- Home
- Karnataka Districts
- ಉದ್ಯಾನ ನಗರಿ ಬೆಂಗಳೂರಿನ ಗುಲಾಬಿ ಕ್ರಾಂತಿ, ಪಿಂಕ್ ಹೂವುಗಳ ಆಕರ್ಷಣೆಗೆ ಕಾರಣ ಧಾರವಾಡದ ಈ ಮೇರು ವ್ಯಕ್ತಿ!
ಉದ್ಯಾನ ನಗರಿ ಬೆಂಗಳೂರಿನ ಗುಲಾಬಿ ಕ್ರಾಂತಿ, ಪಿಂಕ್ ಹೂವುಗಳ ಆಕರ್ಷಣೆಗೆ ಕಾರಣ ಧಾರವಾಡದ ಈ ಮೇರು ವ್ಯಕ್ತಿ!
ಬೆಂಗಳೂರನ್ನು "ಉದ್ಯಾನ ನಗರಿ"ಯಾಗಿ ರೂಪಿಸಿದ ಪ್ರಮುಖ ರೂವಾರಿ ಧಾರವಾಡದ ಈ ವ್ಯಕ್ತಿ. 1980ರ ದಶಕದಲ್ಲಿ, ಅವರು ಕಡಿಮೆ ವೆಚ್ಚದ ತಂತ್ರಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದ ಮೂಲಕ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟು, ನಗರಕ್ಕೆ ಹಸಿರು ಹೊದಿಕೆ ನೀಡಿದರು.

ಧಾರವಾಡದ ಈ ವ್ಯಕ್ತಿಯ ಅರಣ್ಯ ಪ್ರೀತಿ
ಇಂದು ಬೆಂಗಳೂರಿನ ಜನನಿಬಿಡ ರಸ್ತೆಗಳು, ವಸತಿ ಪ್ರದೇಶಗಳು ಮತ್ತು ಬೀದಿಗಳಲ್ಲಿ ಎತ್ತರವಾಗಿ ನಿಂತಿರುವ ದಟ್ಟವಾದ ಮರಗಳ ಸಾಲುಗಳು, ಪ್ರತೀವರ್ಷ ಈ ಸಮಯದಲ್ಲಿ ಕಾಣುವ ಟಬೂಬಿಯಾ ರೋಸಿಯಾ ಹೂವುಗಳು ಕೇವಲ ಪ್ರಕೃತಿಯ ಕೊಡುಗೆಯಲ್ಲ. ಅವುಗಳ ಹಿಂದೆ ಒಬ್ಬ ದೂರದೃಷ್ಟಿಯುಳ್ಳ ಅರಣ್ಯಾಧಿಕಾರಿಯ ಅಹರ್ನಿಶಿ ಶ್ರಮ, ದೃಢ ನಿಲುವು ಮತ್ತು ಪರಿಸರದ ಮೇಲಿನ ಅಪಾರ ಕಾಳಜಿ ಅಡಗಿದೆ. ಆ ವ್ಯಕ್ತಿಯೇ ನಿವೃತ್ತ ಐಎಫ್ಎಸ್ ಅಧಿಕಾರಿ ಹಾಗೂ ಪ್ರಸಿದ್ಧ ಸಂರಕ್ಷಣಾವಾದಿ ಎಸ್.ಜಿ. ನೆಗಿನ್ಹಾಲ್. ಬೆಂಗಳೂರು “ಉದ್ಯಾನ ನಗರಿ” ಎಂದು ಕರೆಯಲ್ಪಡುವುದಕ್ಕೆ ಪ್ರಮುಖ ಕಾರಣಕರ್ತರಲ್ಲಿ ಸೇತುರಾಮ್ ಗೋಪಾಲರಾವ್ ನೇಗಿನ್ಹಾಲ್ ಒಬ್ಬರು. ನಗರವನ್ನು ಹಸಿರಿನ ಹೊದಿಕೆಯಿಂದ ಆವರಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿ, ಅದರ ಅನುಷ್ಠಾನಕ್ಕೆ ಜೀವ ತ್ಯಾಗದಂತೆ ದುಡಿದವರು. ವನ್ಯಜೀವಿ ಮತ್ತು ಸಸ್ಯಜೀವನದ ಪರಿಣಿತರಾಗಿದ್ದ ಅವರು, ಪ್ರಶಸ್ತಿ ಪಡೆದ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದರು. ಅಲ್ಲದೆ, ಪ್ರಾಜೆಕ್ಟ್ ಟೈಗರ್ ಯೋಜನೆಯ ಆರಂಭಿಕ ಹಂತಗಳಲ್ಲಿ ಪ್ರಮುಖ ಪಾತ್ರವಹಿಸಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.
