ಕೈನಿಂದ ನಕಲಿ ಗ್ಯಾರಂಟಿ ಕಾರ್ಡ್‌ ವಿತರಣೆ : ರವೀಂದ್ರ ಶ್ರೀಕಂಠಯ್ಯ

ಕ್ಷೇತ್ರದಲ್ಲಿ ಆಡಳಿತ ನಡೆಸಿದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ನಾಟಕವಾಡಿಕೊಂಡೆ ದಿನ ಕಳೆದಿದ್ದಾರೆ. ಮತದಾರರು ಕೆಲಸ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

Issuance of duplicate guarantee card by hand snr

  ಶ್ರೀರಂಗಪಟ್ಟಣ :  ಕ್ಷೇತ್ರದಲ್ಲಿ ಆಡಳಿತ ನಡೆಸಿದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ನಾಟಕವಾಡಿಕೊಂಡೆ ದಿನ ಕಳೆದಿದ್ದಾರೆ. ಮತದಾರರು ಕೆಲಸ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಸಬಾ ಹೋಬಳಿ ಮಟ್ಟದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡದ ಜೊಳ್ಳುಗಳನ್ನು ತಿರಸ್ಕರಿಸಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಕೋರಿದರು.

ಅಧಿಕಾರಿಗಳೊಂದಿಗೆ ವಿಶ್ವಾಸದಿಂದ ಸಮನ್ವಯತೆ ಸಾಧಿಸದೇ ಇಷ್ಟುವರ್ಷಗಳ ಕಾಲ ಕ್ಷೇತ್ರದಲ್ಲಿ ನಾಟಕವಾಡಿಕೊಂಡೇ ದಿನ ಕಳೆದ ಮಾಜಿ ಶಾಸಕರು ಕುಡಿಯುವ ನೀರಿನ ವಿಷಯದಲ್ಲೂ ಈ ಭಾಗದ ಜನರಿಗೆ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.

ನನ್ನ 5 ವರ್ಷದ ಅವಧಿಯಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಮಹದೇವಪುರ ಬಹುಗ್ರಾಮಗಳ ಕುಡಿಯುವ ನೀರು ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿವೆ. ಉತ್ತಮ ತಳಿಯ ಗಟ್ಟಿಭತ್ತ ಯಾವುದು ಎಂದು ನೀವೆ ನಿರ್ಧರಿಸಿ ಮತ ನೀಡಿ ಎಂದರು.

ಸಚಿವ ಸುಧಾಕರ್‌ ಜೆಡಿಎಸ್‌ನಿಂದ ಈ ಬಾರಿ 100 ಮಂದಿ ಶಾಸಕರಾಗಿ ಆಯ್ಕೆಗೊಂಡರೆ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವಂತದಲ್ಲ. ಅವರು ರಾಜಕೀಯಕ್ಕೆ ಬರುವ ಮುನ್ನವೇ ಎಚ್‌.ಡಿ. ದೇವೇಗೌಡ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲು ಅವರ ಪಕ್ಷದ ಪರವಾಗಿ ಮಾತನಾಡುವುದು ಒಳಿತು ಎಂದು ಕಿಡಿಕಾರಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದವರು ಮತದಾರರನ್ನು ಒಲೈಸುವ ಸಲುವಾಗಿ 2 ಸಾವಿರ ರು. ನೀಡುವುದಾಗಿ ಗ್ಯಾರಂಟಿ ಕಾರ್ಡ್‌ ಮನೆ ಮನೆಗೆ ಹಂಚುತ್ತಿರುವುದು ಹಾಸ್ಯಾಸ್ಪದ. ಅದು ನಕಲಿ ಗ್ಯಾರಂಟಿ ಕಾರ್ಡ್‌. ಆ ಕಾರ್ಡ್‌ನಿಂದ ಯಾವುದೇ ಹಣ ಬರುವುದಿಲ್ಲ ಎಂದು ಲೇವಾಡಿ ಮಾಡಿದರು.

ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ದೂರದೃಷ್ಟಿಯುಳ್ಳ ಪಂಚರತ್ನ ಯೋಜನೆಗಳು ಬಡವರಿಗೆ ಅನುಕೂಲವಾಗಲಿದೆ. ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಎಚ್ಡಿಕೆನ್ನು ಸಿಎಂ, ನನ್ನನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಬೇಕು ಎಂದರು.

ಈ ವೇಳೆ ಕಸಬಾ ಹೋಬಳಿಯ ವಿವಿಧ ಗ್ರಾಮಗಳ ನೂರಾರು ಮಂದಿ ಹಲವು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್‌, ತಾಲೂಕು ಅಧ್ಯಕ್ಷ ಪೈ, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ…, ನಗರ ಘಟಕ ಅಧ್ಯಕ್ಷ ಸುರೇಶ್‌, ಚಿಕ್ಕಂಕನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಭಾಕರ್‌, ಚಿಕ್ಕತಾಯಮ್ಮ, ಅಶೋಕ್‌, ಮಹೇಶ್‌ಗೌಡ, ಜಯರಾಂ, ರಜಿನಿ, ಲತಾ ನಾಗೇಶ್‌, ಪುರಸಭಾ ಸದಸ್ಯ ಎಸ್‌.ಪ್ರಕಾಶ್‌, ಮಾಜಿ ಸದಸ್ಯ ಸಾಯಿಕುಮಾರ್‌ ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

Latest Videos
Follow Us:
Download App:
  • android
  • ios