ನಾನು ಕಾಂಗ್ರೆಸ್ಗೆ ಹೊಗ್ತೀನಿ ಅನ್ನೋರಿಗೆ ತಲೆ ಕೆಟ್ಟಿದೆ: ಕೆಂಡಾಮಂಡಲವಾದ ಜೆಡಿಎಸ್ ಶಾಸಕ
- ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎನ್ನುವವರಿಗೆ ತಲೆ ಕೆಟ್ಟಿದೆ
- ತಮ್ಮ ವಿರುದ್ಧ ಊಹಾಪೋಹ ಹಬ್ಬಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಗರಂ ಆದ ಶಾಸಕ
ಹಾಸನ (ಸೆ.26): ನಾನು ಕಾಂಗ್ರೆಸ್ಗೆ (Congress) ಹೋಗುತ್ತೇನೆ ಎನ್ನುವವರಿಗೆ ತಲೆ ಕೆಟ್ಟಿದೆ. ತಮ್ಮ ವಿರುದ್ಧ ಊಹಾಪೋಹ ಹಬ್ಬಿಸುತ್ತಿರುವ ರಾಜಕೀಯ (Politics) ನಾಯಕರ ವಿರುದ್ಧ ಶಾಸಕ ಶಿವಲಿಂಗೇಗೌಡ (shivalingegowda) ಕಿಡಿಕಾರಿದರು.
ಹಾಸನದಲ್ಲಿಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ ಇನ್ನೂ ಆಡಳಿತ ಒಂದೂವರೆ ವರ್ಷ ಇದೆ. ಈ ದೇಶದ ರಾಜಕೀಯ ಪರಿಸ್ಥಿತಿ ಯಾರಾದರೂ ಚರ್ಚೆ ಮಾಡಿದ್ದಾರಾ..? ಅದು ಬಿಟ್ಟು ಬೇರೆ ಬೇರೆ ಚರ್ಚೆ ಆಗುತ್ತಿದೆ. ಯಾರ್ಯಾರಿಗೆ ತಲೆ ಕೆಟ್ಟಿದೆ ಯಾರಿಗೆ ಗೊತ್ತು, ಆದರೆ ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ ಎಮದು ಶಿವಲಿಂಗೆಗೌಡರು ಕಿರಿಕಾರಿದರು.
ಅಲ್ಲಿ ಹೋಗ್ತಾರೆ, ಇಲ್ಲಿ ಹೋಗ್ತಾರೆ ಎಂದು ಯಾರು ಹೇಳಿದ್ದಾರೆ. ಯಾವುದೋ ಮೂಲದಿಂದ ತಿಳಿದು ನೀವೇ ಹೇಳುತ್ತಿದ್ದೀರಿ ಅಷ್ಟೇ ಎಂದು ಮಾಧ್ಯಮದವರ ವಿರುದ್ಧವೂ ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರ ಹಾಕಿದರು.
ಸಿದ್ದು ಸಿಎಂ ಆಗಿದ್ದಕ್ಕೆ ನಾನು 2 ಸಲ ಶಾಸಕನಾದೆ: ರೇವಣ್ಣಗೆ ಜೆಡಿಎಸ್ ನಾಯಕನಿಂದಲೇ ತಿರುಗೇಟು
ಮಾಧ್ಯಮ ಇರುವುದು ಊಹೆ ಮಾಡಿ ಬರಿಯೋದಕ್ಕೆ ಅಲ್ಲವೇ. ನೀವು ಏನು ಬೇಕಾದರು ಊಹೆ ಮಾಡಿ ಬರೆಯಿರಿ. ಯಾರು ಯಾರಿಗೆ ಯಾವ ಮೂಲದಿಂದ ತಿಳಿಯುತ್ತಿದೆ ನನಗೆ ಗೊತ್ತಿಲ್ಲ. ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಕಣಕಟ್ಟೆ ಹೋಬಳಿಯ ಆರು ಕೆರೆಗೆ ನೀರು ಕೊಟ್ಟರು ಆಗ ನಾನು ಅವರಿಗೆ ಚಿನ್ನದ ಉಂಗುರ ತೊಡಿಸಿದ್ದೆ. ಅದಕ್ಕೆ ನಾನು ಬಿಜೆಪಿಗೆ (BJP) ಹೋಗ್ತೀನಿ ಅಂಥಾ ಅರ್ಥನಾ ಎಂದು ಅಸಮಾಧಾನದಿಂದಲೆ ಶಿವಲಿಂಗೇಗೌಡ ಪ್ರಶ್ನೆ ಮಾಡಿದರು.
