Asianet Suvarna News Asianet Suvarna News

ವದಂತಿ ನಂಬಿ ರೈಲು ನಿಲ್ದಾಣಕ್ಕೆ ಬಂದ್ರು ಸಾವಿರಾರು ಮಂದಿ..!

ತಮ್ಮೂರಿಗೆ ತೆರಳಲು ರೈಲು ಸಂಚಾರ ಆರಂಭವಾಗಲಿದೆ ಎಂಬ ವದಂತಿ ನಂಬಿ ಉತ್ತರ ಭಾರತ ಮೂಲದ ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಬೆಳಗ್ಗೆ ನಗರದ ಸೆಂಟ್ರಲ್‌ ರೈಲು ನಿಲ್ದಾಣದ ಎದುರು ಜಮಾಯಿಸಿ ಆತಂಕ ಸೃಷ್ಟಿಯಾಗಿತ್ತು.

 

Thousands of people gather in railway station believing a fake information
Author
Bangalore, First Published May 9, 2020, 7:41 AM IST

ಮಂಗಳೂರು(ಮೇ.09): ತಮ್ಮೂರಿಗೆ ತೆರಳಲು ರೈಲು ಸಂಚಾರ ಆರಂಭವಾಗಲಿದೆ ಎಂಬ ವದಂತಿ ನಂಬಿ ಉತ್ತರ ಭಾರತ ಮೂಲದ ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಬೆಳಗ್ಗೆ ನಗರದ ಸೆಂಟ್ರಲ್‌ ರೈಲು ನಿಲ್ದಾಣದ ಎದುರು ಜಮಾಯಿಸಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೆ ಅಧಿಕಾರಿಗಳ ಸಕಾಲಿಕ ಮಧ್ಯ ಪ್ರವೇಶದಿಂದ ಕಾರ್ಮಿಕರು ತಾವಿದ್ದ ಪ್ರದೇಶಗಳಿಗೆ ಹಿಂತಿರುಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಉತ್ತರ ಭಾರತ ಮೂಲದ ಸಾವಿರಾರು ಮಂದಿ ಇನ್ನೂ ಊರಿಗೆ ಹಿಂತಿರುಗಲಾಗದೆ ಮಂಗಳೂರಿನಲ್ಲಿ ಸಿಲುಕಿಕೊಂಡಿದ್ದು, ರೈಲು ಸಂಚಾರ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ ರೈಲು ಸಂಚಾರ ಶುಕ್ರವಾರದಿಂದ ಆರಂಭವಾಗಲಿದೆ ಎಂಬ ವದಂತಿ ಹರಡಿದ್ದೇ ತಡ ತಂಡೋಪತಂಡವಾಗಿ ರೈಲು ನಿಲ್ದಾಣಕ್ಕೆ ತೆರಳಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ನಡೆದುಕೊಂಡೇ ಬಂದರು:

ಜಾರ್ಖಂಡ್‌ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಅಸ್ಸಾಂ, ಬಿಹಾರ ಮೂಲದ ಕಾರ್ಮಿಕರು ಇವರಾಗಿದ್ದು, ಲಾಕ್‌ಡೌನ್‌ನಿಂದ ಸಾರ್ವಜನಿಕ ಸಾರಿಗೆ ಇಲ್ಲದಿದ್ದರೂ ಮಂಗಳೂರು ಹೊರವಲಯಗಳಿಂದ ಬ್ಯಾಗ್‌ ಸಮೇತ ಹಲವು ಕಿ.ಮೀ. ನಡೆದುಕೊಂಡೇ ಬಂದಿದ್ದರು. ರೈಲು ನಿಲ್ದಾಣಕ್ಕೆ ಬಂದಾಗ ರೈಲು ಇಲ್ಲ ಆರಂಭವಾಗಿಲ್ಲ ಎಂಬ ಮಾಹಿತಿ ಲಭಿಸಿತ್ತು. ಇದರಿಂದ ಹತಾಶರಾದ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಪೊಲೀಸರು- ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಥಳದಲ್ಲೇ ಕುಳಿತು ಧರಣಿ ನಡೆಸಿದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲಿನ ವ್ಯವಸ್ಥೆ ಆಗುವವರೆಗೂ ರೈಲು ನಿಲ್ದಾಣ ಬಿಟ್ಟು ತೆರಳುವುದಿಲ್ಲ ಎಂದು ಒಂದು ಹಂತದಲ್ಲಿ ಕಾರ್ಮಿಕರು ಹತಾಶೆಯಿಂದ ನುಡಿದರು. ಸ್ಥಳಕ್ಕೆ ಆಗಮಿಸಿದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್‌ ಮೋಹನ್‌ ಹಾಗೂ ರೈಲ್ವೆ ಅಧಿಕಾರಿಗಳು, ರಾಜ್ಯ ಸರ್ಕಾರ ಇತರ ರಾಜ್ಯ ಸರ್ಕಾರಗಳ ಜತೆ ಮಾತುಕತೆ ನಡೆಸಿ ನಿಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆ ಎಂದು ಕಾರ್ಮಿಕರ ಮನವೊಲಿಸಲು ಮುಂದಾದರೂ ಮೊದಲೇ ಹತಾಶರಾಗಿದ್ದ ಕಾರ್ಮಿಕರು ಪಟ್ಟು ಸಡಿಲಿಸಲಿಲ್ಲ.

12ರಂದು ಕಣ್ಣೂರಿಗೆ, 14ರಂದು ಮಂಗಳೂರಿಗೆ ಭಾರತೀಯರ ಏರ್‌ಲಿಫ್ಟ್

ಬಳಿಕ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ, 3 ದಿನದೊಳಗೆ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಸಂಯಮ ಕಾಯ್ದುಕೊಂಡು ವಾಸ್ತವ್ಯ ಇರುವಲ್ಲಿಗೆ ತೆರಳುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಕಾರ್ಮಿಕರನ್ನು ಕೆಎಸ್ಸಾರ್ಟಿಸಿ ಬಸ್‌ ಮೂಲಕ ಅವರಿದ್ದ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.

Follow Us:
Download App:
  • android
  • ios