Karnataka Politics: ಬಿಜೆಪಿ ಆಹ್ವಾನ ನೀಡಿದ್ರೆ ಕಾಂಗ್ರೆಸ್ ಪಕ್ಷವೇ ಖಾಲಿ: ಸಚಿವ ಮುನಿರತ್ನ
* ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳೇ ಇರಲ್ಲ
* ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿ ಇದ್ದಿದ್ದರೆ ಪಕ್ಷಕ್ಕೆ ಇಂಥ ಸ್ಥಿತಿ ಬರುತ್ತಿರಲಿಲ್ಲ
* ಕಾಂಗ್ರೆಸ್ಗೆ ಬರೋರು ಇರಲಿ, ಇರೋರನ್ನೇ ಉಳಿಸಿಕೊಂಡರೆ ಅವರಿಗೆ ಸಾಕಾಗಿದೆ
ಮದ್ದೂರು(ಏ.27): ಪಕ್ಷ ಸೇರುವಂತೆ ಬಿಜೆಪಿಯಿಂದ(BJP) ಆಹ್ವಾನ ಹೋದರೆ ಇಡೀ ಕಾಂಗ್ರೆಸ್(Congress) ಪಕ್ಷವೇ ಖಾಲಿಯಾಗುತ್ತದೆ. ಚುನಾವಣೆಗೆ ಸ್ಪರ್ಧಿಸಲು ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇರೋದಿಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ(Munirathna) ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿ ಇದ್ದಿದ್ದರೆ ಪಕ್ಷಕ್ಕೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಆ ಪಕ್ಷಕ್ಕೆ ಬರೋರು ಇರಲಿ, ಇರೋರನ್ನೇ ಉಳಿಸಿಕೊಂಡರೆ ಅವರಿಗೆ ಸಾಕಾಗಿದೆ. ನಾವೇನಾದರೂ ಪಕ್ಷಕ್ಕೆ ಬರುವಂತೆ ಕರೆದರೆ ಬಹಳಷ್ಟುಮಂದಿ ಬರಲಿದ್ದಾರೆ. ಆದರೆ, ನಾವೇ ಇನ್ನೂ ಆಹ್ವಾನ ಕೊಟ್ಟಿಲ್ಲ. ಕಾಂಗ್ರೆಸ್ನವರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿದ್ದರೆ ನಾವೇಕೆ ಪಕ್ಷ ಬಿಟ್ಟು ಬರುತ್ತಿದ್ದೆವು. ಗೌರವದಿಂದ ನಡೆಸಿಕೊಳ್ಳದಿದ್ದಾಗ ಎಲ್ಲರೂ ಹೋಗೋದೆ. ಬಿಜೆಪಿ ನಮ್ಮನ್ನು ಗೌರವ, ಮರ್ಯಾದೆಯಿಂದ ನಡೆಸಿಕೊಳ್ಳುತ್ತಿದೆ. ನಾವಿಲ್ಲಿ ನೆಮ್ಮದಿಯಿಂದ ಇದ್ದೇವೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮಾವು ಸಂಸ್ಕರಣಾ ಘಟಕ: ಸಚಿವ ಮುನಿರತ್ನ
ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನವರ ಹಿಂದೆ ಹೋಗುವವರು ಯಾರೂ ಇಲ್ಲ. ಒಮ್ಮೆ ನಾವೇನಾದರೂ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ರಾಜ್ಯದಲ್ಲಿ(Karnataka) ಈಗ ಹೆಚ್ಚಿನ ಶಕ್ತಿ ಇದೆ. ಅದಕ್ಕಾಗಿ ಬೇರೆ ಪಕ್ಷದಿಂದ ಬರುವಂಥವರ ಬಗ್ಗೆ ಯೋಚಿಸುತ್ತಿದ್ದೇವೆ. ಬಿಜೆಪಿ ನಮ್ಮನ್ನು ಗೌರವ, ಮರ್ಯಾದೆಯಿಂದ ನಡೆಸಿಕೊಳ್ಳುತ್ತಿದೆ. ನಾವಿಲ್ಲಿ ನೆಮ್ಮದಿಯಿಂದ ಇದ್ದೇವೆ. ನಾವು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ನ ಕೆಲವರು ನಮ್ಮನ್ನೂ ಸೇರಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾವು ಆತುರಪಟ್ಟು ಆಹ್ವಾನ ನೀಡುತ್ತಿಲ್ಲ ಎಂದರು.
ಬಿಜೆಪಿಯಲ್ಲಿ ನೆಮ್ಮದಿಯಾಗಿದ್ದೇವೆ, ಪಕ್ಷ ಬಿಡಲ್ಲ
ಬಿಜೆಪಿಯಲ್ಲಿ ನೆಮ್ಮದಿಯಾಗಿ, ಸಂತೋಷವಾಗಿದ್ದೇನೆ. ಪಕ್ಷ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದೆ. ಹೀಗಾಗಿ ಪಕ್ಷ ಬಿಡುವ ಪ್ರಮೇಯವೇ ಇಲ್ಲ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದರು.
‘ಕಾಂಗ್ರೆಸ್ನಿಂದ ಬರುವವರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಹೈಕಮಾಂಡ್(High Command) ಅನುಮತಿ ನೀಡಿದರೆ ಮುಂದೆ ಕರೆತರುವ ಬಗ್ಗೆ ನೋಡೋಣ. ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಜತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಕೇಳುತ್ತೇನೆ. ನಾವು ಯಾರನ್ನೂ ವಾಪಸ್ ಬಿಟ್ಟುಕೊಡಲ್ಲ. ಹೀಗಾಗಿ ನಾವು ಯಾರು ಅಲ್ಲಿಗೆ ಹೋಗುವುದಿಲ್ಲ. ಪ್ರತಿಪಕ್ಷ ಸಿದ್ದರಾಮಯ್ಯ(Siddaramaiah) ಸಂಪರ್ಕದಲ್ಲಿ ಯಾರಿದ್ದಾರೆ ಗೊತ್ತಿಲ್ಲ’ ಎಂದು ಹೇಳಿದ್ದರು.