ಜೆಡಿಎಸ್ ಮುಖಂಡರೋರ್ವರು ಇದೀಗ ತಮ್ಮ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪಕ್ಷ ಸೇರಿದ್ದಾಗಿ ಹೇಳಿದ್ದಾರೆ. 

ಹನೂರು [ಮಾ.11]: ಕ್ಷೇತ್ರ ವ್ಯಾಪ್ತಿಯ ಜಾತ್ಯತೀತ ಜನತಾದಳ ಪಕ್ಷದ ಮುಖಂಡರ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತು, ಶಾಸಕ ನರೇಂದ್ರ ಅವರ ಕಾರ್ಯವೈಖರಿಯನ್ನು ಮೆಚ್ಚಿ ಜಾತ್ಯತೀತ ಜನತಾದಳ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಮಾರ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗು ತಿಳಿಸಿದರು.

Add Asianetnews Kannada as a Preferred SourcegooglePreferred

ಪಟ್ಟಣದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ನಿರ್ದೇಶಕ ನಾಗು, ತಾಲೂಕಿನ ಮಾರ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಜೆಡಿಎಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದೆನು.

ಆದರೆ ಚುನಾವಣಾ ಸಂದರ್ಭದಲ್ಲಿ ಪಕ್ಷದ ಕೆಲ ಮುಖಂಡರು ನಡೆದುಕೊಂಡ ರೀತಿ ಮತ್ತು ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದ ನಂತರ ನಡೆದುಕೊಂಡ ರೀತಿ, ಏಕಪಕ್ಷೀಯ ನಿರ್ಧಾರಗಳಿಂದ ನನ್ನ ಮನಸ್ಸಿಗೆ ಬಹಳ ನೋವುಂಟಾಗಿತ್ತು. ಆದ್ದರಿಂದ ಕ್ಷೇತ್ರದ ಜನಪ್ರಿಯ ಶಾಸಕರಾದ ನರೇಂದ್ರ ಅವರ ಕಾರ‍್ಯವೈಖರಿ, ಅಭಿವೃದ್ಧಿ ಕಾರ‍್ಯಗಳು ಮತ್ತು ಮಾರ್ಟಳ್ಳಿ ಭಾಗದ ಕಾಂಗ್ರೆಸ್‌ ಮುಖಂಡರ ಕಾರ‍್ಯವೈಖರಿಯನ್ನು ಮೆಚ್ಚಿ ಇಂದು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಅಶ್ಲೀಲ ಹೇಳಿಕೆ.

ಇದೇ ವೇಳೆ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಸೇಸುರಾಜ್‌ ಕೂಡ ಜೆಡಿಎಸ್‌ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಮಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈಶ್ವರ್‌, ಗ್ರಾ.ಪಂ ಸದಸ್ಯ ರಾಮಲಿಂಗಂ, ತಂಬಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಅರುಳ್‌ನಾಥನ್‌, ಜಪಮಾಲೈ, ಹನೂರು ಪ.ಪಂ ಸದಸ್ಯರಾದ ಹರೀಶ್‌, ಗಿರೀಶ್‌, ಸಂಪತ್‌ ಮುಖಂಡರಾದ ಗೋವಿಂದ, ಶಿವು, ನಟರಾಜು ಇನ್ನಿತರರು ಇದ್ದರು.