ಕೆಲಸ ಮಾಡಿಕೊಟ್ಟವರಿಗೆ ಕೃತಜ್ಞತೆಯನ್ನು ಯಾವ್ಯಾವುದೋ ರೂಪದಲ್ಲಿ ಸಲ್ಲಿಸುತ್ತೇವೆ. ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎನ್ನುವುದು ಮಾಧ್ಯಮದ ಸೃಷ್ಟಿ. ನೀವೆ ಅಲ್ಲಿಗೆ ಹೋಗುತ್ತೇನೆ ಎಂದು ಸೃಷ್ಟಿ ಮಾಡಿಕೊಂಡರೆ ನಾವು ಏನು ಮಾಡಲು ಆಗುತ್ತದೆ ಎಂದು ಪ್ರತ್ಯುತ್ತರ ನೀಡಿದರು.
ಮಾಧ್ಯಮದವರು ಒಳ್ಳೆಯದನ್ನು ಮಾಡುತ್ತೀರಿ, ಕೆಟ್ಟದ್ದನ್ನು ಮಾಡುತ್ತೀರಿ. ನಾನು JDS ಪಕ್ಷ ಬಿಡುವ ಸಂದರ್ಭ ಇನ್ನೂ ಒದಗಿ ಬಂದಿಲ್ಲ. ಸದನದಲ್ಲಿ ಚರ್ಚೆಯಾದಾಗ ಸಿದ್ದರಾಮಯ್ಯ ಮಾಡಿಕೊಟ್ಟ ಕೆಲಸದ ಬಗ್ಗೆ ನೆನೆದು ಅವರನ್ನು ಹೊಗಳಿದ್ದೇನೆ. ಅದರಿಂದ ನನ್ನ ಗೆಲುವಿಗೆ ಸಹಾಯವಾಯಿತೆಂದು ಹೇಳಿಕೊಂಡಿದ್ದೇನೆ. ಇಷ್ಟಕ್ಕೆ ಪಕ್ಷ ಬಿಡುವ ಚಿಂತನೆ ಎನ್ನಲಾಗಿದೆ.
ನಾನು ಕಾಂಗ್ರೆಸ್ ಗೆ ಹೋಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾನು ಜೆಡಿಎಸ್ ನಿಂದ ಗೆದ್ದು ಬೇರೆ ಪಕ್ಷಕ್ಕೆ ಹೋಗೋಕೆ ಆಗುತ್ತದೆಯಾ..? ದಯಮಾಡಿ ಇದನ್ನೆಲ್ಲಾ ನೀವು ಹುಟ್ಟು ಹಾಕಬೇಡಿ ಎಂದು ಮಾಧ್ಯಮಗಳ ಮುಂದೆ ಶಾಸಕ ಶಿವಲಿಂಗೇಗೌಡ ಹೇಳಿದರು.
ಕೈ ನಾಯಕ ಸಿದ್ದರಾಮಯ್ಯ ಅವರ ಸಹಾಯದಿಂದ 500 ಹಳ್ಳಿಗೆ ನೀರು ಬಂದಿದೆ. ಅದನ್ನು ನೆನಪಿಸಿಕೊಂಡಿದ್ದೇನೆ. ನಾಳೆ ದೇವೇಗೌಡರ ಜೊತೆ ಬಿಡದಿಯಲ್ಲಿ ಸಭೆ ಇದೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಸಭೆಗೆ ಯಾರು ಯಾರು ಬರ್ತಾರೆ ಗೊತ್ತಿಲ್ಲ. ನನ್ನನ್ನು ಕರೆದಿದ್ದಾರೆ ನಾನು ಹೋಗುತ್ತಿದ್ದೇನೆ ಅಷ್ಟೆ. ನಾನು ಜೆಡಿಎಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.