ಇದು ಜೆಡಿಎಸ್ ಭದ್ರಕೋಟೆ. ಬಿಜೆಪಿ ಇನ್ನೂ ಖಾತೆಯನ್ನೇ ತೆರದಿಲ್ಲ. ಈ ನಿಟ್ಟಿನಲ್ಲಿ ಜೆಡಿಎಸ್ ಅಧಿಕಾರ ಪಡೆಯೋದ್ರಲ್ಲಿ ಅನುಮಾನ ಇಲ್ಲವೆಂದು ದಳಪತಿಗಳು ಭರವಸೆಯಲ್ಲಿದ್ದಾರೆ. 

 ಸರಗೂರು (ಮಾ.11): ಜೆಡಿಎಸ್‌ನ ಭದ್ರಕೋಟೆಯಾದ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಸರಗೂರು ಪಟ್ಟಣದಲ್ಲಿ ನಡೆಯುವ ಪಪಂ ಚುನಾವಣೆಯಲ್ಲಿನ 12 ವಾರ್ಡ್‌ಗಳ ಪೈಕಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಪಂಯನ್ನು ಜೆಡಿಎಸ್‌ ತೆಕ್ಕೆಗೆ ಒಳಪಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಕರೆ ನೀಡಿದರು.

Add Asianetnews Kannada as a Preferred SourcegooglePreferred

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಪಂ ಮಾಜಿ ಸದಸ್ಯ ರವಿ, ನಾರಾಯಣ ಅವರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಸಭೆ ಕುರಿತು ಅವರು ಮಾತನಾಡಿದರು.

ಪಟ್ಟಣದಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಹಳಷ್ಟಿದ್ದಾರೆ. ಪಕ್ಷ ಬಹುಮತ ಗಳಿಸುವುದರಲ್ಲಿ ಅನುಮಾನವಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸ್ಥಾನದ ಖಾತೆ ತೆರೆದಿಲ್ಲ. ಹೀಗಾಗಿ ಕ್ಷೇತ್ರವೂ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಪಪಂ ಸದಸ್ಯರ ಆಯ್ಕೆಗಾಗಿ ನಡೆಯುವ ಚುನವಾಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಹೊರಗಿಂದ ಬಂದು ಇಲ್ಲಿ ಆಶ್ರಯ : ಎಚ್‌ಡಿಕೆ ವಿರುದ್ಧ ಪರದೇಶಿ ಟಾಂಗ್

ಪಟ್ಟಣದ 12 ವಾರ್ಡ್‌ಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹಿರಿಯ ಮುಖಂಡರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಚುನಾವಣ ಕಣದಲ್ಲಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಜತೆಗೆ ಪಕ್ಷಕ್ಕಾಗಿ ದುಡಿದ, ಪಟ್ಟಣದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಂಥ ಅಭ್ಯರ್ಥಿಗಳನ್ನು ನೇಮಕ ಮಾಡುವುದು ಒಳಿತು. ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯ ಇದಾಗಿದ್ದು, ಎಲ್ಲರೂ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸರಗೂರು ಜೆಡಿಎಸ್‌ ಘಟಕದ ಅಧ್ಯಕ್ಷ ಬಸವಣ್ಣ, ಎಚ್‌.ಡಿ. ಕೋಟೆ ಜೆಡಿಎಸ್‌ ಘಟಕದ ಅಧ್ಯಕ್ಷ ರಾಜೇಂದ್ರ, ಜೆಡಿಎಸ್‌ನ ಮುಖಂಡರಾದ ನರಸಿಂಹೇಗೌಡ ಮಾತನಾಡಿದರು.