ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಸಂಚಾರ ವಿಭಾಗದ ಪೊಲೀಸರು ಆ ಪ್ರದೇಶ ವ್ಯಾಪ್ತಿ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ್ದಾರೆ. 

ಬೆಂಗಳೂರು (ಜು.07): ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಸಂಚಾರ ವಿಭಾಗದ ಪೊಲೀಸರು ಆ ಪ್ರದೇಶ ವ್ಯಾಪ್ತಿ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ್ದಾರೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆ ನಿವಾರಣೆ ಸಂಬಂಧ ಮಾಡಿರುವ ಅಧ್ಯಯನ ವರದಿ ಆಧರಿಸಿ ಬಿಬಿಎಂಪಿ, ಬಿಎಂಆರ್‌ಸಿಎಲ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಹಭಾಗಿತ್ವದಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿರುವ ವಾಹನ ಹರಿವಿನ ಅಧ್ಯಯನ, ದತ್ತಾಂಶ ಹಾಗೂ ವಾಹನ ದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸಿ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಲಾಗಿದೆ. ಈ ವ್ಯವಸ್ಥೆ ಬದಲಾವಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ ಬಿ.ಆರ್‌.ರವಿಕಾಂತೇಗೌಡ ಮನವಿ ಮಾಡಿದ್ದಾರೆ. ಈ ಜಂಕ್ಷನ್‌ನಲ್ಲಿ ಸಂಚಾರ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಸೂಚನಾ ಫಲಕಗಳನ್ನು ಕೂಡ ಹಾಕಲಾಗುತ್ತದೆ. ಈ ಹೊಸ ವ್ಯವಸ್ಥೆ ಶುಕ್ರವಾರ ಬೆಳಗ್ಗೆ 6ಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

Bengaluru: ಪ್ರಧಾನಿ ಗಡುವು ಬೆನ್ನಲ್ಲೇ ಸಂಚಾರ ಸಮಸ್ಯೆ ಬಗ್ಗೆ ಪ್ರವೀಣ್ ಸೂದ್ ಸಭೆ

ಸಂಚಾರ ಬದಲಾವಣೆ ಹೀಗಿದೆ
* ಯಲಹಂಕ, ಕೊಡಿಗೇಹಳ್ಳಿ, ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್‌ ರಸ್ತೆಯ ಮೂಲಕ ನಗರಕ್ಕೆ ಹೋಗುವ ವಾಹನಗಳು ಹೆಬ್ಬಾಳ ಫ್ಲೈಓವರ್‌ಗೆ ನೇರವಾಗಿ ಪ್ರವೇಶಿಸುವಂತಿಲ್ಲ. ಹೆಬ್ಬಾಳ ಸರ್ಕಲ್‌ನಲ್ಲಿರುವ ಲೂಪ್‌ ರ್ಯಾಂಪ್‌ ಬಳಸಿ ನಗರಕ್ಕೆ ಬರಬೇಕು.

* ವಿಮಾನ ನಿಲ್ದಾಣದ ಎಲಿವೇಟೆಡ್‌ ಕಾರಿಡಾರ್‌ನಿಂದ ಬೆಂಗಳೂರು ಕಡೆಗೆ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್‌ನಲ್ಲಿ ಬಸ್‌ ಪ್ರಯಾಣಿಕರನ್ನು ನಿಗದಿಪಡಿಸಿದ ಬಸ್‌ ವೇನಲ್ಲಿ ಲೂಪ್‌ ರ್ಯಾಂಪ್‌ಗಿಂತ ಮುಂಚಿತವಾಗಿ ಹತ್ತಿಸಿಕೊಳ್ಳಬೇಕು.

* ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಿಂದ ನಗರಕ್ಕೆ ಚಲಿಸುವ ವಾಹನಗಳು ಮೊದಲಿನಿಂದ ಹೆಬ್ಬಾಳ ಫ್ಲೇ ಓವರ್‌ ಮೂಲಕ ನಗರ ಪ್ರವೇಶಿಸಬೇಕು.

* ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಮೂಲಕ ಕೆಂಪಾಪುರಕ್ಕೆ ಹೋಗುವವರು ವಿದ್ಯಾಶಿಲ್ಪ, ಯಲಹಂಕ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆ ಬಳಸಬೇಕು.

* ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಿಂದ ಕೆ.ಆರ್‌.ಪುರ, ತುಮಕೂರು ಕಡೆಗೆ ಚಲಿಸುವವರು ಮೊದಲಿನಂತೆ ಸವೀರ್ಸ್‌ ರಸ್ತೆ ಮೂಲಕ ಸಾಗಬೇಕು.

* ಹೆಬ್ಬಾಳ ಜಂಕ್ಷನ್‌ನಲ್ಲಿ ಬಸ್‌ಗಳ ನಿಲುಗಡೆ ಸ್ಥಳ ಬದಲಾವಣೆ, ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲತೆ ಅಡ್ಡಾದಿಡ್ಡಿ ಬಸ್‌ ನಿಲುಗಡೆಯ ನಿಷೇಧ ಮುಂತಾದ ಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ಬರಲಿದೆ.