Asianet Suvarna News Asianet Suvarna News

ಬೆಂಗಳೂರು: 2 ವರ್ಷ ಬಳಿಕ ಮಾಣೆಕ್‌ ಶಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

ಮಾಣಿಕ್‌ ಶಾ ಮೈದಾನಕ್ಕೆ ಈ ಬಾರಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ, ಪ್ರೇಕ್ಷಕರ ಸಮ್ಮುಖದಲ್ಲಿ ಸಿಎಂರಿಂದ ಧ್ವಜಾರೋಹಣ

Independence Day Celebration in Manekshaw Parade Ground After Two Years in Bengaluru grg
Author
benga, First Published Aug 14, 2022, 8:35 AM IST

ಬೆಂಗಳೂರು(ಆ.14):  ಎರಡು ವರ್ಷದ ನಂತರ ಈ ಬಾರಿ ನಗರದ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕಳೆದ 2020 ಹಾಗೂ 2021ರ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಕೊರೋನಾ ಸೋಂಕಿ ಭೀತಿಯಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಸೋಂಕಿನ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯನ್ನು ಅದ್ಧೂರಿಯಿಂದ ಆಚರಿಸುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಪೂರ್ವಭಾವಿ ಸಿದ್ಧತೆ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್‌ ಷಾ ಪರೇಡ್‌ ಮೈದಾನ ಸಂಪೂರ್ಣವಾಗಿ ಸಜ್ಜಾಗಿದೆ. ಆಗಸ್ಟ್‌ 15ರ ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈದಾನದಕ್ಕೆ ಆಗಮಿಸಲಿದ್ದು, 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪೆರೇಡ್‌ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದರು.

ಇದೇ ಮೊದಲ ಬಾರಿಗೆ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಬಾಕ್ಸ್‌ನಲ್ಲಿ ನಿಂತು ಮೋದಿ ಭಾಷಣ?

ಈ ಬಾರಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದ್ದು, 2,500 ಶಾಲಾ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಇನ್ನು ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌ ಸೇರಿದಂತೆ ವಿವಿಧ ಇಲಾಖೆಯ 36 ತುಕಡಿಗಳಲ್ಲಿ 1,200 ಮಂದಿ ಪಥ ಸಂಚಲನ ನಡೆಸಿ ಕೊಡಲಿದ್ದಾರೆ. ಒಟ್ಟು 8 ಸಾವಿರ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಗಿದ್ದು, ನಾಲ್ಕರಿಂದ ಐದು ಸಾವಿರ ಗಣ್ಯರು, ಸಾರ್ವಜನಿಕರಿಗೆ ಸೇರಿದಂತೆ ಒಟ್ಟು 10 ಸಾವಿರ ಜನರು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅತಿಗಣ್ಯ, ಗಣ್ಯರು ಹಾಗೂ ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟಿಲ್‌, ಸಂಚಾರಿ ಪೊಲೀಸ್‌ ಜಂಟಿ ಆಯುಕ್ತರಾದ ರವಿಕಾಂತೆ ಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

1700 ಪೊಲೀಸರಿಂದ ಭದ್ರತೆ

ಬೆಂಗಳೂರು ನಗರದ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಮಾತನಾಡಿ, ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಮಾಣಿಕ್‌ ಷಾ ಮೈದಾನದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಕೈಗೊಳ್ಳಲಾಗಿದೆ. 9 ಡಿಸಿಪಿ, 10 ಕೆ.ಎಸ್‌.ಆರ್‌.ಪಿ ತುಕಡಿ, ಕಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 1,700 ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಕ್ಯಾಮರ್‌ ವ್ಯವಸ್ಥೆ, ನಾಲ್ಕು ಬ್ಯಾಗೇಜ್‌ ಸ್ಕ್ಯಾ‌ನರ್‌ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಪರ್ಸ್‌, ಮೊಬೈಲ್‌ಗೆ ಮಾತ್ರ ಅವಕಾಶ

ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿಯನ್ನು ಹೊಂದಿರಬೇಕು. ಪರ್ಸ್‌ ಮತ್ತು ಮೊಬೈಲ್‌ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರದಂತೆ ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಪೊಲೀಸರ ಭದ್ರತೆ ತಪಾಸಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಆಗಮಿಸುವವರಿಗೆ ಸೂಚನೆಗಳು

*ಆಗಸ್ಟ್‌ 15ರ ಬೆಳಗ್ಗೆ 8.30ರ ಒಳಗಾಗಿ ತಮ್ಮ ಆಸನದಲ್ಲಿ ಆಸೀನರಾಗಬೇಕು.
*ಮಣಿಪಾಲ್‌ ಸೆಂಟರ್‌ ಕಡೆಯಿಂದ ಕಬ್ಬನ್‌ ರಸ್ತೆಯಲ್ಲಿ ಆಗಮಿಸಿ ಗೇಟ್‌ 4ರ ಮೂಲಕ ಪ್ರವೇಶ
*ಯಾವುದೇ ಲಗೇಜ್‌ ಹಾಗೂ ಇತರೆ ವಸ್ತು ತರುವಂತಿಲ್ಲ

ನಿಷೇದಿಸಲಾದ ವಸ್ತುಗಳು

ಸಿಗರೆಟ್‌, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ತ್ರಿವರ್ಣ ಧ್ವಜ ಹೊರತುಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮದ್ಯದ ಬಾಟಲಿ, ಮಾದಕ ವಸ್ತು, ಶಸ್ತ್ರಾಸ್ತ್ರಗಳು, ಪಟಾಕಿ, ಸ್ಫೋಟಕ ವಸ್ತುಗಳು, ಬಣ್ಣದ ದ್ರವ, ನೀರಿನ ಬಾಟಲಿ ಹಾಗೂ ಕ್ಯಾನ್‌ಗಳು.

ಅಮೃತ ಮಹೋತ್ಸವ ಯಾತ್ರೆಗೆ ಸಾಥ್‌ ನೀಡಿದ ರಜನಿಕಾಂತ್: ಕೆಡೆಟ್‌ಗಳನ್ನು ಭೇಟಿಯಾದ ತಲೈವಾ

ಈ ರಸ್ತೆಯಲ್ಲಿ ನಾಳೆ ವಾಹನ ನಿಲುಗಡೆ ನಿಷೇಧ

*ಸೆಂಟ್ರಲ್‌ ಸ್ಟ್ರೀಟ್‌-ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣ ವರೆಗೆ
*ಕಬ್ಬನ್‌ ರಸ್ತೆ-ಸಿಟಿಓ ವೃತ್ತದಿಂದ ಕೆಆರ್‌ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ ವರೆಗೆ
*ಎಂಜಿ ರಸ್ತೆ- ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದ ವರೆಗೆ

ವಾಹನ ನಿಲುಗಡೆಗೆ ಎಲ್ಲೆಲ್ಲಿ ಅವಕಾಶ?

ಮಣಿಪಾಲ್‌ ಸೆಂಟರ್‌ನಿಂದ ಕಬ್ಬನ್‌ ರಸ್ತೆಯ ಜಂಕ್ಷನ್‌ವರೆಗೆ ಸಫೀನಾ ಫ್ಲಾಜಾದ ಬಳಿಯ ಕಾಮರಾಜ್‌ ರಸ್ತೆ ಹಾಗೂ ಆರ್ಮಿ ಶಾಲೆಯ ಮುಂಭಾಗದ ರಸ್ತೆಯ ಎರಡು ಬದಿ ನಿಲ್ಲಿಸಬಹುದು. ಶಿವಾಜಿ ನಗರ ಬಸ್‌ ನಿಲ್ದಾಣದ 1ನೇ ಮಹಡಿಯ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳನ್ನು ಕರೆತರುವ ವಾಹನಗಳಿಗೆ ಎಂಜಿ ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದ ವರೆಗೆ ವ್ಯವಸ್ಥೆ ಮಾಡಲಾಗಿದೆ.
 

Follow Us:
Download App:
  • android
  • ios