ಕಲ್ಲುಗಣಿಗಾರಿಕೆಗಿಂತ ಇದರ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್‌ಗಳಿಂದ ಜನಜೀವನಕ್ಕೆ ಭಾರೀ ಅಪಾಯ ಎದುರಾಗಿದೆ. ಇದರ ಬಗ್ಗೆ ಕ್ರಮಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ, ಎಸ್ಪಿ ಅವರಿಗೂ ಸೂಚನೆ ನೀಡಲಾಗಿದೆ. ನನಗೆ ಗೊತ್ತಿರುವ ಹಾಗೆ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಇಲ್ಲಿ ಕ್ರಷರ್ ಸಂಸ್ಕೃತಿ ತಲೆಯೆತ್ತಿದೆ. ಇದನ್ನು ಕಾನೂನು ಮೂಲಕವೇ ಮಣಿಸಬೇಕೇ ವಿನಃ ದಿಢೀರ್ ತೀರ್ಮಾನಗಳಿಂದ, ಆತುರದ ನಿರ್ಧಾರಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ 

ಚಿಕ್ಕಬಳ್ಳಾಪುರ(ನ.02): ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿ, ಕ್ರಷರ್ ಇತ್ಯಾದಿ ಕಲ್ಲುಗಣಿಗಾರಿಕೆಯನ್ನು ಏಕಾಏಕಿ ನಿಲ್ಲಿಸಲು ಆಗುವುದಿಲ್ಲ. ಅಕ್ರಮ ಗಣಿಗಾರಿಗೆ ನಡೆಯುತ್ತಿದ್ದಲ್ಲಿ ಇದರಿಂದ ಜನ ಜಾನುವಾರುಗಳಿಗೆ ಅಪಾಯವಾಗುತ್ತಿದ್ದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬಹುದು.ತಪ್ಪಿದ್ದಲ್ಲಿ ಕಾನೂನು ಬದ್ದವಾಗಿ ನಿಯಂತ್ರಣ ಹೇರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಇಂದು ನಿನ್ನೆಯಿಂದ ನಡೆಯುತ್ತಿಲ್ಲ, ಹತ್ತಾರು ವರ್ಷಗಳಿಂದ ನಡೆಯುತ್ತಿದ್ದು , ಕಲ್ಲುಗಣಿಗಾರಿಕೆಗಿಂತ ಇದರ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್‌ಗಳಿಂದ ಜನಜೀವನಕ್ಕೆ ಭಾರೀ ಅಪಾಯ ಎದುರಾಗಿದೆ. ಇದರ ಬಗ್ಗೆ ಕ್ರಮಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ, ಎಸ್ಪಿ ಅವರಿಗೂ ಸೂಚನೆ ನೀಡಲಾಗಿದೆ. ನನಗೆ ಗೊತ್ತಿರುವ ಹಾಗೆ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಇಲ್ಲಿ ಕ್ರಷರ್ ಸಂಸ್ಕೃತಿ ತಲೆಯೆತ್ತಿದೆ. ಇದನ್ನು ಕಾನೂನು ಮೂಲಕವೇ ಮಣಿಸಬೇಕೇ ವಿನಃ ದಿಢೀರ್ ತೀರ್ಮಾನಗಳಿಂದ, ಆತುರದ ನಿರ್ಧಾರಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.

ಬರ ಪರಿಹಾರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್

ಕಲ್ಲು ಬಂಡೆಗಳ ಸ್ಪೋಟ, ಅದರಿಂದ ಮೇಲೇಳುವ ದೂಳು,ಗಾಳಿಯಲ್ಲಿ ತೇಲಿ ಬರುವ ನೈಟ್ರೇಟ್,ಪ್ಲೋರೈಡ್,ಯುರೇನಿಯಂನಿಂದ ಆಗುವ ಅಪಾಯದ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇದು ನಿಜವೇ ಆಗಿದ್ದಲ್ಲಿ. ಪರಿಸರ ಮತ್ತು ಮಾಲಿನ್ಯ ಇಲಾಖೆ ಮಾನದಂಡ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾನದಂಡಗಳನ್ನು ಮೀರಿದ್ದರೆ ಯಾವ ಕಾರಣಕ್ಕೂ ಮುಂದುವರೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯನ್ನಾಗಿಸಿ

ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು, ಹಸಿರು ಜಿಲ್ಲೆಯಾಗಿ ಮರು ರೂಪಿಸಲು ಕಳೆದ 4ತಿಂಗಳಿಂದ ಅವಿತರವಾಗಿ ಶ್ರಮಿಸಲಾಗುತ್ತಿದೆ.ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರ ಸಹಕಾರ ಅಗತ್ಯವಿದೆ.ಕೇಂದ್ರ ಸರಕಾರದ ಯಾವ ಯೋಜನೆಗಳಿಂದಲೂ ಪ್ಲಾಸ್ಟಿಕ್ ನಿಷೇಧ ಆಗಿಲ್ಲ. ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಅಪಾಯ ತಂದೊಡ್ಡುವ ಪ್ಲಾಸ್ಟಿಕ್ ಎಂಬ ಬ್ರಹ್ಮರಾಕ್ಷಸನನ್ನು ನಿರ್ನಾಮ ಮಾಡಲು ನಮ್ಮ ಸರಕಾರ ಬದ್ಧವಾಗಿದೆ. ಇದಕ್ಕೆ ಜನತೆಯ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಹಸಿಕಸ ಒಣಕಸ ಮೂಲದಲ್ಲಿಯೇ ಬೇರ್ಪಡಿಸಿ ಹಾಕುವುದು ಅಗತ್ಯವಿದೆ.ನಗರ ಗ್ರಾಮೀಣ ಎನ್ನದೆ ಎಲ್ಲಡೆ ಈ ಬಗ್ಗೆ ಅರಿವು ಮೂಡಿದರೆ ನಮ್ಮ ಸಂಕಲ್ಪ ಈಡೇರಲಿದೆ ಎಂದರು.

ಮಹಾಕಾವ್ಯ ರಚನೆ ಮೂಲಕ ಆದಿಕವಿಯಾದ ವಾಲ್ಮೀಕಿ: ಸಚಿವ ಎಂ.ಸಿ.ಸುಧಾಕರ್

ಕಸದಲ್ಲಿ ಶೇ. 79 ಭಾಗ ಪ್ಲಾಸ್ಟಿಕ್‌

ಶೀಘ್ರದಲ್ಲಿಯೇ ಜಿಲ್ಲೆಯ 6 ತಾಲೂಕುಗಳಲ್ಲಿ ಒಂದು ದಿನ ಕಸ ಎಸೆಯುವ ಸ್ಥಳಗಳ ಬಗ್ಗೆ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಪ್ರತಿನಿತ್ಯ ಸಂಗ್ರಹವಾಗುವ ಕಸದಲ್ಲಿ ಶೇ 79 ಭಾಗ ಪ್ಲಾಸ್ಟಿಕ್ ತ್ಯಾಜ್ಯವೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನತೆ ಕೈಜೋಡಿಸದ ಹೊರತು ಯಾವುದೇ ಒಂದು ಯೋಜನೆ ಸಾಕಾರಗೊಳ್ಳಲು ಸಾಧ್ಯವಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಬದ್ದತೆಯಿಂದ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ಒಂದಾಗಿ ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಕಾಶ್.ಜಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್‌ ತಿಪ್ಪೇಸ್ವಾಮಿ, ಜಿಲ್ಲಾ ಅರಣ್ಯಾಧಿಕಾರಿ ರಮೇಶ್, ಜಿಲ್ಲಾ ಉಪ ವಿಭಾಧಿಕಾರಿ ಅಶ್ವಿನ್, ತಹಶೀಲ್ದಾರ್ ಅನಿಲ್ ಮತ್ತಿತರರು ಇದ್ದರು.