* ಸಾರ್ವಜನಿಕರು ಮೈಮರೆಯಕೂಡದು* ಜನರು ಮುನ್ನೆಚ್ಚರಿಕೆ ಅಳವಡಿಸಿಕೊಳ್ಳಬೇಕು* ರೋಗಿಗಳ ಕೊರತೆಯಿಂದ ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಸ್ಥಗಿತ 

ಕೊಪ್ಪಳ(ಜೂ.16): ಲಾಕ್‌ಡೌನ್‌ ಸಡಿಲಿಕೆಯ 2ನೇ ದಿನವಾದ ಮಂಗಳವಾರ ವ್ಯಾಪಾರ, ವಹಿವಾಟು ಜೋರಾಗಿಯೇ ಇರುವುದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಹಾಗೂ ವಿವಿಧೆಡೆಯೂ ಕಂಡು ಬಂದಿತು. ಬರೋಬ್ಬರಿ ಜನಸಂದಣಿ ಇದ್ದಿದ್ದರಿಂದ ಮಾರುಕಟ್ಟೆಯಲ್ಲಿ ಆಗಾಗ ಟ್ರಾಫಿಕ್‌ ಜಾಮ್‌ ಸಾಮಾನ್ಯವಾಗಿತ್ತು. ಆದರೆ, ಇದ್ಯಾವುದನ್ನು ನಿಯಂತ್ರಣ ಮಾಡದೆ ಪೊಲೀಸರು ಹಾಗೆ ಸುಮ್ಮನೇ ನೋಡುತ್ತಿದ್ದರು.

ಲಾಕ್‌ಡೌನ್‌ ಸಡಿಲಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಜಿಲ್ಲಾಡಳಿತವೂ ಅಷ್ಟೊಂದು ಓರೆಗೆ ಹಚ್ಚಿ ನೋಡುತ್ತಲೇ ಇಲ್ಲ. ಈಗಾಗಲೇ ಇದ್ದ ಅಗತ್ಯ ವಸ್ತುಗಳ ಖರೀದಿಯ ಸಮಯವಕಾಶವನ್ನು ಹೆಚ್ಚಳ ಮಾಡಿದೆಯೇ ಹೊರತು ಇಡೀ ಮಾರುಕಟ್ಟೆಯನ್ನು ತೆರೆಯುವುದಕ್ಕೆ ಅವಕಾಶ ನೀಡಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ತೆರೆದುಕೊಂಡಿವೆ. ತೆರೆಯದಿದ್ದರೂ ಹಿಂಬಾಗಿಲು, ಇಲ್ಲವೇ ಅರ್ಧ ಬಾಗಿಲು ತೆರೆದು ವ್ಯಾಪರ, ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆ ಸಹಜ ಸ್ಥಿತಿಯತ್ತ ಸಾಗುತ್ತಿದೆ.

ಬಟ್ಟೆ ವ್ಯಾಪಾರಕ್ಕೆ ಅವಕಾಶ ಇಲ್ಲವಾದರೂ ಭರ್ಜರಿಯಾಗಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಔಷಧಿ ಅಂಗಡಿ, ತರಕಾರಿ, ಕೃಷಿ ಉತ್ಪನ್ನಗಳು ಸೇರಿದಂತೆ ತೀರಾ ಅಗತ್ಯವಸ್ತುಗಳ ಖರೀದಿಯ ಸಮಯ ವಿಸ್ತರಣೆ ಮಡಲಾಗಿದೆ ಎನ್ನುವ ಬದಲಾಗಿ ಮಾರುಕಟ್ಟೆಯನ್ನೇ ಸಂಪೂರ್ಣ ತೆರೆಯಲಾಗಿದೆ ಎನ್ನುವ ಅರ್ಥದಲ್ಲಿಯೇ ಜಿಲ್ಲಾದ್ಯಂತ ವ್ಯಾಪಾರ, ವಹಿವಾಟು ನಡೆಯುತ್ತಿದೆ.

ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್‌ ತಂಗಡಗಿ

ಕೊಪ್ಪಳ ನಗರದಲ್ಲಿ ಭರ್ಜರಿ ವ್ಯಾಪಾರವಾಗುತ್ತಿರುವುದು ಮತ್ತು ಜನದಟ್ಟಣೆ ಇರುವುದು ಕಂಡು ಬಂದರೆ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿಯೂ ವಹಿವಾಟು ಜೋರು ಇತ್ತು. ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಸೇರಿದಂತೆ ಮೊದಲಾದ ಕಡೆಯೂ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿರುವುದನ್ನು ನೋಡಿದರೆ ಸಂಪೂರ್ಣ ಲಾಕ್‌ಡೌನ್‌ ತೆರೆದ ಲಕ್ಷಣ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಕಂಡುಬರುತ್ತಿದೆ.

ಆತಂಕವೂ ದೂರ:

ಈ ನಡುವೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಶೇ. 5ಕ್ಕಿಂತಲೂ ಕಡಿಮೆಯಾಗುತ್ತಿರುವುದರಿಂದ ಆತಂಕ ದೂರವಾಗಿದೆ. ಪಾಸಿಟಿವ್‌ ಪ್ರಕರಣದಲ್ಲಿಯೂ ವೈರಸ್‌ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ, ಪಾಸಿಟಿವ್‌ ಬಂದ ಬಹುತೇಕರು ಮನೆಯಲ್ಲಿಯೇ ಇದ್ದು, ಉಪಚಾರ ಪಡೆಯುತ್ತಿದ್ದಾರೆ. ಹೀಗಾಗಿ, ಜನರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ. ಹೀಗಾಗಿ, ಜನರು ಸಹ ಮನ ಬಿಚ್ಚಿ ಸುತ್ತಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿಯೂ ಬೆಡ್‌ಗಳು ಖಾಲಿಯಾಗುತ್ತಲೇ ಇವೆ. ಈಗಾಗಲೇ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯನ್ನು ರೋಗಿಗಳ ಕೊರತೆಯಿಂದ ಸ್ಥಗಿತ ಮಾಡಲಾಯಿತು. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಯಾರು ಇಲ್ಲದಂತೆ ಆಗಿದೆ.

ತಪ್ಪಿದ ಎಚ್ಚರ:

ಇದೆಲ್ಲವನ್ನು ನೋಡಿ ಜನರು ಓಡಾಟ ಹೆಚ್ಚಾಗುತ್ತಿದೆಯಾದರೂ ಸಮಸ್ಯೆ ಎಚ್ಚರ ತಪ್ಪಿದಿರಲಿ ಎನ್ನುವ ವೈದ್ಯರ ಮಾತು ಯಾರು ಕೇಳುತ್ತಲೇ ಇಲ್ಲ. ಜನರು ಮನೆಯಿಂದ ಆಚೆ ಬರುವ ಮೊದಲು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಮಾಡುವುದು ಸೇರಿದಂತೆ ಮೊದಲಾದ ಮುನ್ನೆಚ್ಚರಿಕೆಯನ್ನು ಅಳವಡಿಸಿಕೊಳ್ಳಬೇಕು. ಇದಕ್ಕಿಂದ ಮಿಗಿಲಾಗಿ ಸಾಮಾಜಿಕ ಆಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಹತೋಟಿಗೆ ಬಂದಿದೆ. ಈಗ ಪಾಸಿಟಿವಿಟ್‌ ದರ ಶೇ. 10 ಕ್ಕಿಂತಲೂ ಕಡಿಮೆಯೇ ಇದೆ. ಹಾಗಂತ ಸಾರ್ವಜನಿಕರು ಮೈಮರೆಯಕೂಡದು. ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಡಿಎಚ್‌ಒ ಡಾ. ಲಿಂಗರಾಜು ತಿಳಿಸಿದ್ದಾರೆ.