ಹಗರಣ ತನಿಖೆಗೆ ಗೌಡರಿಂದ ಅಡ್ಡಿ?: ಆಡಿಯೋ ವೈರಲ್
- ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ನೀರು ಮಿಶ್ರಿತ ಹಾಲು ಹಗರಣ
- ಹಗರಣದ ತನಿಖೆಗೆ ಜೆಡಿಎಸ್ ವರಿಷ್ಠರೇ ಅಡ್ಡಿಯಾಗಿದ್ದಾರೆ ಎಂದು ಆರೋಪ
- ತನಿಖೆ ಕುರಿತು ತಟಸ್ಥವಾಗಿರುವಂತೆ ದೇವೇಗೌಡರು ಹೇಳಿದ ಆಡಿಯೋ ವೈರಲ್
ಮಂಡ್ಯ (ಜೂ.28): ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ನೀರು ಮಿಶ್ರಿತ ಹಾಲು ಹಗರಣದ ತನಿಖೆಗೆ ಜೆಡಿಎಸ್ ವರಿಷ್ಠರೇ ಅಡ್ಡಿಯಾಗಿದ್ದಾರೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಆಡಿಯೋ ವೈರಲ್ ಇದೀಗ ವೈರಲ್ ಆಗಿದೆ.
ಹಗರಣ ಬಯಲಾದ ಬೆನ್ನಲ್ಲೇ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಶಿಫಾರಸಿನ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸಿಐಡಿ ತನಿಖೆಗೆ ಮುಂದಾಗಿದ್ದರು.
ಮನ್ಮುಲ್ ಹಾಲಿಗೆ ನೀರು ಸೇರಿಸಿದ ಕೇಸ್ : 7 ಮಂದಿ ಸಸ್ಪೆಂಡ್ ...
ಬಿಜೆಪಿಯ ಕೆಲವು ಮುಖಂಡರೂ ಮನ್ಮುಲ್ ಆಡಳಿತ ಮಂಡಳಿ ಸೂಪರ್ಸೀಡ್ಗೆ ಒತ್ತಾಯಿಸಿದ್ದರು. ಈ ಹೊತ್ತಿನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತನಿಖೆ ಕೈಬಿಡುವಂತೆ ಮನವಿ ಮಾಡಿದ್ದರು.
ಆದರೂ ಮುಖ್ಯಮಂತ್ರಿಗಳು ತನಿಖೆ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ದೂರವಾಣಿ ಮೂಲಕ ತನಿಖೆ ಕುರಿತು ತಟಸ್ಥವಾಗಿರುವಂತೆ ಹೇಳಿದ ಪರಿಣಾಮ ತನಿಖೆಯನ್ನು ಸ್ಥಗಿತಗೊಳಿಸಿದರೆಂದು ಆಡಿಯೋದಲ್ಲಿ ಹೇಳಲಾಗಿದೆ.