ರಸ್ತೆ ಬಂದ್‌ ಮಾಡಿ ಪ್ರಾರ್ಥನೆಗೆ ಇಲ್ಲ ಅವಕಾಶ  ಟ್ರಾಫಿಕ್‌ ಸಿಗ್ನಲ್‌ನಲ್ಲಿ ಚಾಪೆ ಹಾಸಿ ಪ್ರಾರ್ಥಿಸುವಂತಿಲ್ಲ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಇಲ್ಲ ಅಡ್ಡಿ

ಬೆಂಗಳೂರು (ಜು.7): ಬಕ್ರೀದ್‌ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ರಸ್ತೆಗಳನ್ನು ಬಂದ್‌ ಮಾಡಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುವಂತೆ ಹಬ್ಬದ ಪ್ರಾರ್ಥನೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

Add Asianetnews Kannada as a Preferred SourcegooglePreferred

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬದ ಪ್ರಾರ್ಥನೆಗೆ ರಸ್ತೆ ಬಂದ್‌ ಮಾಡುವುದು. ಟ್ರಾಫಿಕ್‌ ಸಿಗ್ನಲ್‌ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಸಂಚಾರ ದಟ್ಟಣೆಯಾಗದಂತೆ ತಡೆಯುವುದು ಪೊಲೀಸ್‌ ಇಲಾಖೆ ಕರ್ತವ್ಯ. ಅವರು ಬಿಬಿಎಂಪಿಯಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಹಕಾರ ಕೇಳಿದರೂ ಸ್ಪಂದಿಸುತ್ತೇವೆ. ಅವರು ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

Bengaluru: ಹೆಬ್ಬಾಳ ವಾಹನ ಸಂಚಾರದಲ್ಲಿ ಭಾರಿ ಬದಲಾವಣೆ

ಚಾಮರಾಜಪೇಟೆಯ ಈದ್ಗಾ ಮೈದಾನ ಯಾರ ಸ್ವತ್ತು ಎನ್ನುವ ವಿವಾದದ ನಡುವೆಯೇ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ. ಅಲ್ಲಿ ನಮಾಜ್‌ ಮಾಡಲು ಸುಪ್ರೀಂ ಕೋರ್ಚ್‌ ಅವಕಾಶ ನೀಡಿದೆ. ಹೀಗಾಗಿ ಮುಸ್ಲಿಮ್‌ ಸಮುದಾಯದ ಹಬ್ಬದ ಪ್ರಾರ್ಥನೆಗೆ ಅಡ್ಡಿಯಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅವರಿಗೆ ಅನುಮತಿ ಕೊಡಬೇಕೋ, ಬೇಡವೋ ಎಂಬ ಪ್ರಶ್ನೆ ಬಿಬಿಎಂಪಿಯ ಮುಂದಿಲ್ಲ ಎಂದು ತಿಳಿಸಿದರು.

ಈದ್ಗಾ ಮೈದಾನದ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತರು, ಎಆರ್‌ಒ ನೋಡಿಕೊಳ್ಳುತ್ತಾರೆ ಎಂದ ಅವರು, ವಿವಾದಿತ ಈದ್ಗಾ ಮೈದಾನದಲ್ಲಿ ಕುರಿ ಮಾರಾಟಕ್ಕೆ ಸಂಬಂಧಿಸಿದಂತೆ ಯಾರು ಬಿಬಿಎಂಪಿಯ ಅನುಮತಿ ಪಡೆದಿಲ್ಲ. ಶುಲ್ಕವನ್ನು ಕೂಡ ವಿಧಿಸಿಲ್ಲ. ಖಾಸಗಿ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲು ಪೊಲೀಸರ ಅನುಮತಿ ಪಡೆಯಬೇಕು. ಜಾರುವಾರುಗಳ ಮಾರಾಟದಿಂದ ಮೈದಾನದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಯನ್ನು ಪಾಲಿಕೆ ಮಾಡುವುದಿಲ್ಲ. ಹಾಗೆಯೇ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುವಂತೆ ರಸ್ತೆ, ಪುಟ್‌ಪಾತ್‌ಗಳಲ್ಲಿ ಕುರಿ-ಮೇಕೆಗಳ ಮಾರಾಟಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಬೆಂಗಳೂರು: ವರ್ಷಾಂತ್ಯದೊಳಗೆ ವೈಟ್‌ಫೀಲ್ಡ್‌ಗೆ ಮೆಟ್ರೋ

ಭಿಕ್ಷಾಟನೆ ಮಾಡುತ್ತಿದ್ದ 720 ಮಂದಿಯ ರಕ್ಷಣೆ: ನಗರದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ವಿಚಾರದ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಬಿಬಿಎಂಪಿಯಿಂದ ನಗರದ ಹಲವೆಡೆಯಿಂದ 720 ಜನರನ್ನು ಭಿಕ್ಷಾಟನೆಯಿಂದ ರಕ್ಷಣೆ ಮಾಡಲಾಗಿದೆ. ಹಲವು ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ವಿಶೇಷ ಕಾರ್ಯಾಚರಣೆ ಮಾಡಿ 720 ಜನರನ್ನು ರಕ್ಷಿಸಲಾಗಿದೆ. ನಗರದಲ್ಲಿ ಭಿಕ್ಷಾಟನೆ ಜಾಲ ಭೇದಿಸಲು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತುಷಾರ್‌ ತಿಳಿಸಿದರು.