ಕಾರಿನಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್
- ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್
- ಮಾಲು ಸಮೇತ ಬಂಧಿಸಿರುವ ಅಬಕಾರಿ ಅಧಿಕಾರಿಗಳು
- ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿರುವ ವಸಂತಕುಮಾರ್ ಬಂಧನ
ಹುಣಸೂರು (ಜೂ.01): ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಮೇತ ಬಂಧಿಸಿರುವ ಅಬಕಾರಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿರುವ ತಾಲೂಕಿನ ಕರೀಮುದ್ದನಹಳ್ಳಿಯ ಉಯಿಲೇಗೌಡರ ಪುತ್ರ ವಸಂತಕುಮಾರ್ ಬಂಧಿತ ಆರೋಪಿ. ಈತನಿಂತ 40 ಲೀ.ನಷ್ಟುಒರಿಜಿನಲ್ ಚಾಯ್ಸ್ ಟೆಟ್ರಾಪೌಚ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರ ಮಧ್ಯಾಹ್ನ ಗದ್ದಿಗೆ ಮುಖ್ಯರಸ್ತೆಯ ಮೂಡ್ಲಾಪುರದಲ್ಲಿ ತನ್ನ ಕಾರಿನಲ್ಲಿ ಮದ್ಯದ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಗ್ರಾಮಾಂತರ ಎಸ್ಪಿ ಡಾ. ಮಹಾದೇವಿಬಾಯಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿ, ಆರೋಪಿಯನ್ನು ಮಾಲು ಸಮೇತ ಬಂಧಿಸಿ ಕೊರೋನಾ ಪರೀಕ್ಷೆಗೊಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.
ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ ..
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಧರ್ಮರಾಜು, ವಿಚಕ್ಷಣಾದಳದ ನಿರೀಕ್ಷಕ ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ್, ಲೋಕೇಶ್, ಬಾಷಾ, ಗೋಪಾಲ, ಚಾಲಕ ಕೀರ್ತಿಕುಮಾರ್ ಭಾಗವಹಿಸಿದ್ದರು.
ಕಾಂಗ್ರೆಸ್ನಿಂದ ಅಮಾನತು:
ಕಾನೂನುಬಾಹಿರ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿರುವ ವಸಂತ್ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯುಮಾರ್ ಅವರ ಶಿಫಾರಸ್ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.