- Home
- Karnataka Districts
- ಬೆಂಗಳೂರು ಫುಟ್ಪಾತ್ ಕ್ಲೀನ್ ಅಪ್: ಒಂದೇ ದಿನ 13 KM ಒತ್ತುವರಿ ತೆರವು; ನೂರಾರು ಪೆಟ್ಟಿಅಂಗಡಿ, ತಳ್ಳುಗಾಡಿ ಎತ್ತಂಗಡಿ
ಬೆಂಗಳೂರು ಫುಟ್ಪಾತ್ ಕ್ಲೀನ್ ಅಪ್: ಒಂದೇ ದಿನ 13 KM ಒತ್ತುವರಿ ತೆರವು; ನೂರಾರು ಪೆಟ್ಟಿಅಂಗಡಿ, ತಳ್ಳುಗಾಡಿ ಎತ್ತಂಗಡಿ
ಬೆಂಗಳೂರು ಪೂರ್ವ ನಗರ ಪಾಲಿಕೆಯು ಪಾದಚಾರಿಗಳ ಸುರಕ್ಷತೆಗಾಗಿ ಬೃಹತ್ ಕಾರ್ಯಾಚರಣೆ ನಡೆಸಿದೆ. ಒಂದೇ ದಿನದಲ್ಲಿ ವೈಟ್ಫೀಲ್ಡ್, ಮಾರತಹಳ್ಳಿ ಸೇರಿದಂತೆ ಹಲವೆಡೆ 13.25 ಕಿ.ಮೀ ಉದ್ದದ ಫುಟ್ಪಾತ್ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಿ, ನೂರಾರು ಪೆಟ್ಟಿ ಅಂಗಡಿಗಳು ಮತ್ತು ಶೆಡ್ಗಳನ್ನು ತೆರವುಗೊಳಿಸಲಾಗಿದೆ.

ಬೆಂಗಳೂರು (ಜು.01): ಬೆಂಗಳೂರಿನ ನಿವಾಸಿಗಳಿಗೆ ಪಾದಚಾರಿ ಮಾರ್ಗಗಳಲ್ಲಿ ಸುಗಮ ಸಂಚಾರ ಕಲ್ಪಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಸಮರ ಸಾರಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬುಧವಾರ (ಜುಲೈ 01, 2026) ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಕೇವಲ ಒಂದೇ ದಿನದಲ್ಲಿ 13.25 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳನ್ನು ಅಕ್ರಮಗಳಿಂದ ಮುಕ್ತಗೊಳಿಸಲಾಗಿದೆ. ಇದರಲ್ಲಿ ನೂರಾರು ಪೆಟ್ಟಿ ಅಂಗಡಿಗಳು, ಶೆಡ್ಗಳು ಹಾಗೂ ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿದೆ ಮತ್ತಷ್ಟು ವಿವರ.
ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ
ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ಗಳನ್ನು ವ್ಯಾಪಾರಸ್ಥರು ಮತ್ತು ಕಟ್ಟಡ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ 'ಅಡೆತಡೆರಹಿತ ಪಾದಚಾರಿ ಮಾರ್ಗ' ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು ಎಂದು ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾರ್ಯಾಚರಣೆ? (ವಲಯವಾರು ವಿವರ)
ಪಾಲಿಕೆಯು ಎಂಟು ಪ್ರಮುಖ ವಿಭಾಗಗಳಲ್ಲಿ ಏಕಕಾಲಕ್ಕೆ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಹೈಡ್ರಾ ಯಂತ್ರಗಳೊಂದಿಗೆ ದಾಳಿ ನಡೆಸಿದೆ:
ವೈಟ್ಫೀಲ್ಡ್: ಹೋಪ್ ಫಾರಂ ಜಂಕ್ಷನ್ನಿಂದ ವರ್ತೂರು ಕೋಡಿವರೆಗೆ (1.5 ಕಿ.ಮೀ)
ಮಾರತಹಳ್ಳಿ: ಮಾರತಹಳ್ಳಿ ಜಂಕ್ಷನ್ನಿಂದ ಇಬ್ಬಲೂರು ಜಂಕ್ಷನ್ವರೆಗೆ (3.5 ಕಿ.ಮೀ)
ಕೆ.ಆರ್.ಪುರ: ಐಟಿಪಿಎಲ್ ಮುಖ್ಯರಸ್ತೆಯಿಂದ ದೇವಸಂದ್ರವರೆಗೆ (1 ಕಿ.ಮೀ)
ಹೊರಮಾವು: ಹೊರಮಾವು ಮುಖ್ಯ ರಸ್ತೆ (3 ಕಿ.ಮೀ)
ಎಚ್.ಎ.ಎಲ್: ಕೆ.ಆರ್.ಪುರ ಮೆಟ್ರೋದಿಂದ ಬೆನ್ನಿಗಾನಹಳ್ಳಿ ಮೆಟ್ರೋವರೆಗೆ (1.5 ಕಿ.ಮೀ)
ರಾಮಮೂರ್ತಿನಗರ: ಮುಖ್ಯ ರಸ್ತೆಯ 2 ಕಿ.ಮೀ ವ್ಯಾಪ್ತಿ.
