ಅಕ್ರಮವಾಗಿ ಲಾರಿಗಳಲ್ಲಿ 120 ಕಾರ್ಮಿಕರ ಸಾಗಾಟ ಯತ್ನ..!
ಅಗತ್ಯ ವಸ್ತು ಸಾಗಾಟದ ಲಾರಿ ಎಂದು ಸ್ಟಿಕರ್ ಅಳವಡಿಸಿ ಮಂಗಳೂರಿನಿಂದ ಉತ್ತರಭಾರತ ಮೂಲದ 120 ಮಂದಿ ಕಾರ್ಮಿಕರನ್ನು ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಹೊರಟಿದ್ದ ಹರಿಯಾಣ ನೋಂದಣಿಯ ಎರಡು ಲಾರಿಗಳಿಗೆ ಗುಂಡ್ಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆಯೊಡ್ಡಿರುವ ಘಟನೆ ಶುಕ್ರವಾರ ನಡೆದಿದೆ.
ಉಪ್ಪಿನಂಗಡಿ(ಮೇ.09): ಅಗತ್ಯ ವಸ್ತು ಸಾಗಾಟದ ಲಾರಿ ಎಂದು ಸ್ಟಿಕರ್ ಅಳವಡಿಸಿ ಮಂಗಳೂರಿನಿಂದ ಉತ್ತರಭಾರತ ಮೂಲದ 120 ಮಂದಿ ಕಾರ್ಮಿಕರನ್ನು ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಹೊರಟಿದ್ದ ಹರಿಯಾಣ ನೋಂದಣಿಯ ಎರಡು ಲಾರಿಗಳಿಗೆ ಗುಂಡ್ಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆಯೊಡ್ಡಿರುವ ಘಟನೆ ಶುಕ್ರವಾರ ನಡೆದಿದೆ.
ಕಾರ್ಮಿಕರು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರಾದರೂ ಎ.ಸಿ. ಮನವೊಲಿಕೆ ಬಳಿಕ ಎಲ್ಲರನ್ನೂ ಮೂರು ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಕಾರ್ಮಿಕರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ವದಂತಿ ನಂಬಿ ರೈಲು ನಿಲ್ದಾಣಕ್ಕೆ ಬಂದ್ರು ಸಾವಿರಾರು ಮಂದಿ..!
ಸುಮಾರು 120 ಮಂದಿ ಕಾರ್ಮಿಕರನ್ನು ಹರಿಯಾಣ ರಾಜ್ಯದ ನೋಂದಣಿಯ ಎರಡು ಲಾರಿಗಳಲ್ಲಿ ತುಂಬಿಸಿಕೊಂಡು ಕರೆತರಲಾಗುತ್ತಿತ್ತು. ಎರಡೂ ಲಾರಿಗಳಿಗೆ ಮೇಲ್ಭಾಗದಲ್ಲಿ ಟರ್ಪಾಲ್ ಹೊದಿಸಲಾಗಿದ್ದು, ಅಗತ್ಯ ವಸ್ತುಗಳ ಸಾಗಾಟದ ಸ್ಟಿಕ್ಕರ್ ಅಂಟಿಸಲಾಗಿತ್ತು. ಮೇ 8ರಂದು ವೇಳೆಗೆ ಗುಂಡ್ಯ ಚೆಕ್ಪೋಸ್ಟ್ಗೆ ಆಗಮಿಸಿದ ಲಾರಿಗಳನ್ನು ಪೊಲೀಸರು ತಪಾಸಣೆ ನಡೆಸಿದ ವೇಳೆ ಜನರನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಲಾರಿಗಳ ಸಂಚಾರಕ್ಕೆ ತಡೆಯೊಡ್ಡಿದ ಪೊಲೀಸರು ಘಟನೆ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಬಳಿಕ 120 ಕಾರ್ಮಿಕರನ್ನು ಗುಂಡ್ಯ ಪಿಲಿಕಜೆ ಶಾಲೆಗೆ ಕರೆದೊಯ್ಯಲಾಯಿತು.
ಊರಿಗೆ ಕಳುಹಿಸಲು ಪಟ್ಟು: ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಅವರು ಆಗಮಿಸಿದರು. ಈ ವೇಳೆ ಮಾತನಾಡಿದ ಉತ್ತರ ಭಾರತ ಮೂಲದ ಕಾರ್ಮಿಕರು, ಮಂಗಳೂರಿಗೆ ಬಟ್ಟೆವ್ಯಾಪಾರಕ್ಕೆಂದು ನಾವು ಬಂದಿದ್ದೇವೆ. ಲಾಕ್ಡೌನ್ನಿಂದಾಗಿ ಕಳೆದ ಒಂದೂವರೇ ತಿಂಗಳಿನಿಂದ ಕೆಲಸವೂ ಇಲ್ಲದೇ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರು. ಆದರೆ ಇದಕ್ಕೆ ಸಹಾಯಕ ಕಮೀಷನರ್ ಒಪ್ಪಲಿಲ್ಲ.
12ರಂದು ಕಣ್ಣೂರಿಗೆ, 14ರಂದು ಮಂಗಳೂರಿಗೆ ಭಾರತೀಯರ ಏರ್ಲಿಫ್ಟ್
ಮತ್ತೆ ಮಂಗಳೂರಿಗೆ ಶಿಫ್ಟ್: ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡ ಬಳಿಕ ನಿಮ್ಮೂರಿಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ತನಕ ಮಂಗಳೂರಿನಲ್ಲಿ ತಂಗಲು ಹಾಗೂ ಊಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾರ್ಮಿಕರಿಗೆ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ರವರು ಭರವಸೆ ನೀಡಿದರು. ನಂತರ ಕಾರ್ಮಿಕರೆಲ್ಲರನ್ನೂ ಮೂರು ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಲಾಗಿದೆ. ಯಾವುದೇ ಅನುಮತಿ ಇಲ್ಲದೇ ಕಾರ್ಮಿಕರನ್ನು ತುಂಬಿಸಿಕೊಂಡು ಸಾಗಾಟ ಮಾಡಿದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆಯೂ ಸಹಾಯಕ ಆಯುಕ್ತರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.