ಕುಂದಗೋಳದ ಹೊರವಲಯದಲ್ಲಿ, ಕೆಎಸ್‌ಆರ್‌ಟಿಸಿ ಬಸ್ಸಿನ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ 17 ವರ್ಷದ ಐಟಿಐ ವಿದ್ಯಾರ್ಥಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯ ಶಿರಚ್ಛೇದವಾಗಿ, ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಧಾರವಾಡ (ಜು.01): ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಿಟಕಿಯಿಂದ ದೇಹದ ಭಾಗಗಳನ್ನು ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೀಕರ ಅಪಘಾತವೇ ಸಾಕ್ಷಿಯಾಗಿದೆ. ಚಲಿಸುವ ಬಸ್‌ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದ ವಿದ್ಯಾರ್ಥಿಯೊಬ್ಬ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ತಲೆಯ ರುಂಡವೇ ಕಟ್ ಆಗಿ ಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಮೃತಪಟ್ಟ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕಿರೇಶ್ (17) ಎಂದು ಗುರುತಿಸಲಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಇಂದು ಹುಬ್ಬಳ್ಳಿಯಿಂದ ತನ್ನ ಗ್ರಾಮವಾದ ಶಿರೂರಿಗೆ ತೆರಳಲು ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಹತ್ತಿದ್ದನು.

ಅಪಘಾತ ಸಂಭವಿಸಿದ್ದು ಹೇಗೆ?

ಪಕ್ಕಿರೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದನು. ಬಸ್ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿದ್ದಾಗ, ಗುಟ್ಕಾ ಉಗುಳುವ ಉದ್ದೇಶದಿಂದ ಆತ ಕಿಟಕಿಯ ಹೊರಗೆ ತಲೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಸ್ಸಿನ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಕಿಟಕಿಯಿಂದ ಹೊರಗಿದ್ದ ಪಕ್ಕಿರೇಶ್ ಅವರ ತಲೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ಶಿರವು ದೇಹದಿಂದ ಬೇರ್ಪಟ್ಟಿದ್ದು, ರಸ್ತೆಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು. ಘಟನೆಯ ತೀವ್ರತೆಗೆ ಬಸ್ ನಿಲ್ದಾಣದ ಬಳಿ ನೆರೆದಿದ್ದ ಜನರು ದಿಕ್ಕೆಟ್ಟು ಹೋಗಿದ್ದಾರೆ.

ಪೊಲೀಸ್ ಭೇಟಿ ಮತ್ತು ತನಿಖೆ:

ವಿಷಯ ತಿಳಿಯುತ್ತಿದ್ದಂತೆಯೇ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಪ್ರಯಾಣದ ವೇಳೆ ಕಿಟಕಿಯಿಂದ ಕೈ ಅಥವಾ ತಲೆಯನ್ನು ಹೊರಹಾಕುವುದು ಮೃತ್ಯುವನ್ನು ಆಹ್ವಾನಿಸಿದಂತೆ. ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಬಸ್ ಅಥವಾ ರೈಲುಗಳಲ್ಲಿ ಪ್ರಯಾಣಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಶಿರೂರು ಗ್ರಾಮದ ಬಡ ಕುಟುಂಬದ ಈ ವಿದ್ಯಾರ್ಥಿಯ ಸಾವು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.