Asianet Suvarna News Asianet Suvarna News

Kolar: ನಿಷ್ಕ್ರಿಯ ಉಸ್ತುವಾರಿ ಜಿಲ್ಲೆಗೆ ಬೇಡ: ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು ವಾಗ್ದಾಳಿ

ಕೋಲಾರ ಜಿಲ್ಲೆಗೆ ಉಸ್ತುವಾರಿ ಸಚಿವರು ನೇಮಕವಾಗಿ 8 ತಿಂಗಳು ಕಳೆದರೂ ಜಿಲ್ಲೆಗೆ ಮುನಿರತ್ನ ಅವರ ಕೊಡುಗೆ ಶೂನ್ಯ ಎಂದು ಸಚಿವ ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು ವಾಗ್ದಾಳಿ ನಡೆಸಿದರು.

Jds Mlc Govindaraju Slams on Minister Munirathna in kolar gvd
Author
Bangalore, First Published Apr 30, 2022, 11:19 PM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಏ.30): ಕೋಲಾರ (Kolar) ಜಿಲ್ಲೆಗೆ ಉಸ್ತುವಾರಿ ಸಚಿವರು ನೇಮಕವಾಗಿ 8 ತಿಂಗಳು ಕಳೆದರೂ ಜಿಲ್ಲೆಗೆ ಮುನಿರತ್ನ (Munirathna) ಅವರ ಕೊಡುಗೆ ಶೂನ್ಯ. ಯಾವುದೇ ರೀತಿಯ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಉಸ್ತುವಾರಿ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಚಿವ ಮುನಿರತ್ನ ವಿರುದ್ಧ ಜೆಡಿಎಸ್ ಎಂಎಲ್‌ಸಿ ಗೋವಿಂದರಾಜು (JDS MLC Govindaraju) ವಾಗ್ದಾಳಿ ನಡೆಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗೋವಿಂದರಾಜು, ಜಿಲ್ಲೆಯಲ್ಲಿ ಒಟ್ಟು 10 ಜನಪ್ರತಿನಿಧಿಗಳು ಇದ್ದೇವೆ. ಈವರೆಗೆ ಜನಪ್ರತಿನಿಧಿಗಳ ಸಮಸ್ಯೆಗಳ ಬಗ್ಗೆ ಮುನಿರತ್ನ ಅವರು ಚರ್ಚೆ ಮಾಡಿಲ್ಲ.

ಅಲ್ಲದೆ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಸಂಸದ ಮುನಿಸ್ವಾಮಿ ಅವರಿಗೆ ಕೊಟ್ಟಿದ್ದೇನೆ ಎಂದು ದುರಹಂಕಾರದಿಂದ ಸಚಿವರು ಹೇಳಿಕೆ ನೀಡುತ್ತಾರೆ. ಹಾಗಾಗಿ ನಿಷ್ಪ್ರಯೋಜಕ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು  ಸಚಿವ ಮುನಿರತ್ನ ಅವರು ಜಿಲ್ಲಾ ಪಂಚಾಯತಿಯಲ್ಲಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಇವರಿಗೆ ಆಸಕ್ತಿಯೇ ಇಲ್ಲ, ಜನರ ಸಂಕಷ್ಟ ಹೇಗೆ ಗೊತ್ತಾಗುತ್ತದೆ, ಸಚಿವರು ಅಧಿಕಾರಿಗಳ ಜೊತೆ ಸಭೆ ಮಾಡೋಕೆ ದಿನಾಂಕ ನಿಗದಿ ಮಾಡ್ತಿಲ್ಲ ಎಂದು ಜಿಲ್ಲಾಧಿಕಾರಿಗಳೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. 

Karnataka Politics: ಬಿಜೆಪಿ ಆಹ್ವಾನ ನೀಡಿದ್ರೆ ಕಾಂಗ್ರೆಸ್‌ ಪಕ್ಷವೇ ಖಾಲಿ: ಸಚಿವ ಮುನಿರತ್ನ

ಅಲ್ಲದೆ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಉಸ್ತುವಾರಿ ಸಚಿವ ಮುನಿರತ್ನ ಅವರು ಸಭೆ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಗಂಭೀರ ಆರೋಪವನ್ನ ಸಹ ಮಾಡಿದರು. ಉಸ್ತುವಾರಿ ಸಚಿವರು ಭ್ರಷ್ಟ ಅಧಿಕಾರಿಗಳನ್ನು ಇಚ್ಛಾನುಸಾರವಾಗಿ ಜಿಲ್ಲೆಗೆ ವರ್ಗಾವಣೆ ಮಾಡಿಕೊಂಡು ಆಡಳಿತ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳ ಜೊತೆ ಸಭೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 4 ತಿಂಗಳಿಗಾದರೂ ಸಭೆ ಮಾಡಿ ಜನರ ಕಷ್ಟಗಳನ್ನು ಆಲಿಸಬೇಕು. ಹಾಗಾಗಿ ಈಗಿರುವ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಕ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. 

ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮಾವು ಸಂಸ್ಕರಣಾ ಘಟಕ: ಸಚಿವ ಮುನಿರತ್ನ

ಹುಬ್ಬಳ್ಳಿ ಗಲಭೆಗಳ ಪ್ರಕರಣದಲ್ಲಿ ಬಾಗಿಯಾಗಿರು ಆರೋಪಿಗಳ ಕುಟುಂಬ ದಿನಸಿ ಕಿಟ್ ಹಾಗೂ 5 ಸಾವಿರ ಸಹಾಯ ಧನ ನೀಡುತ್ತೇನೆ ಎಂದು ಹೇಳಿಕೆ‌ ನೀಡಿರುವ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಂಎಲ್‌ಸಿ  ಗೋವಿಂದರಾಜು ಗಲಭೆಗಳ ಹಿಂದಿರುವ ಮಾಸ್ಟರ್ ಮೈಂಡ್  ಶಾಸಕ ಜಮೀರ್ ಅಹಮದ್ ಖಾನ್ ಇರುಬಹುದು ಅನಿಸುತ್ತೆ, ಗಲಭೆ ಪೀಡಿತರು ಅಂತ ಹೇಳಿ ಅವರಿಗೆ ಹಣ ಸಹಾಯ ಮಾಡಲು ಮುಂದಾಗಿದ್ದಾರೆ ಈ ಬಗ್ಗೆ ಜಮೀರ್ ಹೇಳಿಕೆಯನ್ನ ಸಹ ನೀಡಿದ್ದಾರೆ, ಆದರೆ ಗಲಭೆಕೋರರಿಗೆ ಶಿಕ್ಷೆ ಆಗಬೇಕು, ಆದರರೆ ಹುಡುಕಿಕೊಂಡು ಹೋಗಿ ಹಣ ಕೊಡಬಾರದು ಪ್ರಚೋದನೆ ಮಾಡಿದವರಿಗೆ ಸಹಾಯ ಮಾಡೋದು ಪ್ರಜಾಪ್ರಭುತ್ವದ ವಿರುದ್ಧ ನೀತಿ ಎಂದು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಇಂಚರಾ ಗೋವಿಂದರಾಜು ಹೇಳಿಕೆ ನೀಡಿದರು.

Follow Us:
Download App:
  • android
  • ios