ಸಮಾಜದ ಏಳ್ಗೆಗಾಗಿ ನಮ್ಮ ನಮ್ಮಲಿನ ಗೊಂದಲಗಳನ್ನ ಬದಿಗಿಟ್ಟು ಒಂದಾಗಬೇಕು. ಮೀಸಲಾತಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು: ಜಯಮೃತ್ಯುಂಜಯ ಸ್ವಾಮೀಜಿ 

ಸಂಕೇಶ್ವರ(ಸೆ.04): ಪಂಚಮಸಾಲಿ ಸಮುದಾಯದ ಬಡ ಮಕ್ಕಳ ಭವಿಷ್ಯಕ್ಕೆ 2ಎ ಮೀಸಲಾತಿ ಹೋರಾಟ ಮಾಡುತ್ತಿದ್ದು, ನಿದ್ದೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಆದಷ್ಟು ಬೇಗ ಮೀಸಲಾತಿ ಭರವಸೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಸಮೀಪದ ಗೋಟುರ ಗ್ರಾಮದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದ ಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿ, ಸಮಾಜದ ಏಳ್ಗೆಗಾಗಿ ನಮ್ಮ ನಮ್ಮಲಿನ ಗೊಂದಲಗಳನ್ನ ಬದಿಗಿಟ್ಟು ಒಂದಾಗಬೇಕು. ಮೀಸಲಾತಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಶಾಸಕ ಸತೀಶ ಜಾರಕಿಹೊಳಿ ಅವರಿಗೂ ಪಂಚಮಸಾಲಿ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಯಮಕನಮರಡಿ ಮತ ಕ್ಷೇತ್ರದ ಪಂಚಮಸಾಲಿ ಸಮಾಜದವರು ಶಾಸಕರಿಗೆ ಮನವಿ ಮಾಡಬೇಕೆಂದರು.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿ, ಮಾತು ಉಳಿಸಿಕೊಳ್ಳಿ

ಇದೇ ತಿಂಗಳು 12ರಿಂದ ಪ್ರಾರಂಭವಾಗಲಿರುವ ವಿಧಾನ ಮಂಡಳದ ಉಭಯ ಸದನಗಳ ಅಧಿವೇಶನದಲ್ಲಿ ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಕುರಿತಂತೆ ರಾಜ್ಯದ ಜನಪ್ರತಿನಿಧಿಗಳು ಸ್ಪಷ್ಟ ನಿರ್ಧಾರ ಕೈಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಪಂಚಮಸಾಲಿ ಸಮಾಜದ ಕೊಡುಗೆ ಸಮಾಜಕ್ಕೆ ಅಪಾರವಾದದ್ದು, ಸಮಾಜದ ಗುರುಗಳಾದ ಜಯಮೃತ್ಯುಂಜಯ ಸ್ವಾಮೀಜಿ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೋರಾಟ ಮಾಡುತ್ತಿದ್ದು, ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಿ ಸ್ವಾಮೀಜಿ ಕರೆಗೆ ಬೆಂಬಲ ನೀಡಬೇಕು ಎಂದರು.

ಸಭೆಯಲ್ಲಿ ಸಮಾಜದ ಮುಖಂಡರಾದ ವೃಷಭ ಪಾಟೀಲ (ಕರಗಾಂವ), ಗ್ರಾಮದ ಪಿಕೆಪಿಎಸ್‌ ಅಧ್ಯಕ್ಷ ಭೀಮಗೌಡ ಪಾಟೀಲ, ಮುಖಂಡರಾದ ಪಿ.ಆರ್‌.ನಂದಗಾವಿ, ಲಕಮಗೌಡ ಪಾಟೀಲ, ಡಿ.ಬಿ .ಪಾಟೀಲ, ಮಾರುತಿ ಪಾಟೀಲ, ಪರಗೌಡ ಪಾಟೀಲ, ಸುಜೀತಗೌಡ ಪಾಟೀಲ, ಸದಾನಂದ ಸತ್ತಿಗೇರಿ, ರುದ್ರಗೌಡ ಪಾಟೀಲ, ಭರಮಗೌಡ ಪಾಟೀಲ, ನಾನಾಗೌಡ ಪಾಟೀಲ, ಮಲಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ನಿಂಗನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ರುದ್ರಪ್ಪ ನಂದಗಾವಿ ನಿರೂಪಿಸಿ ವಂದಿಸಿದರು.