ಒಂದು ದಶಲಕ್ಷಕ್ಕೂ ಅಧಿಕ ಮರಗಳ ಕನಸು
ನಗರಕ್ಕೆ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ನೀಡಿದ ಶ್ರೇಯಸ್ಸು ನೆಗಿನ್ಹಾಲ್ ಅವರಿಗೆ ಸಲ್ಲುತ್ತದೆ. ಈ ಮಹತ್ವದ ಕಾರ್ಯದ ಹಿಂದೆ ರಾಜ್ಯದ ವೇಗವಾದ ನಗರೀಕರಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಗುಂಡೂ ರಾವ್ ಅವರ ಪಾತ್ರವೂ ಇದೆ. “ಬೆಂಗಳೂರು ವೇಗವಾಗಿ ಕಾಂಕ್ರೀಟ್ ಕಾಡಾಗುತ್ತಿದೆ ಎಂಬುದು ಅವರಿಗೆ ತೀವ್ರ ಚಿಂತೆಯಾಗಿತ್ತು. ಒಂದು ವರ್ಷದಲ್ಲಿ ಕನಿಷ್ಠ ಒಂದು ಮಿಲಿಯನ್ ಮರಗಳನ್ನು ನೆಡುವ ಗುರಿ ಇಟ್ಟಿದ್ದರು. ಆದರೆ ಆಗಿನ ಬಿಬಿಎಂಪಿ ಹಾಗೂ ಬಿಡಿಎ ನೀಡಿದ ಅಂಕಿಅಂಶಗಳು ಕೇವಲ ಕೆಲವು ಸಾವಿರಕ್ಕೆ ಸೀಮಿತವಾಗಿದ್ದವು,” ಎಂದು ನೆಗಿನ್ಹಾಲ್ ನೆನಪಿಸಿಕೊಂಡಿದ್ದರು. ಈ ಪರಿಸ್ಥಿತಿಯಿಂದ ನಿರಾಶರಾದ ಮುಖ್ಯಮಂತ್ರಿ, ಆಗಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ಯಾಮ್ ಸುಂದರ್ ಅವರೊಂದಿಗೆ ಚರ್ಚಿಸಿ, ನಗರ ಅರಣ್ಯೀಕರಣಕ್ಕಾಗಿ ಪ್ರತ್ಯೇಕ ವಿಭಾಗ ಸ್ಥಾಪಿಸಲು ನಿರ್ಧರಿಸಿದರು. ಈ ಯೋಜನೆಯ ಅನುಷ್ಠಾನ ಜವಾಬ್ದಾರಿ ನೆಗಿನ್ಹಾಲ್ ಅವರಿಗೆ ನೀಡಲಾಯಿತು.
