ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾದಂತೆಯೇ ಘಟನೆಯೊಂದು ನಡೆದಿದೆ. ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸೃಷ್ಟಿ ಮತ್ತು ಮಣಿಕಂಠ ಜೋಡಿಯನ್ನು, ಯುವತಿಯ ಪೋಷಕರೇ ಬಲವಂತವಾಗಿ ಬೇರ್ಪಡಿಸಿದ್ದಾರೆ.

ಹಾವೇರಿ (ಮಾ.4): ಕನ್ನಡದ ಸೂಪರ್‌ಹಿಟ್‌ ಸಿನಿಮಾ ಚೆಲುವಿನ ಚಿತ್ತಾರದ ಕಥೆಯನ್ನೇ ನೆನಪಿಸುವಂಥ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.. ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಸಿನಿಮೀಯ ಶೈಲಿಯ ಲವ್ ಸ್ಟೋರಿಯೊಂದು ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ನವಜೋಡಿಯನ್ನು ಪೋಷಕರೇ ಬಲವಂತವಾಗಿ ಬೇರ್ಪಡಿಸಿದ ಘಟನೆ ವರದಿಯಾಗಿದೆ. ತಿಳವಳ್ಳಿ ಗ್ರಾಮದ ಮಣಿಕಂಠ ಮತ್ತು ಸೃಷ್ಟಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ, ಈ ಜೋಡಿ ಇತ್ತೀಚೆಗಷ್ಟೇ ಕಾನೂನುಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯ ನಂತರ ಸೃಷ್ಟಿ ತನ್ನ ಪತಿ ಮಣಿಕಂಠನ ಮನೆಯಲ್ಲಿ ವಾಸವಿದ್ದರು. ಆದರೆ, ಮಗಳ ಈ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಆಕೆಯ ತಂದೆ ಮತ್ತು ಸಂಬಂಧಿಕರು ಮಣಿಕಂಠನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

ಸಿನಿಮೀಯ ಮಾದರಿಯಲ್ಲಿ ಮಗಳ ಅಪಹರಣ

ಯುವಕನ ಮನೆಗೆ ಏಕಾಏಕಿ ನುಗ್ಗಿದ ಸೃಷ್ಟಿಯ ತಂದೆ ಮತ್ತು ಸಂಬಂಧಿಕರು, ಮಣಿಕಂಠನ ಮನೆಯವರ ಮೇಲೆ ಹಲ್ಲೆ ನಡೆಸಿ, ಸೃಷ್ಟಿಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. "ನಾನು ಪ್ರೀತಿಸಿ ಮದುವೆಯಾಗಿದ್ದೇನೆ, ನನಗೆ ನನ್ನ ಗಂಡ ಬೇಕು" ಎಂದು ಸೃಷ್ಟಿ ಅಪ್ಪನ ಮುಂದೆ ಕೈಮುಗಿದು, ಕಣ್ಣೀರಿಟ್ಟು ಗೋಳಾಡಿದರೂ ಕಟುಕ ಪೋಷಕರ ಮನಸ್ಸು ಕರಗಲಿಲ್ಲ. ಮಗಳನ್ನು ಸಿನಿಮೀಯ ಶೈಲಿಯಲ್ಲಿ ಹೊಡೆದು, ಹಿಂಸಿಸಿ ವಾಹನಕ್ಕೆ ಹಾಕಿಕೊಂಡು ಹೋಗಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೊಲೀಸರ ನಡೆಗೆ ಆಕ್ರೋಶ

ಈ ಅಮಾನವೀಯ ಕೃತ್ಯದ ಬಳಿಕ ನೊಂದ ಮಣಿಕಂಠ ಮತ್ತು ಆತನ ಕುಟುಂಬಸ್ಥರು ದೂರು ನೀಡಲು ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಗೆ ಧಾವಿಸಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಸಂವಿಧಾನಬದ್ಧವಾಗಿ ಮದುವೆಯಾಗುವ ಹಕ್ಕು ಹೊಂದಿದ್ದರೂ, ಪೊಲೀಸರು ರಕ್ಷಣೆ ನೀಡದೆ ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಸೃಷ್ಟಿಯನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರೀತಿಸಿ ಮದುವೆಯಾದ ಮಗಳ ಸಂಸಾರಕ್ಕೆ ಹೆತ್ತವರೇ ವಿಲನ್ ಆಗಿರುವುದು ಈ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.