Asianet Suvarna News Asianet Suvarna News

ಸ್ಮಶಾನ ಭೂಮಿ ಖರೀದಿ ತಡವಾದ್ರೆ ದೇಣಿಗೆ ಸಂಗ್ರಹಿಸಿ ನೀಡ್ತೇವೆ: ಈಶ್ವರ ಖಂಡ್ರೆ

ಸ್ಮಶಾನ ಭೂಮಿ ಅಲಭ್ಯತೆಯಿಂದಾಗಿ ಧನ್ನೂರ (ಎಚ್‌) ಗ್ರಾಮದ ಶೋಷಿತ ಪರಿಶಿಷ್ಟಜಾತಿಯವರು ಮನೆಯಂಗಳದಲ್ಲಿಯೇ ಶವ ಸಂಸ್ಕಾರ ಮಾಡುವಂಥ ದುಸ್ಥಿತಿ ಬಂದಿದೆ ಎಂಬ ಕುರಿತು ಕನ್ನಡಪ್ರಭ ಸೆ. 17ರಂದು ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.

If Buy of Cemetery Land Delayed, We Will Collect Donations says Eshwar Khandre grg
Author
First Published Sep 20, 2022, 10:08 PM IST

ಬೀದರ್‌(ಸೆ.20): ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರು (ಎಚ್‌) ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಸ್ಮಶಾನ ಭೂಮಿಯನ್ನು 24 ಗಂಟೆಗಳಲ್ಲಿ ಜಿಲ್ಲಾಧಿಕಾರಿ ಅವರು ಭೂಮಿ ಖರೀದಿಗೆ ಪ್ರಕ್ರಿಯೆ ಆರಂಭಿಸದಿದ್ದಲ್ಲಿ ಸರ್ಕಾರದ ಬಳಿ ಹಣದ ಕೊರತೆಯಿದೆ ಎಂದು ದೇಣಿಗೆ ಸಂಗ್ರಹಿಸಿ ನಾವೇ ಕೊಡಿಸಲು ಮುಂದಾಗುತ್ತೇವೆ ಎಂದು ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ. ಸ್ಮಶಾನ ಭೂಮಿ ಅಲಭ್ಯತೆಯಿಂದಾಗಿ ಧನ್ನೂರ (ಎಚ್‌) ಗ್ರಾಮದ ಶೋಷಿತ ಪರಿಶಿಷ್ಟಜಾತಿಯವರು ಮನೆಯಂಗಳದಲ್ಲಿಯೇ ಶವ ಸಂಸ್ಕಾರ ಮಾಡುವಂಥ ದುಸ್ಥಿತಿ ಬಂದಿದೆ ಎಂಬ ಕುರಿತು ಕನ್ನಡಪ್ರಭ ಸೆ. 17ರಂದು ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು.

ಭಾಲ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧನ್ನೂರ್‌ (ಎಚ್‌)ನ ಈ ಸಮಸ್ಯೆ ಕುರಿತಂತೆ ಈಶ್ವರ ಖಂಡ್ರೆ ಅವರು ಈ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುವುದು ಕಳೆದ ಕೆಲ ತಿಂಗಳ ಹಿಂದೆ ತಮಗೆ ತಿಳಿದ ಕೂಡಲೇ, ತಹಸೀಲ್ದಾರರಿಗೆ ಸರ್ಕಾರಿ ಭೂಮಿ ಗುರುತಿಸಲು ತಾವು ಸೂಚಿಸಿ, ಸ್ಥಳೀಯವಾಗಿ ಮುಖಂಡರಿಗೆ ತಿಳಿಸಿ, ರೈತರ ಮನವೊಲಿಸಿ ಕಳೆದ 2022ರ ಮಾ.8ರಂದು ಬಸವರಾಜ್‌ ಎಂಬುವವರ 2 ಎಕರೆ 37 ಗುಂಟೆ ಪಟ್ಟಾಭೂಮಿಯನ್ನು ಸ್ಮಶಾನಕ್ಕಾಗಿ ಮಾರಾಟ ಮಾಡಲು ಸಮ್ಮತಿಸಲು ಸಹಕರಿಸಿದ್ದರೂ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದಿದ್ದಾರೆ.

ಕುಲ ಕಸಬು ಕಸಿದ ವಚನ ಭ್ರಷ್ಟ ಸರ್ಕಾರ: ಪ್ರಣವಾನಂದ ಶ್ರೀ

ಸರ್ಕಾರಕ್ಕೆ ಬಡ ಜನರ, ದಲಿತರ, ಗ್ರಾಮಸ್ಥರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈಶ್ವರ ಖಂಡ್ರೆ ಕೂಡಲೇ ಜಿಲ್ಲಾಧಿಕಾರಿ ಈ ಭೂಮಿ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ಬಳಿ ಸ್ಮಶಾನ ಭೂಮಿ ಖರೀದಿಸಲೂ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ, ಶಾಸಕರಾಗಿ ತಾವು ಅಧಿವೇಶನದ ಬಳಿಕ ವೈಯಕ್ತಿಕ ದೇಣಿಗೆ ನೀಡಿ, ಜನರಿಂದ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಸಿ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಮಾನವೀಯತೆ ಇಲ್ಲವಾಗಿದೆ. ಜನರ ಸಂಕಷ್ಟಅರಿತು ಕಾಲ ಕಾಲಕ್ಕೆ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ದೊರಕಿಸಲು ನಾನು ಸತತ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಸರ್ಕಾರ ಸ್ಪಂದಿಸಬೇಕು ಅಷ್ಟೇ ಎಂದು ಅವರು ತಿಳಿಸಿದ್ದಾರೆ.
 

Follow Us:
Download App:
  • android
  • ios