ಕಡಿಮೆ ವೆಚ್ಚ – ಹೆಚ್ಚಿನ ಪರಿಣಾಮ
ನಗರದಲ್ಲಿ ಗಿಡ ನೆಡುವುದು ವಿಫಲವಾಗುತ್ತಿದ್ದುದಕ್ಕೆ ಕಾರಣ ಹುಡುಕಲು ನೆಗಿನ್ಹಾಲ್ ಸ್ವತಃ ನಗರ ಸುತ್ತಿದರು. ಆಗ ಕಂಡ ಸಮಸ್ಯೆಗಳು ಗಂಭೀರವಾಗಿದ್ದವು. ಬಿಡಿಎ ಅಳವಡಿಸಿದ್ದ ಕಾಂಕ್ರೀಟ್ ಟ್ರೀ ಗಾರ್ಡ್ಗಳು ದುಬಾರಿ (ಪ್ರತಿ ಯೂನಿಟ್ ₹650) ಹಾಗೂ ಕಡಿಮೆ ಎತ್ತರದ್ದಾಗಿದ್ದರಿಂದ ಅಲೆಮಾರಿ ದನಗಳಿಗೆ ಸುಲಭ ಗುರಿಯಾಗುತ್ತಿದ್ದವು. ಇದಕ್ಕೆ ಪರ್ಯಾಯವಾಗಿ, ಅವರು ಕೇವಲ ₹23 ವೆಚ್ಚದ ಬಿದಿರು ಕಂಬ ಮತ್ತು ಕೋಳಿ ಜಾಲರಿಯಿಂದ ಮಾಡಿದ ಟ್ರೀ ಗಾರ್ಡ್ ಪರಿಚಯಿಸಿದರು. ಇದು ಅಗ್ಗವಾಗಿದ್ದು ಮಾತ್ರವಲ್ಲದೆ, ಅತ್ಯಂತ ಪರಿಣಾಮಕಾರಿಯೂ ಆಗಿತ್ತು.
ಆರು ಅಡಿ ಎತ್ತರದ ಸಸಿಗಳ ಕ್ರಾಂತಿ
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ, ಒಂದು ಅಡಿ ಎತ್ತರದ ಸಸಿಗಳನ್ನು ನೆಡುವ ಪದ್ಧತಿ. ಇವು ಬದುಕುವ ಸಾಧ್ಯತೆ ಬಹಳ ಕಡಿಮೆಯಾಗಿತ್ತು. ನಾವು ನರ್ಸರಿಗಳಲ್ಲೇ ಸಸಿಗಳನ್ನು ಕನಿಷ್ಠ ಆರು ಅಡಿ ಎತ್ತರಕ್ಕೆ ಬೆಳೆಸಿ, ನಂತರ ನಗರದಲ್ಲಿ ನೆಡಲು ನಿರ್ಧರಿಸಿದೆವು. ಇದರಿಂದ ಬದುಕುವ ಪ್ರಮಾಣ ಗಣನೀಯವಾಗಿ ಹೆಚ್ಚಾಯಿತು ಎಂದ ಸಂದರ್ಶನವೊಂದರಲ್ಲಿ ನೆಗಿನ್ಹಾಲ್ ಹೇಳಿದ್ದರು. ಮುಂದಿನ ಐದು ವರ್ಷಗಳ ಕಾಲ ಅವರು ನಗರ ಹಸಿರೀಕರಣವನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡರು. ನಗರದಾದ್ಯಂತ 8–10 ಬೃಹತ್ ನರ್ಸರಿಗಳನ್ನು ಸ್ಥಾಪಿಸಿ, ಜನರು ಕಡಿಮೆ ದರದಲ್ಲಿ ಸಸಿಗಳನ್ನು ಪಡೆಯುವಂತೆ ವ್ಯವಸ್ಥೆ ಮಾಡಿದರು. ಪ್ರತಿಯೊಂದು ನರ್ಸರಿಯಲ್ಲೂ ಲಕ್ಷಾಂತರ ಸಸಿಗಳನ್ನು ಬೆಳೆಸುವ ಸಾಮರ್ಥ್ಯ ಇರಲೆಂದು ಖಚಿತಪಡಿಸಿದರು.
