಣದ ಬೇಡಿಕೆ ಇಟ್ಟು, ಚಿನ್ನದ ಆಭರಣಗಳನ್ನು ಪಡೆದು ವಂಚಿಸಿರುವುದು ಮತ್ತು ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಸದರಿ ಶಿಕ್ಷಕನ ಮೇಲೆ ತಕ್ಷಣವೇ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಂಡು ತುರ್ತಾಗಿ ವರದಿ ಸಲ್ಲಿಸಬೇಕು' ಎಂದು ಆದೇಶಿಸಿದ್ದಾರೆ.
ಪೋಷಕರ ಆಕ್ರೋಶ:
ಶಿಕ್ಷಕನ ಈ ವರ್ತನೆಯಿಂದಾಗಿ ಒಂದು ಸುಂದರ ಕುಟುಂಬ ಬೀದಿಗೆ ಬೀಳುವಂತಾಗಿದೆ. 'ಮಕ್ಕಳಿಗೆ ದಾರಿ ತೋರಿಸಬೇಕಾದ ಗುರುಗಳೇ ಹೀಗೆ ಮಾಡಿದರೆ ಯಾರನ್ನು ನಂಬಬೇಕು?' ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. ಆರೋಪಿ ಶಿಕ್ಷಕನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


