ಶಾಸಕ ಎನ್‌.ವೈ.ಗೋಪಾಲಕೃಷ್ಣ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ದೇವಸಮುದ್ರ ಇಂದಿರಾ ಗಾಂಧಿ ವಸತಿ ಶಾಲೆಗೆ ದಿಢೀರನೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಮೊಳಕಾಲ್ಮುರು (ಜು.30) :  ಶಾಸಕ ಎನ್‌.ವೈ.ಗೋಪಾಲಕೃಷ್ಣ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ದೇವಸಮುದ್ರ ಇಂದಿರಾ ಗಾಂಧಿ ವಸತಿ ಶಾಲೆಗೆ ದಿಢೀರನೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

Add Asianetnews Kannada as a Preferred SourcegooglePreferred

ಇಲ್ಲಿನ ಅಡುಗೆ ಕೋಣೆ, ಊಟದ ಕೊಠಡಿ, ಶಾಲೆಯ ಸುತ್ತಲಿನ ಸ್ವಚ್ಛತೆ, ಆಟದ ಮೈದಾನ ಪರಿಶೀಲಿಸಿದ ಶಾಸಕರು ಅಡುಗೆ ಸಿಬ್ಬಂದಿಯ ಕಾರ್ಯವೈಖರಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಡುಗೆ ಸಿಬ್ಬಂದಿಗಳು ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಂಡು, ಆಹಾರ ತಯಾರಿಸಿ ನೀಡಬೇಕು. ನಿಮಗಿಷ್ಟಬಂದಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನಿಮ್ಮ ಬಗ್ಗೆ ತುಂಬಾ ದೂರುಗಳು ಬಂದಿವೆ ಎಂದು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಕಾನೂನು ಸಲಹೆ ಪಡೆದು ಸದಾಶಿವ ವರದಿ ಜಾರಿಗೆ ಯತ್ನ- ಕೆಎಚ್ ಮುನಿಯಪ್ಪ

ಅಡುಗೆ ಕೋಣೆಗೆ ಭೇಟಿ ನೀಡಿದಾಗ ಮುಗ್ಗಿದ ಅಕ್ಕಿ, ಬಾಡಿತ ತರಕಾರಿಗಳನ್ನು ಕಂಡು ಆಕ್ರೋಶಗೊಂಡರು. ಅಲ್ಲಿನ ನಿಲಯ ಪಾಲಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಮಕ್ಕಳಿಗೆ ಗುಣಮಟ್ಟದ ತರಕಾರಿ ಮತ್ತು ಶುಚಿ-ರುಚಿ ಊಟ ನೀಡಬೇಕು. ಯಾವುದೇ ದೂರುಗಳು ಬಾರದಂತೆ ಎಚ್ಚರವಹಿಸಬೇಕು. ನಿಲಯ ಪಾಲಕರಾದ ನೀವುಗಳು ಅಡುಗೆ ಸಿಬ್ಬಂದಿಯ ಕುರಿತು ನಿರ್ಲಕ್ಷ ವಹಿಸುವುದು ಸಹಿಸಲ್ಲ ಎಂದು ಎಚ್ಚರಿಸಿದರು.

ಗುತ್ತಿಗೆ ಆದಾರದಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿ ಪರಸ್ಪರ ಬೈದಾಡಿಕೊಂಡು ಕೆಲಸ ನಿರ್ವಹಿಸುವ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರ ನಡುವೆ ಸಾಮರಸ್ಯ ಕೊರತೆ ಎದುರಾಗುತ್ತಿದೆ ಎನ್ನುವುದು ಕೇಳಿದ್ದೇನೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಅಧಿಕಾರವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಸಹಕಾರ ನೀಡದಿರುವ ಸಹ ಶಿಕ್ಷಕರ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಅಲ್ಲಿನ ಪ್ರಾಂಶುಪಾಲ ಎಸ್‌.ನಾಗೇಂದ್ರ ಅವರಿಗೆ ಸೂಚಿಸಿದರು.

ಮದ್ರಾಸ್ EYE ಗೆ ನಲುಗಿ ಹೋದ ವಿದ್ಯಾರ್ಥಿಗಳು, ಕೂಲಿಂಗ್ ಗ್ಲಾಸ್ ಧರಿಸಿ ಶಾಲೆಗೆ

ಗುತ್ತಿಗೆ ಆದಾರದಲ್ಲಿ ನೇಮಕಗೊಂಡಿರುವಂತೆ ಎಲ್ಲಾ ಸಿಬ್ಬಂದಿಗೆ ಈ ಕೂಡಲೆ ನೋಟಿಸ್‌ ನೀಡಬೇಕು. ತರಕಾರಿ ಟೆಂಡರ್‌ ಪಡೆದಂತವರ ಗುತ್ತಿಗೆಯನ್ನು ರದ್ದುಗೊಳಿಸಿ ಸ್ಥಳೀಯರಿಗೆ ಟೆಂಡರ್‌ ನೀಡಬೇಕು. ಇದರಿಂದ ತಾಜಾ ತರಕಾರಿ ಸಿಗಲು ನೆರವಾಗಲಿದೆ. ಒಂದು ವಾರದೊಳಗೆ ಎಲ್ಲವನ್ನೂ ಸರಿಪಡಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಜಗದೀಶ, ನಿರೀಕ್ಷಕ ಶಿವಕುಮಾರ್‌, ತಹಸೀಲ್ದಾರ್‌ ಎಂ.ವಿ.ರೂಪಾ, ತಾಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಡಿ.ಚಿದಾನಂದಪ್ಪ, ಪಿಡಿಒ ಗುಂಡಪ್ಪ ಇದ್ದರು.