ಜನರ ಪಾಲ್ಗೊಳ್ಳುವಿಕೆಗೆ ಮಹತ್ವ
“ಸರ್ಕಾರ ಮಾತ್ರ ತೋಟಗಾರಿಕೆ ನಡೆಸಿದರೆ ಸಾಲದು. ಜನರು ಪಾಲ್ಗೊಂಡಾಗ ಮಾತ್ರ ಅದು ಯಶಸ್ವಿಯಾಗುತ್ತದೆ” ಎಂಬ ನಂಬಿಕೆಯಿಂದ, ನೆಗಿನ್ಹಾಲ್ ಬಹುತೇಕ ಪ್ರತಿಯೊಂದು ಪ್ರದೇಶಕ್ಕೂ ತೆರಳಿ, ಸಮುದಾಯದ ಮಾಲೀಕತ್ವದ ಭಾವನೆ ಬೆಳೆಸಿದರು. ಜನರಿಗೆ ಉಚಿತವಾಗಿ ಸಸಿಗಳನ್ನು ನೀಡಿ, ಅವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಅವರಿಗೇ ನೀಡಲಾಯಿತು. ಮರದ ವಾರ್ಡನ್ಗಳ ಪರಿಕಲ್ಪನೆ ರೂಪಿಸಿ, ಸುಮಾರು 350 ಸ್ವಯಂಸೇವಕರನ್ನು ನೇಮಿಸಿದರು. ಕೋರಮಂಗಲ, ಇಂದಿರಾನಗರ, ನಂದಿನಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲೇ ಸಸಿಗಳನ್ನು ವಿತರಿಸಲಾಗುತ್ತಿತ್ತು. ಲಾರಿಗಳ ಮೂಲಕ ಮನೆಬಾಗಿಲಿಗೆ ಸಸಿಗಳನ್ನು ತಲುಪಿಸುವ ವ್ಯವಸ್ಥೆಯೂ ಮಾಡಲಾಯಿತು.
ಮಧ್ಯರಾತ್ರಿ ತೋಟಗಾರಿಕೆ ಸಾಹಸ
ಆನಂದ್ ರಾವ್ ವೃತ್ತ ಮತ್ತು ಮೆಜೆಸ್ಟಿಕ್ ಪ್ರದೇಶಗಳಲ್ಲಿ ಮಧ್ಯರಾತ್ರಿ ಗಿಡ ನೆಡುವಿಕೆ ನೆಗಿನ್ಹಾಲ್ ಅವರ ಸಾಹಸಕ್ಕೆ ದೊಡ್ಡ ಉದಾಹರಣೆ. “ರಾತ್ರಿ 12 ಗಂಟೆಯಾದರೂ ಸಂಚಾರ ನಿಲ್ಲುತ್ತಿರಲಿಲ್ಲ. ಹೀಗಾಗಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ 15 ಅಡಿಗೂ ಹೆಚ್ಚು ಎತ್ತರದ ಮರಗಳನ್ನು ನೆಟ್ಟೆವು. ಮರುದಿನ ಬೆಳಿಗ್ಗೆ ಜನರು ಬಂಜರು ಪ್ರದೇಶದಲ್ಲಿ ಹಠಾತ್ತನೆ ಬೆಳೆದ ಮರಗಳನ್ನು ನೋಡಿ ಅಚ್ಚರಿಗೊಂಡರು. ಎಂದು ಸಂದರ್ಶನದ ಸಮಯದಲ್ಲಿ ನೆಗಿನ್ಹಾಲ್ ನೆನಪಿಸಿಕೊಂಡಿದ್ದರು
ರಾಷ್ಟ್ರಮಟ್ಟದ ಗಮನ
ನೆಗಿನ್ಹಾಲ್ ಅವರ ಕಾರ್ಯ ದೇಶವ್ಯಾಪಿ ಗಮನ ಸೆಳೆಯಿತು. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಬೆಂಗಳೂರಿಗೆ ಬಂದು ಈ ಮಾದರಿಯಿಂದ ಪ್ರೇರಿತರಾದರು. ಒಮ್ಮೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನವದೆಹಲಿಯ ಶಕ್ತಿ ಸ್ಥಳದಲ್ಲಿ ತಕ್ಷಣ ಸಸಿಗಳನ್ನು ನೆಡಲು ಬಯಸಿದಾಗ, ಅಗತ್ಯ ಎತ್ತರದ ಸಸಿಗಳು ಲಭ್ಯವಾಗಿದ್ದು ಕೇವಲ ಬೆಂಗಳೂರಿನಲ್ಲಿ ಮಾತ್ರ. ಇಂದು ಶಕ್ತಿ ಸ್ಥಳದಲ್ಲಿ ಕಾಣುವ ಬಹುತೇಕ ಹಸಿರು ಬೆಂಗಳೂರಿನಿಂದ ಹೋದ ಸಸಿಗಳ ಫಲವೇ ಆಗಿದೆ.