ದೊಡ್ಡನೆಕ್ಕುಂದಿ ಹಾಗೂ ಕಾಡುಗೋಡಿ: ಐಟಿಪಿಎಲ್ ಮತ್ತು ಹೂಡಿ ವೃತ್ತದ ಸುತ್ತಮುತ್ತಲ ಪ್ರದೇಶಗಳು.
ತೆರವುಗೊಳಿಸಲಾದ ಒತ್ತುವರಿಗಳ ಪಟ್ಟಿ:
ಪೆಟ್ಟಿ ಶಾಪ್ಗಳು: 59
ತಳ್ಳುವ ಗಾಡಿಗಳು: 65
ಅಕ್ರಮ ತಡೆಗೋಡೆಗಳು: 38
ವಾಣಿಜ್ಯ ಮಳಿಗೆಗಳ ಮೆಟ್ಟಿಲು: 7
ಫ್ಲೆಕ್ಸ್ ಹಾಗೂ ಬ್ಯಾನರ್ಗಳು: 156
ಕ್ಯಾನೋಪಿ/ಶೆಡ್ಗಳು: 71
ತ್ಯಾಜ್ಯ ಮತ್ತು ಅವಶೇಷ: 25 ಟನ್ ಘನತ್ಯಾಜ್ಯ ಹಾಗೂ 80 ಟನ್ ಕಟ್ಟಡ ಅವಶೇಷಗಳನ್ನು (Debris) ಸ್ಥಳದಿಂದ ತೆರವುಗೊಳಿಸಲಾಗಿದೆ.
ಮತ್ತೆ ಒತ್ತುವರಿ ಮಾಡಿದರೆ ಕಠಿಣ ಶಿಕ್ಷೆ:
ಈ ಅಭಿಯಾನಕ್ಕಾಗಿ ಇಂಜಿನಿಯರಿಂಗ್, ಆರೋಗ್ಯ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್ ಇಲಾಖೆಗಳನ್ನು ಒಳಗೊಂಡ ವಿಶೇಷ ಜಂಟಿ ಕಾರ್ಯಪಡೆಯನ್ನು ರಚಿಸಲಾಗಿದೆ. ಪ್ರತಿ ವಿಭಾಗಕ್ಕೂ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಾರ್ಯಾಚರಣೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಆಯುಕ್ತರೇ ವಹಿಸಿಕೊಂಡಿದ್ದಾರೆ. ತೆರವುಗೊಳಿಸಲಾದ ಜಾಗವನ್ನು ಮತ್ತೆ ಒತ್ತುವರಿ ಮಾಡದಂತೆ ತಡೆಯಲು ಪಾಲಿಕೆಯ ಮಾರ್ಷಲ್ ತಂಡಗಳು ಹಗಲು-ರಾತ್ರಿ ಗಸ್ತು ತಿರುಗಲಿವೆ. ಮರು ಒತ್ತುವರಿ ಕಂಡುಬಂದಲ್ಲಿ ಭಾರಿ ಮೊತ್ತದ ದಂಡ ವಿಧಿಸುವುದಲ್ಲದೆ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಸಾರ್ವಜನಿಕರಲ್ಲಿ ಮನವಿ:
'ಪಾದಚಾರಿ ಮಾರ್ಗಗಳು ಸಾರ್ವಜನಿಕರ ಹಕ್ಕು. ಅಂಗಡಿ ಮಾಲೀಕರು ಮತ್ತು ಬೀದಿಬದಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆಯು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ' ಎಂದು ಡಿ.ಎಸ್. ರಮೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ನಿರ್ಧಾರದಿಂದಾಗಿ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಪ್ರಮುಖ ರಸ್ತೆಗಳು ಈಗ ಪಾದಚಾರಿಗಳಿಗೆ ನಿರಾಳವಾಗಿವೆ.