ನಗರ ಅರಣ್ಯೀಕರಣದ ಪಿತಾಮಹ
ನಗರ ಅರಣ್ಯೀಕರಣ ಎಂಬ ಪರಿಕಲ್ಪನೆಗೆ ದೇಶದಲ್ಲಿ ಜೀವ ತುಂಬಿದವರು ನೆಗಿನ್ಹಾಲ್ ಎಂದರೆ ತಪ್ಪಾಗದು. ಅವರ ಯಶಸ್ಸಿನ ಬಳಿಕವೇ ಯೋಜನಾ ಆಯೋಗವು ನಗರಗಳಲ್ಲಿ ನೆಡುವಿಕೆಯನ್ನು ಐದು ವರ್ಷಗಳ ಯೋಜನೆಯಲ್ಲಿ ಸೇರಿಸಿತು. ಲೇಖಕರಾಗಿಯೂ ಅವರು ಅನನ್ಯರು. ನಗರ ತೋಟಗಾರಿಕೆ, ಪಶ್ಚಿಮ ಘಟ್ಟಗಳ ಅರಣ್ಯ ಮರಗಳು, ದಕ್ಷಿಣ ಭಾರತದ ಮರಗಳು ಹಾಗೂ ಕರ್ನಾಟಕದ ವನ್ಯಜೀವಿ ಅಭಯಾರಣ್ಯಗಳ ಕುರಿತು ಹಲವು ಮೌಲ್ಯಯುತ ಪುಸ್ತಕಗಳನ್ನು ಬರೆದಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನೂರಾರು ಮರಗಳು ಕಡಿದು ಹಾಕಲಾಗುತ್ತಿರುವುದು ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ನೆಗಿನ್ಹಾಲ್, “ಒಬ್ಬ ವ್ಯಕ್ತಿಗೆ ಕನಿಷ್ಠ ಎರಡು ಮರಗಳು ಅಗತ್ಯ. 80% ನಗರ ಕಾಂಕ್ರೀಟ್ ಆಗಿದೆ. ಮರಗಳಿಲ್ಲದೆ ಹೋದರೆ ಧೂಳು, ಉಸಿರಾಟದ ಸಮಸ್ಯೆಗಳು ಹೆಚ್ಚುತ್ತವೆ. ಚೀನಾದ ಉದಾಹರಣೆ ನಮ್ಮ ಮುಂದೆ ಇದೆ,” ಎಂದು ಎಚ್ಚರಿಸಿದ್ದರು.
ಬೆಂಗಳೂರು ಸುತ್ತಲೂ ಹಸಿರು ಹೊದಿಕೆಯನ್ನು ಸೃಷ್ಟಿಸಿದ ಮೇರು ವ್ಯಕ್ತಿ
ಇಂತಹ ಮೇರು ವ್ಯಕ್ತಿತ್ವ. ಖ್ಯಾತ ನಿವೃತ್ತ ಐಎಫ್ಎಸ್ ಅಧಿಕಾರಿ, ಬೆಂಗಳೂರು ನಗರ ಉದ್ಯಾನನಗರಿ ಎಂಬ ಬಿರುದಿಗೆ ಪ್ರಮುಖ ಕಾರಣೀಭೂತರಾದ ಎಸ್ಜಿ ನೆಗಿನ್ಹಾಲ್ ಕೋವಿಡ್ ಸಮಯದಲ್ಲಿ 2021ರಲ್ಲಿ ತನ್ನ 92 ವರ್ಷ ವಯಸ್ಸಿಗೆ ಇಹಲೋಹ ತ್ಯಜಿಸಿದರು. ಅವರು ಮೂಲತಃ ಧಾರವಾಡದವರು. ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾಗುವ ಮೊದಲು 1951 ರಲ್ಲಿ ಧಾರವಾಡದಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ತರಬೇತಿ ಪಡೆದರು. 1980 ರ ದಶಕದಲ್ಲಿ ಬೆಂಗಳೂರು ನಗರದ ಸುತ್ತಲೂ ಹಸಿರು ಹೊದಿಕೆಯನ್ನು ಸೃಷ್ಟಿಸಿದ ಕೀರ್ತಿ ನೆಗಿನ್ಹಾಲ್ ಅವರಿಗೆ ಸಲ್ಲುತ್ತದೆ

